ಸಿದ್ದರಾಮಯ್ಯ ಮತ್ತು ಗುಂಡೂರಾವ್ ರಾಜೀನಾಮೆ ನೀಡಲು ಇವರೇ ಕಾರಣ
ಬೆಂಗಳೂರು, ಡಿಸೆಂಬರ್ 10: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬೆನ್ನಲ್ಲೇ ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ನಾಯಕ ಮತ್ತು ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ನೀಡಿದ ಕಲವೇ ಗಂಟೆಗಳ ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಸಹ ರಾಜೀನಾಮೆ ನೀಡಿದರು. ಈ ಇಬ್ಬರು ಹೈಕಮಾಂಡ್ ಗೆ ರಾಜೀನಾಮೆ ಪತ್ರಗಳನ್ನು ರವಾನಿಸಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಹಿಂದಿರುವ ರಾಜಕೀಯ ಲೆಕ್ಕಾಚಾರಗಳೇನು?
ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅನರ್ಹ ಶಾಸಕರನ್ನು ಸೋಲಿಸಬೇಕೆಂದು ಸಿದ್ದರಾಮಯ್ಯ ಅವರು ಹಠ ತೊಟ್ಟಿದ್ದರು. ಹೀಗಾಗಿ ಹೈಕಮಾಂಡ್ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರೂ, ರಾಜ್ಯ ನಾಯಕರು ಸಹಕಾರ ನೀಡದ ಕಾರಣ ಉಪ ಚುನಾವಣೆ ಮುಗ್ಗರಿಸಬೇಕಾಯಿತು.
ಸ್ವಪಕ್ಷೀಯದವರಿಂದಲೇ ಸಹಕಾರ ಸಿಗಲಿಲ್ಲ
ಅನರ್ಹ ಶಾಸಕರನ್ನು ಸೋಲಿಸಬೇಕೆಂಬ ಸಿದ್ದರಾಮಯ್ಯನವರ ಹೋರಾಟಕ್ಕೆ ಮತದಾರ ಬೆಂಬಲಿಸಲಿಲ್ಲ ಎನ್ನುವುದಕ್ಕಿಂತ ಸ್ವಪಕ್ಷದ ನಾಯಕರುಗಳೇ ಬೆಂಬಲ ಕೊಡಲಿಲ್ಲ ಇದರಿಂದ ನೊಂದಿರುವ ಅವರು ತಮ್ಮ ಎರಡೂ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕಾಗಿ ಬಂತು.
ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಅವರು ಗೆಲ್ಲಿಸಿಕೊಂಡು ಬರುವವರೆಗೂ ಎಲ್ಲ ಜವಾಬ್ದಾರಿಯನ್ನು ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿತ್ತು. ಇದರಿಂದ ಪಕ್ಷದೊಳಗಿನ ಸಿದ್ದರಾಮಯ್ಯ ವಿರೋಧಿ ಬಣದ ನಾಯಕರು ಯಾವುದೇ ಸಹಕಾರ ನೀಡಲಿಲ್ಲ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಗುಂಡೂರಾವ್ ಕೂಡಾ ರಾಜೀನಾಮೆ
ಸಿದ್ದರಾಮಯ್ಯ ಏಕಾಂಗಿಯಾಗಿ ಎಲ್ಲ 15 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದರೂ ದಕ್ಕಿದ್ದು 2 ಕ್ಷೇತ್ರ ಮಾತ್ರ. ಒಬ್ಬರೇ ಸ್ಥಳೀಯ ಮುಖಂಡರ ಸಭೆ ಮತ್ತು ಸಂಘಟನೆ ಮಾಡಿದರು. ಆದರೆ ನಾಯಕರ ಅಸಹಕಾರದಿಂದ 13 ಕ್ಷೇತ್ರಗಳಲ್ಲಿ ಸೋಲಬೇಕಾಯಿತು. ಇದರ ಹೊಣೆಯನ್ನು ತಾವೇ ಹೊತ್ತುಕೊಂಡು ರಾಜೀನಾಮೆ ನೀಡಿದರು.
ಚುನಾವಣೆಯಲ್ಲಿ ಸೋಲು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿಯೋ ಲಾಬಿ!
