ಮುಸ್ಲಿಮರ ದೇಶ ಭಕ್ತಿ, ಅಭಿಮಾನವನ್ನು ಪರೀಕ್ಷೆಗೆ ಒಡ್ಡಲಾಗುತ್ತಿದೆ
ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ದೇಶ ಭಕ್ತಿಯನ್ನು ಪರೀಕ್ಷೆಗೆ ಒಡ್ಡಲಾಗುತ್ತಿದೆ. ಪರಸ್ಪರರ ಮೇಲೆ ನಂಬುಗೆ ಇರಲೇಬೇಕು. ನಮ್ಮ ನಡಿಗೆ ಆ ಕಡೆಗೆ ಇರಬೇಕು ಎಂದು ಕರವೇ ನಲ್ನುಡಿ ಸಂಪಾದಕರಾದ ಎಸ್.ಸಿ.ದಿನೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು, ಆ 15: ನಮ್ಮ ಮುಂದೆ ಇವತ್ತು ಎರಡು ಬಗೆಯ ರಾಷ್ಟ್ರೀಯತೆಯ ಆಯ್ಕೆ ಇದೆ. ಗೋಲ್ವಾಲ್ಕರ್ ಹೇಳುವ 'ಬಂಚ್ ಆಫ್ ಥಾಟ್ಸ್' ನ ರಾಷ್ಟ್ರೀಯತೆ ಒಂದಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಕೊಟ್ಟ ರಾಷ್ಟ್ರೀಯತೆ ಇನ್ನೊಂದು ಎಂದು ಕರವೇ ನಲ್ನುಡಿ ಸಂಪಾದಕರಾದ ಎಸ್.ಸಿ.ದಿನೇಶ್ ಕುಮಾರ್ ಹೇಳಿದರು.
ನಮ್ಮ ಆಯ್ಕೆ ಅಂಬೇಡ್ಕರ್ ರಾಷ್ಟ್ರೀಯತೆಯೇ ಆಗಿರಬೇಕು. ಯಾಕೆಂದರೆ ಅದೊಂದೇ ನಮ್ಮನ್ನು, ಈ ದೇಶವನ್ನು ಉಳಿಸಲು ಸಾಧ್ಯ. ನಾವು ಜಗತ್ತಿನ ಸೂಪರ್ ಪವರ್ ಆಗದೇ ಇದ್ದರೂ ಪರವಾಗಿಲ್ಲ. ಸೌಹಾರ್ದ ಉಳಿಯಬೇಕು, ಸಹಬಾಳ್ವೆ ಉಳಿಯಬೇಕು.
ಕೋಮುವಾದ ಆತಂಕಕಾರಿ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ
ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ದೇಶ ಭಕ್ತಿಯನ್ನು ಪರೀಕ್ಷೆಗೆ ಒಡ್ಡಲಾಗುತ್ತಿದೆ. ಪರಸ್ಪರರ ಮೇಲೆ ನಂಬುಗೆ ಇರಲೇಬೇಕು. ನಮ್ಮ ನಡಿಗೆ ಆ ಕಡೆಗೆ ಇರಬೇಕು ಎಂದು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಸಂಚಾಲಕರೂ ಆಗಿರುವ ಎಸ್.ಸಿ .ದಿನೇಶ್ ಕುಮಾರ್ ಹೇಳಿದರು.
71ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗಾರದ ಮತ್ತಿಕೆರೆ ಮಸೀದಿ ಆವರಣದಲ್ಲಿ ಮಸ್ಜಿದ್-ಎ-ತಾಹಾ ಮತ್ತು ಅಖಿಲ ಮಹಮದೀಯರ ಕನ್ನಡ ವೇದಿಕೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದ ದಿನೇಶ್, ಮಸ್ಜಿದ್ -ಎ -ತಾಹ ಏರ್ಪಡಿಸಿರುವ ಸ್ವಾತಂತ್ರ್ಯೋತ್ಸವ ಅತ್ಯಂತ ಮಹತ್ವದ್ದು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ದೇಶಭಕ್ತಿಯನ್ನು ಪರೀಕ್ಷೆಗೆ ಒಡ್ಡಲಾಗುತ್ತಿದೆ. ನಿಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಿ ಎಂಬ ಒತ್ತಡವನ್ನು ನಿರ್ಮಿಸಲಾಗುತ್ತಿದೆ.
