ನಿನ್ನೆ ರಾತ್ರಿ ನಡೆದ ಗಲಭೆಯ ಕಾರಣ ಹೇಳಿದ ಸಚಿವ ಅಶೊಕ್
ಬೆಂಗಳೂರು, ಆ. 12: ನಿನ್ನೆ ದೊಂಬಿ ಮಾಡಿದವರು ಬೆಂಗಳೂರಿನವರಲ್ಲ, ಅವರು ಯಾವ ಬಿಲದಲ್ಲಿಯೇ ಅಡಗಿದ್ದರೂ ಹೆಡೆಮುರಿ ಕಟ್ಟುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ಕೊಟ್ಟಿದ್ದಾರೆ.
ಪುಲಿಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿದ ಬಳಿಕ ಕಂದಾಯ ಸಚಿವ ಆರ್. ಅಶೊಕ್ ಅವರು ಮಾತನಾಡಿದರು. ಇಡೀ ಘಟನೆಯ ಬಗ್ಗೆ ಅಶೊಕ್ ವಿವರಿಸಿದರು. ಘಟನೆ ನಡೆದ ಪ್ರದೇಶಗಳಿಗೆ ಮಧ್ಯರಾತ್ರಿಯೇ ಅಶೋಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆಗ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೂ ಭೇಟಿ ನೀಡಿದ್ದರು. ಜೊತೆಗೆ ಇಡೀ ಘಟನೆಗೆ ಕಾರಣ ಏನು? ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ಸಚಿವ ಅಶೋಕ್ ವಿವರಿಸಿದ್ದಾರೆ.
ಇಡೀ ಮನೆ ಸುಟ್ಟಿದ್ದಾರೆ ಎನ್ನುತ್ತ ಕಣ್ಣೀರು ಹಾಕಿದ ಶಾಸಕರು
ವರ್ಷಗಳಿಂದ ಪರಿಚಯ
ಘಟನೆಯ ಬಗ್ಗೆ ವಿವರಿಸಿರುವ ಅಶೋಕ್ ಅವರು, ಅಖಂಡ ಮೂರ್ತಿ ಅವರ ಕುರಿತೂ ಮಾತನಾಡಿದರು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು 10 ವರ್ಷಗಳಿಂದ ನನಗೆ ಪರಿಚಯ. ಅವರು ಬಹಳ ಸೌಮ್ಯ ಸ್ವಭಾವದವರು. ಯಾರ ತಂಟೆಗೂ ಹೋಗುವವರೂ ಅಲ್ಲ. ಅಂಥವರ ಮನೆಯ ಇಷ್ಟೊಂದು ದಾಳಿ ಮಾಡಿದ್ದಾರೆ. ನಾನು ಕೂಡ ರಾತ್ರಿ 3 ಘಂಟೆಗೆ ಅಲ್ಲಿಗೆ ಹೋಗಿದ್ದೆ. ಮನೆಯಲ್ಲಿನ ಚಿನ್ನ, ಬೆಳ್ಳಿ, ಸೀರೆ ಎಲ್ಲದಕ್ಕೂ ಬೆಂಕಿ ಹಚ್ಚಿದ್ದಾರೆ.
ಮುಗಿಸಲೇಬೇಕು ಎಂದು
ನನಗೆ ಅನ್ನಿಸುತ್ತೆ, ಶ್ರೀನಿವಾಸಮೂರ್ತಿ ಅವರೇ ಹೇಳಿದ ಪ್ರಕಾರ ಅವರನ್ನು ಮುಗಿಸಲೇಬೇಕು ಎಂದು ಬಂದಿದ್ದರೂ ಅಂತಾ ನನಗೂ ಅನ್ನಿಸುತ್ತಿದೆ. ಒಬ್ಬ ಶಾಸಕನಾಗಿ ಕೆಲಸ ನಿಭಾಯಿಸಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಿನ್ನೆ ನಡೆದಿರುವ ಘಟನೆಯ ಹಿಂದೆ ಏನಿದೆ ಎಂಬುದು ತನಿಖೆಯಾಗಬೇಕು. ನಿನ್ನೆ ರಾತ್ರಿಯೇ 45 ಜನರನ್ನು ನಿನ್ನೆಯೇ ಬಂಧಿಸಲಾಗಿದೆ.
ಬೆಂಗಳೂರನ್ನ ತಲ್ಲಣಗೊಳಿಸಬೇಕು ಎಂಬ ನಿಟ್ಟಿನಲ್ಲಿ ಘಟನೆ ನಡೆದಿದೆ. ಆದರೆ ಸರ್ಕಾರ ಇಂತಹ ಘಟನೆಯನ್ನು ಮಟ್ಟ ಹಾಕಲು ಶಕ್ತವಾಗಿದೆ. ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾಹಿತಿ ಕೊಡುತ್ತೇನೆ. ನಿನ್ನೆ ರಾತ್ರಿ ಸುಮಾರು ನಾನು ಎರಡುವರೆ ತಾಸು ಘಟನೆ ನಡೆದ ಸ್ಥಳದಲ್ಲಿಯೇ ಇದ್ದೆ. ನಾನು ಹೋದಾಗ ಇಡೀ ಅಂಗಡಿಯನ್ನೇ ಲೂಟಿ ಮಾಡಿದರು.
