ಮಾರ್ಕೆಟ್ ರಸ್ತೆ ಸರಿ ಮಾಡ್ರಪ್ಪ ಅಂದ್ರೆ, ಮಣ್ಣು ತಂದು ಸುರಿದ ಮೇಯರ್
ಬೆಂಗಳೂರು, ಆಗಸ್ಟ್ 9: ಅಬ್ಬಬ್ಬಾ ಏನು ಕರ್ತವ್ಯ ನಿಷ್ಠೆ, ದೂರು ಕೊಟ್ಟ ತಕ್ಷಣ ಬಿಬಿಎಂಪಿ ರಸ್ತೆ ಸರಿ ಮಾಡಿಬಿಟ್ಟಿದೆ ಎಂದು ಧನ್ಯವಾದ ಹೇಳಿದ್ದೇ ಹೇಳಿದ್ದು.
ಅದು ಮೇಲ್ನೋಟಕ್ಕೆ ಸತ್ಯಹೌದು, ಆದರೆ ಜೋರಾಗಿ ಮಳೆ ಬಂದರೆ ರಸ್ತೆಯ ಬಣ್ಣ ಬಯಲಾಗುತ್ತದೆ. ಕೆಆರ್ ಮಾರುಕಟ್ಟೆಯ ಆಸುಪಾಸಿನ ರಸ್ತೆ ಜಾರುವ ಸ್ಥಿತಿಯಲ್ಲಿದೆ, ದ್ವಿಚಕ್ರವಾಹನ ಸವಾರರಿಗಂತೂ ನರಕ ಸದೃಶಯವಾಗಿದೆ. ದ್ವಿಚಕ್ರವಾಹನ ಸವಾರರೊಬ್ಬರು ಆ ರಸ್ತೆಯಲ್ಲಿ ಹೋಗುವಾಗ ಬೈಕ್ ಸ್ಕಿಡ್ ಆಗಿ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬಿಬಿಎಂಪಿ ಬಜೆಟ್ಗೆ ತಡೆ ನೀಡಿದ ಸಿಎಂ ಯಡಿಯೂರಪ್ಪ!
ತಕ್ಷಣವೇ ಈ ರಸ್ತೆಯನ್ನು ಸರಿಪಡಿಸುವಂತೆ ಸಾರ್ವಜನಿಕರು ಬಿಬಿಎಂಪಿಯನ್ನು ಒತ್ತಾಯಪಡಿಸಿದ್ದರು. ಹಾಗಾಗಿ ರಾತ್ರೋರಾತ್ರಿ ಕಾಟಾಚಾರಕ್ಕೆ ಬಿಬಿಎಂಪಿಯು ಆ ಜಾಗದಲ್ಲಿ ಮಣ್ಣು ತಂದು ಸುರಿದಿದೆ.
ಈಗ ಅದು ಸರಿಯಿದ್ದಂತೆ ಕಂಡರೂ ಮಳೆ ಬಂದ ತಕ್ಷಣವೇ ಮತ್ತೆ ಕೊಚ್ಚೆಯಂತಾಗುತ್ತದೆ. ಇನ್ನೂ ಜಾರುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಬಿಬಿಎಂಪಿ ಕೈಗೊಂಡಿರುವ ಈ ಕ್ರಮದ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ರಸ್ತೆ ಸರಿ ಇಲ್ಲ ಎಂದರೆ ತಕ್ಷಣಕ್ಕೊಂದು ಪರಿಹಾರ ಕಂಡುಕೊಳ್ಳುವುದು ಒಳ್ಳೆಯದೇ ಆದರೆ ಅದೇ ಶಾಶ್ವತ ಪರಿಹಾರವಾಗಬಾರದಲ್ಲ, ಆ ರಸ್ತೆಯನ್ನು ಸರಿಪಡಿಸಲು ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳಲೇಬೇಕಿದೆ.