ಮೂರು ಪುಸ್ತಕ ಬಿಡುಗಡೆ, ಉಳಿದ ವಿವರ ಇಲ್ಲಿ ಲಭ್ಯ!
ಬೆಂಗಳೂರು, ಸೆಪ್ಟೆಂಬರ್ 22 : ಭಾನುವಾರ ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿರಲಿಲ್ಲವೆಂದರೆ, ಪುಸ್ತಕ ಪ್ರೇಮಿಗಳು ಏನೋ ಕಳೆದುಕೊಂಡವರಂತೆ ಚಟಪಡಿಸುತ್ತಾರೆ. ಇದ್ದರಂತೂ ಇದ್ದಬದ್ದ ಎಲ್ಲ ಕೆಲಸವನ್ನೂ ಬಿಟ್ಟು ಜುಬ್ಬಾ, ಜೀನ್ಸ್ ಏರಿಸಿಕೊಂಡು ನಗುಮೊಗದಿಂದ ಫೋಟೋಗೆ ಹಾಜರ್.
ಪುಸ್ತಕ ಲೋಕಾರ್ಪಣೆಗೊಳ್ಳುವ ಅರ್ಧಗಂಟೆ ಮೊದಲೇ ಉಪ್ಪಿಟ್ಟು ಕೇಸರಿಭಾತ್, ಬಿಸಿಬಿಸಿ ಕಾಫಿ ಸ್ವಾಗತ ಕೋರಿರುತ್ತವೆ. ಕನ್ನಡ ಪುಸ್ತಕ ಕೊಳ್ಳುವವರಿಗೆ ಅದೊಂದು ರೀತಿ ಪುಸಲಾಯಿಸಿದ ರೀತಿಯದು. ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಗುರುತು ಪರಿಚಯವಿರುವವರ ಉಭಯ ಕುಶಲೋಪರಿ ಕೇಳುವ ಪರಿ ಕ್ಯಾಮೆರಾ ಕಣ್ಣುಗಳ ಮೂಲಕ ನೋಡುವುದಕ್ಕೆ ಚೆಂದ.
ಇಂಥದೊಂದು ಸಂದರ್ಭವನ್ನು ಇದೇ ಭಾನುವಾರ, ಸೆಪ್ಟೆಂಬರ್ 24ರಂದು ಕಲ್ಪಿಸಿಕೊಡಲಿದೆ ಬಸವನಗುಡಿಯ ಬಿಪಿ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ. ಸರಿಯಾಗಿ 10ಕ್ಕೆ ಕಾರ್ಯಕ್ರಮ ಆರಂಭ, ಉಪಾಹಾರ 9.30ಕ್ಕೆ. ಒಟ್ಟು ಮೂರು ಹೊತ್ತಗೆಗಳು ಕನ್ನಡ ಪುಸ್ತಕ ಪ್ರೇಮಿಗಳ ಕೈಸೇರಲಿವೆ.
ಒಂದು, ಬೆಂಗಳೂರು ನಗರವನ್ನೇ ಕೇಂದ್ರವಾಗಿಟ್ಟುಕೊಂಡು ಜೋಗಿಯವರು ಬರೆಯುತ್ತಿರುವ ಕಥಾಸರಣಿಯ ಮೂರನೇ ಸಂಕಲನ 'ಉಳಿದ ವಿವರಗಳು ಲಭ್ಯವಿಲ್ಲ'. ಎರಡನೇಯದು, ಅನಿವಾಸಿ ಭಾರತೀಯ ಡಾ. ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ 'ಹಿಜಾಬ್'. ಮೂರನೇಯದು, ಗೋಪಾಲಕೃಷ್ಣ ಕುಂಟನಿ ಅವರ ಕಥಾಸಂಕಲನ 'ಅಪ್ಪನ ನೀಲಿಕಣ್ಣು'.
ಪುಸ್ತಕ ಪ್ರೇಮಿಗಳನ್ನು ಸೆಳೆಯಲು ಇಷ್ಟು ಸಾಕಲ್ಲವೆ? ಇಷ್ಟು ಮಾತ್ರವಲ್ಲ, ಕವಿ ಲಕ್ಷ್ಮೀಶ ತೊಳ್ಪಾಡಿ ಅವರಿಂದ ಉಪ'ಸಂಹಾರ' ವಿಶೇಷ ಉಪನ್ಯಾಸವಿದೆ. ಮುಖ್ಯ ಅತಿಥಿಗಳಾಗಿ ಸಿನೆಮಾ/ಕಿರುತೆರೆ ನಿರ್ದೇಶಕ ಟಿಎನ್ ಸೀತಾರಾಮ್, ಹಿರಿಯ ಪತ್ರಕರ್ತ ಕೆ ಸತ್ಯನಾರಾಯಣ ಮತ್ತು ಸಿನೆಮಾ ನಿರ್ದೇಶಕ ಬಿಎಸ್ ಲಿಂಗದೇವರು ಅವರು ಭಾಗವಹಿಸುತ್ತಿದ್ದಾರೆ.
ಇನ್ನೊಂದು ದೊಡ್ಡ ಅಚ್ಚರಿಯೇನೆಂದರೆ, ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ರಾಜಕೀಯ ಚಟುವಟಿಕೆಗಳನ್ನೆಲ್ಲ ಬದಿಗಿಟ್ಟು ಬರುತ್ತಿದ್ದಾರೆ ಎಂದು ಜೋಗಿಯವರು ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದ್ದಾರೆ. ಬ್ಯಾಂಕಾಕ್ ಶೂಟಿಂಗ್ ಕ್ಯಾನ್ಸಲ್ ಆಗಿದ್ದರಿಂದ ಅವರು ಬರುವುದಕ್ಕೆ ಒಪ್ಪಿಕೊಂಡಿದ್ದಾರೆ. ಜೊತೆಗೆ ವಿನಯ್ ಸಜ್ಜನರ್ ಎಂಬುವವರು ಫೇಸ್ ಬುಕ್ ಲೈವ್ ಕೂಡ ಮಾಡಲಿದ್ದಾರಂತೆ! ಕುಳಿತುಕೊಳ್ಳಲು ಕುರ್ಚಿ ಸಿಗಬೇಕಿದ್ದರೆ ಆದಷ್ಟು ಬೇಗನೆ ಬರುವುದು ಒಳಿತು.
ಅಂಕಿತ ಪುಸ್ತಕ ಪ್ರಕಾಶನ ಈ ಎಲ್ಲ ಮೂರು ಪುಸ್ತಕಗಳನ್ನು ಪ್ರಕಟಿಸಿದೆ. ಬಹುದಿನಗಳ ನಂತರ ಸಿಗುವ ಸ್ನೇಹಿತರೊಂದಿಗೆ ಪಟ್ಟಾಂಗ ಹೊಡೆಯಲು, ಹೊಸಬರನ್ನು ಪರಿಚಯ ಮಾಡಿಕೊಳ್ಳಲು, ಉಪನ್ಯಾಸ ಕೇಳಲು, ಜೊತೆಗೆ ಒಂದಿಷ್ಟು ಪುಸ್ತಕಗಳನ್ನು ಕೊಳ್ಳಲು ಇಚ್ಛಿಸುವವರು ಕಾರ್ಯಕ್ರಮಕ್ಕೆ ಬರಬಹುದು.