ಬೆಂಗಳೂರಿನವರಲ್ಲ
ಪೊಲೀಸರು ಘಟನೆ ನಡೆದ 4 ತಾಸಿನೊಳಗೆ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ದುಷ್ಟಕರ್ಮಿಗಳು ಮಚ್ಚು, ಕೊಡಲಿ, ಲಾಂಗ್, ಬಾಂಬ್ ಹೀಗೆ ಎಲ್ಲವನ್ನೂ ತಂದಿದ್ದರು. ಪುಲಿಕೇಶಿನಗರ ಆದಮೇಲೆ ಶಿವಾಜಿನಗರ ಕಡೆಗೂ ಹೋಗುವವರಿದ್ದರು. ಆದರೆ ನಮ್ಮ ಪೊಲೀಸರು ತಡೆದರು. ಇಡೀ ಬೆಂಗಳೂರನ್ನು ಬೆದರಿಸುವ ಈ ಗೂಂಡಾಗಳನ್ನು ಮಟ್ಟ ಹಾಕಬೇಕು.
ದೊಂಬಿ ಮಾಡಿದವರು ಬೆಂಗಳೂರಿನವರಲ್ಲ, ಅವರು ಮಂಡ್ಯದವರು. ಎಸ್ಡಿಪಿಐ ಸೇರಿದಂತೆ ಹಲವರು ಅಲ್ಲಿದ್ದರು. ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿ, ಇಡೀ ಬೆಂಗಳೂರಿಗೆ ಬೆದರಿಕೆ ಹಾಕಲು ಮುಂದಾಗಿದ್ದರು. ಜನ, ಸಮುದಾಯ, ಪುಟ್ಟ ಪುಟ್ಟ ರಸ್ತೆ ಎಲ್ಲಾ ಕಡೆ ಗಲಾಟೆ ಮಾಡಿದ್ದಾರೆ. ನಾನು ಈಗಾಗಲೇ ಶಾಸಕರಾದ ಜಮೀರ್, ರಿಜ್ವಾನ್ ಆರ್ಷದ್ ಜೊತೆಗೂ ಮಾತನ್ನಾಡಿದ್ದೇನೆ. ನಾವು ಎಲ್ಲರ ರಕ್ಷಣೆ ಮಾಡುತ್ತೇವೆ. 24 ಘಂಟೆಯೊಳಗೆ ಅಪರಾಧಿಗಳ ಬಂಧನ ಆಗಬೇಕು. ಗಲ್ಲಿಗಲ್ಲಿಯಲ್ಲೂ ಅಪರಾಧಿಗಳನ್ನು ಹುಡುಕುತ್ತೇವೆ. ಅವರನ್ನು ಬಂಧಿಸುವವರೆಗೂ ಸರ್ಕಾರ ವಿಶ್ರಮಿಸುವುದಿಲ್ಲ ಎಂದು ಸಚಿವ ಆರ್. ಅಶೋಕ್ ಎಚ್ಚರಿಸಿದ್ದಾರೆ.
ದೇಶದ್ರೋಹಿಗಳು
ಗುಪ್ತಚರ ಇಲಾಖೆ ವೈಫಲ್ಯ ಇದಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸಮರ್ಥಿಸಿಕೊಂಡಿದ್ದಾರೆ. ನಮ್ಮ ಪೊಲೀಸರು ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಮೂರು ಗಂಟೆಗಳ ಪೊಲೀಸರು ಶಾಂತ ರೀತಿಯಲ್ಲಿ ಮಾತನ್ನಾಡಿದ್ದಾರೆ.
ಆದರೆ, ಪೊಲೀಸ್ ಠಾಣೆಯಲ್ಲಿ ಪೊಲೀಸರನ್ನೇ ಕೂಡಿ ಹಾಕಲು ನಿರ್ಧಾರಕ್ಕೆ ದುಷ್ಕರ್ಮಿಗಳು ಬರುತ್ತಾರೆ ಎಂದರೆ ಅವರು ದೇಶದ್ರೋಹಿಗಳು. ಡಿಸಿಪಿಯನ್ನು ಕೂಡಿ ಮುಂದಾಗುತ್ತಾರೆ. ನಮ್ಮ ಸರ್ಕಾರ, ನಾವು ಬೆಂಗಳೂರಿನ ಜನರ ಪರವಾಗಿದ್ದೇವೆ. ನಿನ್ನೆ ಗಲಾಟೆ ಮಾಡಿದವರು ಯಾವುದೇ ಬಿಲದಲ್ಲಿ ಇದ್ರೂ, ಹೆಡೆಮುರಿ ಕಟ್ಟುತ್ತೇವೆ ಎಂದಿದ್ದಾರೆ.