ಬೆಂಗಳೂರಲ್ಲಿ ಮೂರು ಕಳ್ಳರಿಂದ 26 ಲಕ್ಷ ರು.ವಶ
ಬೆಂಗಳೂರು, ಜೂ.4: ರಾತ್ರಿ ವೇಳೆಯಲ್ಲಿ ಮನೆಗಳ ಬೀಗ ಮುರಿದು ಚಿನ್ನಾಭರಣ ಹಾಗೂ ಕಾರುಗಳ ಕಳ್ಳತನ ಮಾಡುತ್ತಿದ್ದ ಮೂವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ಗ್ರಾಮದ ಸೂಸೈರಾಜ(26),ದೇವನಹಳ್ಳಿ ತಾಲೂಕಿನ ವಿಜಯಪುರದ ಸೈಯದ್ ಪೀರ್(22),ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ಗ್ರಾಮದ ಮಹೇಂದ್ರ(26) ಬಂಧಿತ ಆರೋಪಿಗಳು. ಬಂಧಿತರಿಂದ 26 ಲಕ್ಷ ಬೆಲೆ ಬಾಳುವ 300 ಗ್ರಾಂನ ಚಿನ್ನದ ಆಭರಣ, 3 ಕೆ.ಜಿ ಬೆಳ್ಳಿ ಸಾಮಾನುಗಳು, ಒಂದು ಮಾರುತಿ ಸ್ವಿಫ್ಟ್ ಡಿಝೈರ್ ಕಾರ್, ಎರಡು ದ್ವಿಚಕ್ರ ವಾಹನ, 6 ಲ್ಯಾಪ್ಟಾಪ್, 4 ಕ್ಯಾಮೆರಾಗಳು, 8 ಮೊಬೈಲ್ಫೋನ್ಗಳು, 1 ಐಪಾಡ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾತ್ರಿ ವೇಳೆಯಲ್ಲಿ ಮನೆಗಳ ಬೀಗ ಮುರಿದು ಚಿನ್ನಾಭರಣ ಹಾಗೂ ಕಾರುಗಳ ಕಳ್ಳತನ ಪ್ರಕರಣಗಳ ಬಗ್ಗೆ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವೀಶ್.ಸಿ.ಆರ್, ರವರ ನೇತೃತ್ವದಲ್ಲಿ ಪಿ.ಎಸ್.ಐ ಇಮ್ತಿಯಾಜ್ ಪಟೇಲ್, ಸೂರ್ಯಪ್ರಸಾದ್.ಎಸ್, ಸುನಿಲ್ ಕುಮಾರ್,ಎಂ. ಎ.ಎಸ್.ಐ ಶ್ರೀ ಪ್ರಭುಲಿಂಗ ಮೂರ್ತಿ ಹಾಗೂ ಸಿಬ್ಬಂದಿಗಳಾದ ಉಪೇಂದ್ರಗೌಡ, ಶಿವಬಸ್ಸಪ್ಪ, ಜಗದೀಶ್, ರಾಮಚಂದ್ರ, ಬಸವರಾಜ ಲಮಾಣಿ, ವೆಂಕಟೇಶ, ರಮೇಶ ಕುಂಟಾಳ, ಈರಣ್ಣ, ಜನಾರ್ಧನ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ವಿಶೇಷ ತನಿಖಾ ತಂಡವು ಮಾಹಿತಿಯನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.