ಆದರೆ ಈ ಮಸೀದಿ ಇಂಥ ಒತ್ತಡಗಳು ಇಲ್ಲದೇ ಇದ್ದಾಗಲೂ ಅಂದರೆ ಇಪ್ಪತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತ ಬಂದಿದೆ ತೋರಿಕೆಗೆ, ಪ್ರದರ್ಶನಕ್ಕೆ ಇದನ್ನು ಆಚರಿಸುತ್ತಿಲ್ಲ, ಅಥವಾ ಇನ್ಯಾರದೋ ಅಪ್ಪಣೆಗೆ, ಆದೇಶಕ್ಕೆ ಒಳಗಾಗಿ ಇದನ್ನು ಮಾಡುತ್ತಿಲ್ಲ. ಹೃದಯದಿಂದ ಆಚರಿಸಲಾಗುತ್ತಿದೆ, ಇದೇ ವಿಶೇಷ ಎಂದು ದಿನೇಶ್ ಕುಮಾರ್ ಹೇಳಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಮುಸ್ಲಿಮರು ಬಲಿದಾನ ಮಾಡಿದ್ದಾರೆ. ಲಕ್ಷಾಂತರ ಮಂದಿ ದೇಶಕ್ಕಾಗಿ ಹೋರಾಡಿದ್ದಾರೆ. ಮುಸ್ಲಿಮರು ಈ ನೆಲವನ್ನು ಹಿಂದೆಯೂ ಪ್ರೀತಿಸುತ್ತಾರೆ, ಈಗಲೂ ಪ್ರೀತಿಸುತ್ತಾರೆ ಎನ್ನುವುದಕ್ಕೆ ಇದು ಒಂದು ಸಾಕ್ಷಿ ಎಂದು ಅವರು ಹೇಳಿದರು.
ಏಕ್ ದೇಶ್, ದೋ ವಿಧಾನ್, ದೋ ಪ್ರಧಾನ್ ನಹೀಂ ಚಲೇಂಗೇ ನಹೀ ಚಲೇಂಗೇ... ಈ ಘೋಷಣೆ ಕೇಳೋದಕ್ಕೆ ಚೆನ್ನಾಗಿದೆ. ಆದರೆ ದೇಶದ ಬಹುತ್ವದ ವಿರೋಧಿ ಘೋಷಣೆ ಇದು. ಎಲ್ಲದರಲ್ಲೂ ಏಕತ್ವ ತರುವುದು ಈ ವಿಚಾರಧಾರೆಯ ಉದ್ದೇಶ.
1942ರಲ್ಲಿ ಭಾರತ್ ಛೋಡೋ, ಇಂದು ಭಾರತ್ ಜೋಡೋ, ಮೋದಿ
ಇದನ್ನೇ ಹಲವರು ಹಿಂದಿ, ಹಿಂದೂ, ಹಿಂದೂಸ್ತಾನ್ ಎನ್ನುತ್ತಾರೆ. ನಾವು ಈ ತರ್ಕವನ್ನ ತಿರಸ್ಕರಿಸಬೇಕು. ದೇಶದ ಸೌಂದರ್ಯ ಇರೋದೇ ಬಹುತ್ವದಲ್ಲಿ. ಹಲವು ರಾಜ್ಯಗಳು, ಹಲವು ಧರ್ಮಗಳು, ಹಲವು ಸಂಸ್ಕೃತಿ, ಹಲವು ಭಾಷೆಗಳು... ಈ ಹಲವುಗಳು ಇದ್ದರೇನೇ ದೇಶ ಒಂದಾಗಿ ಇರಲು ಸಾಧ್ಯ.
