ಸಂಪುಟಕ್ಕೆ ಲಿಂಬಾವಳಿ: ಬೆಂಗಳೂರು ಉಸ್ತುವಾರಿಗೆ ತ್ರಿಕೋನ ಸ್ಪರ್ಧೆ, ಸಿಎಂ ಒಲವು ಯಾರತ್ತ?
ಬೆಂಗಳೂರು, ಜ 15: ಹಲವು ಅಪಸ್ವರಗಳ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪುಟ ವಿಸ್ತರಣೆಯನ್ನು ಮಾಡಿದ್ದಾರೆ. ಒಟ್ಟಾರೆಯಾಗಿ, ಈ ವಿಸ್ತರಣೆಯ ನಂತರ ಬೆಂಗಳೂರು ನಗರಕ್ಕೆ ಸಿಂಹಪಾಲು ಸಿಕ್ಕಿದೆ.
ಇಷ್ಟುದಿನ ಸಚಿವರಾಗಿಲ್ಲ ಎಂದು ದಂಬಾಲು ಬೀಳುತ್ತಿದ್ದವರು, ಈಗ, ಸಚಿವರಾದ ಮೇಲೆ ಆಯಕಟ್ಟಿನ ಹುದ್ದೆ ಬೇಕೆಂದು ಮುಖ್ಯಮಂತ್ರಿಗಳಿಗೆ ನೂತನ ಸಚಿವರು ಒತ್ತಡ ಹೇರಲಾರಂಭಿಸಿದ್ದಾರೆ ಎನ್ನುವ ಮಾಹಿತಿಯಿದೆ.
ಬಿಎಸ್ವೈ ಸಂಪುಟ ವಿಸ್ತರಣೆ: ಪ್ರಾತಿನಿಧ್ಯವೇ ಇಲ್ಲದಂತಾದ 12 ಜಿಲ್ಲೆಗಳು
ಇನ್ನೊಂದು ಕಡೆ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಎಚ್.ವಿಶ್ವನಾಥ್, ಈ ಇಬ್ಬರೂ ಮುಖ್ಯಮಂತ್ರಿ ಮತ್ತು ಅವರ ಪುತ್ರ ವಿಜಯೇಂದ್ರನ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ. "ಯಡಿಯೂರಪ್ಪ ವಚನಭ್ರಷ್ಟ ಮತ್ತು ಅವರ ಪುತ್ರ ವಿಜಯೇಂದ್ರ ದಾರಿ ತಪ್ಪಿದ ಮಗ"ಎಂದು ವಿಶ್ವನಾಥ್ ಲೇವಡಿ ಮಾಡಿದ್ದಾರೆ.
ಬಿಎಸ್ವೈ ಸಂಪುಟ ವಿಸ್ತರಣೆಯ ನಂತರ ಯಾವ ಜಾತಿಗೆ ಎಷ್ಟು ಪ್ರಾತಿನಿಧ್ಯ?ಇಲ್ಲಿದೆ ಪಟ್ಟಿ
ಎಲ್ಲಾ ಸಚಿವರಿಗೂ ಒಂದು ಕಣ್ಣು ಬೆಂಗಳೂರು ಉಸ್ತುವಾರಿಯ ಮೇಲೆ. ಬೆಂಗಳೂರು ನಗರ ಪ್ರತಿನಿಧಿಸುವ ಹಲವರು ಬಿಎಸ್ವೈ ಸಂಪುಟದಲ್ಲಿದ್ದರೂ, ಮೂವರ ನಡುವೆ ಈ ಹುದ್ದೆಗೆ ಸ್ಪರ್ಧೆ ಏರ್ಪಟ್ಟಿದೆ.
ಬಿಬಿಎಂಪಿ ಚುನಾವಣೆ
ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬೆಂಗಳೂರು ಉಸ್ತುವಾರಿ ಹುದ್ದೆಯ ಮೇಲೆ ಮೂವರು ಪ್ರಬಾವೀ ಸಚಿವರ ಕಣ್ಣಿದೆ. ಈ ಹಿಂದೆಯೂ ಈ ಹುದ್ದೆಯ ವಿಚಾರದಲ್ಲಿ ಮನಸ್ತಾಪ ಆರಂಭವಾಗಿದ್ದರಿಂದ, ರಿಸ್ಕ್ ತೆಗೆದುಕೊಳ್ಳದ ಸಿಎಂ ಯಡಿಯೂರಪ್ಪ ಆ ಹುದ್ದೆಯನ್ನು ತನ್ನಲ್ಲೇ ಉಳಿಸಿಕೊಂಡಿದ್ದರು.
ಮಹದೇವಪುರದ ಶಾಸಕ ಅರವಿಂದ ಲಿಂಬಾವಳಿ
ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಏಳು ಸಚಿವರಿಗೆ ಖಾತೆಯನ್ನು ಇನ್ನೂ ಹಂಚಬೇಕಷ್ಟೇ. ಸಂಕ್ರಾಂತಿ ಹಬ್ಬ ಇದ್ದಿದ್ದರಿಂದ ಒಂದೆರಡು ದಿನದಲ್ಲಿ ಖಾತೆ ಹಂಚಿಕೆಯಾಗಬಹುದು. ಬೆಂಗಳೂರು ಉಸ್ತುವಾರಿಯನ್ನು ಮಹದೇವಪುರದ ಶಾಸಕ ಅರವಿಂದ ಲಿಂಬಾವಳಿಗೆ ನೀಡಲು ಸಿಎಂ ಉತ್ಸುಕರಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಆರ್.ಅಶೋಕ್ ಮತ್ತು ಡಿಸಿಎಂ ಡಾ.ಅಶ್ವಥ್ ನಾರಾಯಣ್
ಲಿಂಬಾವಳಿಗೆ ಈ ಸ್ಥಾನ ಸಿಗಬಹುದು ಎನ್ನುವದನ್ನು ಅರಿತ ಕಂದಾಯ ಸಚಿವ ಆರ್.ಅಶೋಕ್ ಮತ್ತು ಡಿಸಿಎಂ ಡಾ.ಅಶ್ವಥ್ ನಾರಾಯಣ್, ಈ ಹುದ್ದೆಯನ್ನು ಪಡೆಯಲು ಒತ್ತಡ ಹೇರಲಾರಂಭಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಳೆದ ಬಾರಿಯೂ ಅಶೋಕ್ ಮತ್ತು ಅಶ್ವಥ್ ನಾರಾಯಣ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.
Recommended Video
ಮುಖ್ಯಮಂತ್ರಿಗಳು ತಮ್ಮಲ್ಲೇ ಈ ಹುದ್ದೆಯನ್ನು ಉಳಿಸಿಕೊಳ್ಳಬಹುದು
ಚುನಾವಣೆ ಹತ್ತಿರವಾಗುತ್ತಿರುವುದರಿಂದ ಲಿಂಬಾವಳಿ, ಅಶೋಕ್ ಮತ್ತು ಅಶ್ವಥ್ ನಾರಾಯಣ್, ಈ ಮೂವರಲ್ಲಿ ಒಬ್ಬರಿಗೆ ಬೆಂಗಳೂರು ಉಸ್ತುವಾರಿ ಸಿಗಬಹುದು. ಆದರೆ, ಈ ಮೂವರು ಈ ಹುದ್ದೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು, ಅದರಿಂದ ಸಂಪುಟದಲ್ಲಿ ಅಸಮಾಧಾನ ತೀವ್ರಗೊಂಡರೆ, ಮುಖ್ಯಮಂತ್ರಿಗಳು ತಮ್ಮಲ್ಲೇ ಈ ಹುದ್ದೆಯನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.