ಅದೇ ರೀತಿಯಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ದಿನೇಶ್ ಗುಂಡೂರಾವ್ ತಮ್ಮ ಹುದ್ದೆ ತ್ಯಜಿಸಿದರು. ಕೆಪಿಸಿಸಿ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ಕರೆದು, ಉಪ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನಿರ್ಧಾರ ಪ್ರಕಟಿಸಿದರು.
ಇಬ್ಬರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ
ವಿಪಕ್ಷ ನಾಯಕ ಹಾಗೂ ತಮ್ಮ ರಾಜಕೀಯ ಆಶ್ರಯದಾತ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಕ್ಕೆ ದಿನೇಶ್ ಗುಂಡೂರಾವ್ ಹುದ್ದೆ ತ್ಯಜಿಸಿದರಾ? ಅಥವಾ ತಮ್ಮ ವಿರೋಧಿ ಬಣ ಹೈಕಮಾಂಡ್ ಮುಂದೆ ಕೀಳಾಗಿ ಕಾಣಬಹುದೆಂಬ ಕಾರಣಕ್ಕೆ ರಾಜೀನಾಮೆ ನೀಡಿದರಾ? ಎಂಬುದು ಮಾತ್ರ ಗುಟ್ಟಿನ ವಿಷಯ.
ಈ ಇಬ್ಬರೂ ನೀಡಿರುವ ರಾಜೀನಾಮೆ ಹೈಕಮಾಂಡ್ ಮುಂದೆ ಅಂಗೀಕಾರವಾಗುತ್ತಾ ಅನ್ನೋದು ಕುತೂಹಲದ ಪ್ರಶ್ನೆ. ಏಕೆಂದರೆ ರಾಜ್ಯದಲ್ಲಿ ಜನರನ್ನು ಸೆಳೆಯಬಲ್ಲ ಮತ್ತ ಪಕ್ಷದಲ್ಲಿ ಬಲಿಷ್ಟ ಹಿಡಿತ ಹೊಂದಿರುವ ನಾಯಕರಲ್ಲಿ ಸಿದ್ದರಾಮಯ್ಯ ಪ್ರಮುಖರು. ಎಲ್ಲ ನಾಯಕರನ್ನು ಮುನ್ನಡೆಸುವ ಕಲೆ ಗೊತ್ತಿರುವ ವ್ಯಕ್ತಿಯಾಗಿದ್ದಾರೆ.
ಹೊಸ ಮುಖಗಳಿಗೆ ಮಣೆ ಹಾಕುತ್ತಾ ಹೈಕಮಾಂಡ್?
ಮತದಾರರನ್ನ ಹಿಡಿದಿಡುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಇರುವ ಕಾರಣ ಅವರ ರಾಜೀನಾಮೆ ಅಂಗೀಕಾರವಾಗುವುದು ಅನುಮಾನ. ಒಂದು ವೇಳೆ ರಾಜೀನಾಮೆ ಸ್ವೀಕರಿಸುವ ಇಕ್ಕಟ್ಟಿಗೆ ಹೈಕಮಾಂಡ್ ಸಿಲುಕಿದರೆ, ವಿರೋಧ ಪಕ್ಷ ನಾಯಕ ಸ್ಥಾನ ಅವರಿಗೆ ಉಳಿಸಿ, ಶಾಸಕಾಂಗ ಪಕ್ಷದ ನಾಯಕ ಸ್ಥಾನ ಬೇರಬ್ಬರಿಗೆ ನೀಡುವ ಸಾಧ್ಯತೆ ಇದೆ.
ದಿನೇಶ್ ಗುಂಡೂರಾವ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಬಹುದು. ಅವರಿಗೆ ಪಕ್ಷದಲ್ಲಿ ಹಿಡಿತವೂ ಇಲ್ಲ, ಮತದಾರರನ್ನು ಸೆಳೆಯುವ ಛಾತಿಯನ್ನು ಹೊಂದಿಲ್ಲ. ಜೊತೆಗೆ ನಾಯಕರನ್ನು ಒಗ್ಗೂಡಿಸುವ ವ್ಯಕ್ತಿತ್ವವನ್ನೂ ಮೈಗೂಡಿಸಿಕೊಂಡಿಲ್ಲ. ಈಗಾಗಲೇ ಹಿರಿಯ ನಾಯಕರ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ಯಾರನ್ನು ಆಯ್ಕೆ ಮಾಡುತ್ತಾರೋ ಅನ್ನೋದನ್ನು ಕಾದು ನೋಡಬೇಕಿದೆ.