ಬೆಂಗಳೂರಿನಲ್ಲಿ 24 ತಾಸಿನಲ್ಲಿ ಮೂರು ಶೂಟೌಟ್!
ಬೆಂಗಳೂರು, ಜನವರಿ 19: ಪಾತಕಿಗಳ ಸದ್ದು ಅಡಗಿಸಲು ಬೆಂಗಳೂರು ಪೊಲೀಸರು ಬುಲೆಟ್ ಮೊರೆ ಹೋಗಿದ್ದಾರೆ. ಕಳೆದ 24 ತಾಸಿನಲ್ಲಿ ಬೆಂಗಳೂರಿನಲ್ಲಿ ಮೂರು ಶ್ಯೂಟೌಟ್ ಗಳು ವರದಿಯಾಗಿವೆ. ಸೋಮವಾರ ಬೆಳಗ್ಗೆ ಎರಡು ಶ್ಯೂಟೌಟ್ ಗಳು ಬೆಂಗಳೂರಿನಲ್ಲಿ ವರದಿಯಾದ ಬೆನ್ನಲ್ಲೇ ಮಂಗಳವಾರ ಬೆಳಗಿನ ಜಾವ ಪೀಣ್ಯ ಪೊಲೀಸರು ಕ್ರಿಮಿನಲ್ ಕಾಲಿಗೆ ಬುಲೆಟ್ ಇಳಿಸಿದ್ದಾರೆ !
ಸೋಮವಾರ ಗಿರಿನಗರ ಪೊಲೀಸರು ರೌಡಿ ಶೀಟರ್ ಗೊಣ್ಣೆ ವಿಜಿ ಕಾಲಿಗೆ ಗುಂಡು ಇಳಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ, ಕೆ.ಜಿ. ಹಳ್ಳಿ ಪೊಲೀಸರು ಉತ್ತರ ಪ್ರದೇಶ ಮೂಲದ ಕಿರಾತಕನ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೀಣ್ಯಾ ಪೊಲೀಸರ ಬುಲೆಟ್ ಸದ್ದು: ಮತ್ತೊಬ್ಬ ಪಾತಕಿ ಕಾಲಿಗೆ ಗುಂಡು
ಪೊಲೀಸರ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಉತ್ತರ ಪ್ರದೇಶ ಮೂಲದ ಕ್ರಿಮಿನಲ್ ಮೇಲೆ ಪೊಲೀಸರು ಪ್ರತಿ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿಗಳಲ್ಲಿ ಒಬ್ಬ ಗುಂಡು ಹಾರಿಸಲು ಯತ್ನಿಸಿದ್ದು, ಮತ್ತೊಬ್ಬ ಡ್ರಾಗರ್ ನಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಕೆ.ಜಿ. ಹಳ್ಳಿ ಸಹಾಯಕ ಸಬ್ ಇನ್ಸ್ಪೆಕ್ಟರ್ ದಿನೇಶ್ ಶೆಟ್ಟಿ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆ ದರೋಡೆ, ಸುಲಿಗೆ, ಕಳ್ಳತನ ಸೇರಿದಂತೆ ಸುಮಾರು ಮೂವತ್ತೈದಕ್ಕೂ ಹೆಚ್ಚು ಪ್ರಕರಣಲ್ಲಿ ಬೇಕಾಗಿರುವ ಉತ್ತರ ಪ್ರದೇಶ ಮೂಲದ ಮೆಹರಾಜ್ ಗುಂಡೇಟು ತಿಂದ ಆರೋಪಿ. ಈತನ ಸಹಚರ, ಅಬ್ರಾಹರ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಗಿದ್ದಾರೆ. ಗುಂಡಿನ ದಾಳಿ ವೇಳೆ ಆರೋಪಿ ಡ್ರಾಗರ್ ನಿಂದ ದಾಳಿ ನಡೆಸಿದ್ದು, ಸಹಾಯಕ ಸಬ್ ಇನ್ಸ್ಪೆಕ್ಟರ್ ದಿನೇಶ್ ಶೆಟ್ಟಿ ಅವರ ಕೈಗೆ ಗಾಯವಾಗಿದೆ.
ಉತ್ತರ ಪ್ರದೇಶ ಮೂಲದ ಮೆಹರಾಜ್ ಸಂಬಂಧಿಕರು ಬೆಂಗಳೂರಿನಲ್ಲಿ ನೆಲೆಸಿದ್ದು, ಈತ ಸಹ ಅಲ್ಲಿಯೇ ತಂಗಿದ್ದ. ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಈ ಹಿಂದೆ ನಂದಿನಿ ಲೇಔಟ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಕೋಲಾರಿನಲ್ಲೂ ಸಹ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ. ಹಲವು ಪ್ರಕರಣದಲ್ಲಿ ಬೇಕಾಗಿದ್ದ ಈತ ಚಿಕ್ಕ ಅಪಾರ್ಟ್ ಮೆಂಟ್ ನಲ್ಲಿ ತಂಗಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಮೇರೆಗೆ ದಿನೇಶ್ ಶೆಟ್ಟಿ ಮತ್ತು ತಂಡ ಪುಟ್ಟೇನಹಳ್ಳಿ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ಇರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ನಡೆಸಿದಾಗ ಮೆಹರಾಜ್ ದಾಳಿ ಮಾಡಿದ್ದಾನೆ. ಈ ವೇಳೆ ದಿನೇಶ್ ಶೆಟ್ಟಿ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Recommended Video
ಸಿಸಿಬಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸಿದ್ದ ದಿನೇಶ್ ಶೆಟ್ಟಿ ರೌಡಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು ! ಮಿಗಿಲಾಗಿ ಭಯೋತ್ಪಾದಕ ನಿಗ್ರಹ ದಳದಲ್ಲಿ ಕಾರ್ಯ ನಿರ್ವಹಿಸುವ ವೇಳೆ ಬೆಂಗಳೂರಿನಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣಗಳಲ್ಲಿ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಕೆ.ಜಿ. ಹಳ್ಳಿಯಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಾಮಾನ್ಯವಾಗಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಗೆ ಸರ್ವೀಸ್ ಪಿಸ್ತೂಲು ಕೊಡುವುದಿಲ್ಲ. ಆದರೆ ದಿನೇಶ್ ಶೆಟ್ಟಿ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದಾಗಲೇ ಅವರಿಗೆ ಸರ್ವೀಸ್ ಪಿಸ್ತೂಲು ನೀಡಲಾಗಿತ್ತು. ಸಿಸಿಬಿಯಲ್ಲಿ ಕಾರ್ಯ ನಿರ್ವಹಿಸುವಾಗ ರೌಡಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಭಯೋತ್ಪಾದಕ ನಿಗ್ರಹ ದಳದಲ್ಲಿ ಕೆಲಸ ನಿರ್ವಹಿಸುವ ವೇಳೆ, ಸರಣಿ ಬಾಂಬ್ ಬ್ಲಾಸ್ಟ್, ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್ ನ ಆರೋಪಿಗಳನ್ನು ಬಂಧಿಸುವ ವೇಳೆ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಆಗಿನಿಂದಲೇ ದಿನೇಶ್ ಶೆಟ್ಟಿ ಜೀವ ರಕ್ಷಣೆಗೆ ಪೊಲೀಸ್ ಇಲಾಖೆ ಸರ್ವೀಸ್ ಪಿಸ್ತೂಲು ನೀಡಿದೆ.