ಏಕ್ ದೇಶ್, ಬಹುವಿಧಾನ್, ಬಹುಪ್ರಧಾನ್ ಆಗದೇ ಹೋದರೆ ಈ ದೇಶ ಮಹಾನ್ ಆಗಲು ಸಾಧ್ಯವಿಲ್ಲ. ದೇಶವನ್ನು ಇಂದು ಧರ್ಮದ ಹೆಸರಿನಲ್ಲಿ ಒಡೆಯಲಾಗುತ್ತಿದೆ. ಬಹುತ್ವವನ್ನು ನಾಶಪಡಿಸುವ ಕೆಲಸಗಳು ಮೇಲಿಂದ ಮೇಲೆ ನಡೆಯುತ್ತಿವೆ ಎಂದು ಅವರು ನುಡಿದರು.
ದೇಶ ಮಾತ್ರವಲ್ಲ, ಇಡೀ ಜಗತ್ತೇ ಬಲಪಂಥೀಯ ಶಕ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದೆ. ಎಲ್ಲರ ದೊಡ್ಡಣ್ಣನಾಗಿ ಅಮೆರಿಕದಲ್ಲಿ ಟ್ರಂಪ್ ಬಂದು ಕುಳಿತಿದ್ದಾನೆ. ಇತ್ತ ನಮ್ಮ ದೇಶದಲ್ಲಿ ನಾಗರಿಕರು ಉಣ್ಣುವ ತಟ್ಟೆಯಲ್ಲಿ ಏನಿದೆಯೆಂದು ಬಗ್ಗಿನೋಡಲಾಗುತ್ತಿದೆ.
ಒಂದು ದೊಡ್ಡ ಸಮುದಾಯವನ್ನು ಅನುಮಾನಿಸಿ, ಅಪಮಾನಿಸಿ ಮೂಲೆಗೆ ತಳ್ಳುವುದರ ಅಪಾಯ ಏನೆಂಬುದು ಇವರಿಗೆ ಅರ್ಥವಾಗುತ್ತಿಲ್ಲ. ಇದೆಲ್ಲದರ ನಡುವೆಯೂ ನಾವು ಈ ದೇಶವನ್ನು ಉಳಿಸಿಕೊಳ್ಳಬೇಕಿದೆ. ಇದು ಎಲ್ಲರ ನಾಡು. ಯಾರೂ ಇಲ್ಲಿ ಎರಡನೇ ದರ್ಜೆ ಪ್ರಜೆಗಳಲ್ಲ ಎಂದು ದಿನೇಶ್ ಕಾರ್ಯಕ್ರಮದಲ್ಲಿ ಹೇಳಿದರು.
ಮಳೆಯ ನಡುವೆಯೇ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮಸ್ಜೀದ್ ಕೌನ್ಸಿಲ್ ಅಧ್ಯಕ್ಷ ಅಲಿ ಜನಾಬ್ ಮಹಮದ್ ಸಮೀ ಉಲ್ಲಾ ವಹಿಸಿದ್ದರು ಮಸ್ಜಿದ್ ಎ ತಾಹಾ ಅಧ್ಯಕ್ಷ ಹಾರೂನ್ ರಶೀದ್, ಮಾಜಿ ಅಧ್ಯಕ್ಷ ಜೈನುಲ್ ಅಬ್ದೀನ್, ಪ್ರಧಾನ ಕಾರ್ಯದರ್ಶಿ ಷಹಜಹಾನ್, ಅಬ್ದುಲ್ ಕಲಾಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ನಜೀರ್, ಸ್ಥಳೀಯ ಮುಖಂಡರಾದ ಸುನಂದಮ್ಮ, ಸೋಮಣ್ಣ, ಎನ್ ರಾಜ, ದಸ್ತಗಿರ್, ಮುನಾಫ್, ನಯಾಜ್, ಸಾಗರ್ ಸಮೀ ಉಲ್ಲಾ ಮೊದಲಾದವರು ಪಾಲ್ಗೊಂಡಿದ್ದರು.
ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ರಾಜ್ಯಾಧ್ಯಕ್ಷ ಸಮೀ ಉಲ್ಲಾ ಖಾನ್ ನೇತೃತ್ವ ವಹಿಸಿದ್ದರು.