ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗದು: ತನ್ವೀರ್ ಭರವಸೆ
ಬೆಂಗಳೂರು, ಫೆಬ್ರವರಿ 13: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಗಳು ಈ ಬಾರಿ ಸೋರಿಕೆಯಾಗುವುದಿಲ್ಲ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಶಿಕ್ಷಣ ಇಲಾಖೆ ತಿದ್ದುಪಡಿ ವಿಧೇಯ ಚರ್ಚೆ ವೇಳೆ ಮಾತನಾಡಿ ಈ ಬಾರಿಯ ಪರೀಕ್ಷೆಗಳಿಗೆ ಹಿಂದಿನ ಬಾರಿ ಆಗಿರುವ ಲೋಪದೋಷಗಳು ಮರುಕಳಿಸದಂತೆ ಎಲ್ಲರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಯೋ ಮೆಟ್ರಿಕ್ ವ್ಯವಸ್ಥೆ ಸೇರಿದಂತೆ ಸುಧಾರಣಾ ಕ್ರಮ ಕೈಗೊಳ್ಳಲಾಗುವುದು. ಪ್ರಶ್ನೆಪತ್ರಿಕೆ ಖಜಾನೆಗಳಿಗೆ ಕ್ಯಾಮೆರಾ ಅಳವಡಿಲಾಗುವುದು ಎಂದರು.[ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ, ಇಬ್ಬರು ಆರೋಪಿಗಳಿಗೆ ಜಾಮೀನು]
ಪ್ರಶ್ನೆ ಪತ್ರಿಕೆ ಜವಾಬ್ದಾರಿ ಹೊತ್ತ ಅಧಿಕಾರಿಗಳು ಬಯೋಮೆಟ್ರಿಕ್ ವ್ಯವಸ್ಥೆಗೆ ಒಳಪಟ್ಟು ಕಾರ್ಯನಿರ್ವಹಿಸಬೇಕಾಗುತ್ತದೆ. ಭದ್ರತೆಗೆ ಬ್ಯಾಂಕಿನ ಲಾಕರ್ ಬಳಕೆಗೆ ಗಮನಹರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ಮುದ್ರಿಸುವ ಉದ್ದೇಶವನ್ನು ಹೊಂದಲಾಗಿದೆ. ಅಲ್ಲದೆ ಮೌಲ್ಯ ಮಾಪನ ಸಂದರ್ಭದಲ್ಲಿಯು ಲೋಪವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸೇಠ್ ತಿಳಿಸಿದರು.[ಪತ್ರಿಕೆ ಸೋರಿಕೆ : ರಸಾಯನಶಾಸ್ತ್ರ ಉಪನ್ಯಾಸಕನ ಬಂಧನ]
ಪರೀಕ್ಷಾ ವೇಳೆಯಲ್ಲಿ ಲೋಪವೆಸಗುವ ಶಿಕ್ಷಣ ಸಂಸ್ಥೆಯ ಪರವಾನಗಿ ರದ್ದುಪಡಿಸುವ ಹಾಗೂ ದಂಡ ವಿಧಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹೇಳಿದರು.
ಇದಕ್ಕು ಮುನ್ನ ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾತನಾಡಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ನೀತಿ, ನಿಯತ್ತಿನ ಕೊರತೆಯಿದೆ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕು. ವಾಮಮಾರ್ಗ ಹಿಡಿದ ಶಾಲೆಗಳಿಗೆ ಸರಿಯಾದ ಶಿಕ್ಷೆಯಾಗುತ್ತಿಲ್ಲ ಎಂದರು. ಇದಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್.ವಿ.ದತ್ತ ದನಿಗೂಡಿಸಿದರು.