ಕಳ್ಳತನಕ್ಕೆಂದು ಬಂದು ತಪ್ಪಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಯತ್ನಿಸಿದ ಕಳ್ಳ
ಬೆಂಗಳೂರು, ಜನವರಿ 6: ಕಳ್ಳತನಕ್ಕೆಂದು ಬಂದು ತಪ್ಪಿಸಿಕೊಳ್ಳಲಾಗದೆ ಕೊನೆಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಳ್ಳತನಕ್ಕೆಂದು ಮನೆಗೆ ನುಗ್ಗಿದ ಕಳ್ಳನೊಬ್ಬ ಹೊರಬರಲಾರದೆ ಸಿಕ್ಕಿಬೀಳುತ್ತೇನೆ ಎಂಬ ಭಯದಲ್ಲಿ ಸಿಲಿಂಡರ್ ಸೋರಿಕೆ ಮಾಡಿ ಬೆಂಕಿ ಹೆಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಇದಾಗಿದೆ.
ಟಾಯ್ಲೆಟ್ ಗೆಂದು ಕರೆದುಕೊಂಡು ಹೋಗಿ ದುಡ್ಡು ದೋಚುತ್ತಿದ್ದವರ ಬಂಧನ
ವಿಭೂತಿಪುರ ನಿವಾಸಿ ಬಾರ್ ಬೆಂಡಿಂಗ್ ವೃತ್ತಿ ಮಾಡುತ್ತಿದ್ದ ಸ್ವಸ್ತಿಕ್(27) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮನೆ ಮಾಲಿಕ ಮೋಹನ್ ಅವರು ಕಟ್ಟಡ ಗುತ್ತಿಗೆದಾರರಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಕೆಲವು ವರ್ಷಗಳಿಂದ ವಿಭೂತಿನಗರದಲ್ಲಿ ನೆಲೆಸಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಜನವರಿ 1ರಂದು ಮೋಹನ್ ಅವರು ಬೆಳಗ್ಗೆ ಬೇಗ ಎದ್ದು ಹೊರಗೆ ಹೋಗಿದ್ದರು. ಅವರ ಪತ್ನಿ ಮನೆಯ ಹೊರಗೆ ಆವರಣವನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಆರೋಪಿ ಕಳ್ಳತನ ಮಾಡಲು ಮನೆಯ ಒಳಗೆ ಪ್ರವೇಶಿಸಿದ್ದ.
ಮೋಹನ್ ಅವರು ಮನೆಗೆ ಬಂದ ಬಳಿಕ ಬೀಗ ಹಾಕಿ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಮನೆಯ ಒಳಗೇ ಸಿಲುಕಿಕೊಂಡಿದ್ದ, ಹೊರಗೆ ಬರಲು ಆಗದೆ ತಾನು ಸಿಕ್ಕಿಬೀಳುತ್ತೇನೆ ಎಂಬ ಭಯದಲ್ಲಿ ಮೊದಲಿಗೆ ಕೊಠಡಿಯಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ ಅದೂ ಸಾಧ್ಯವಾಗಿಲ್ಲ. ಬಳಿಕ ಅಡುಗೆ ಮನೆಗೆ ಬಂದು ದಿಂಬು, ಬೆಡ್ಶೀಟ್ಗಳನ್ನು ತಂದು ಬೆಂಕಿ ಹಚ್ಚಿ ಅನಿಲ ಸೋರಿಕೆ ಮಾಡಿದ್ದಾನೆ ಇದರಿಂದ ಆತನ ದೇಹ ಶೇ.20 ರಷ್ಟು ಸುಟ್ಟಿದೆ.
ಮೋಹನ್ ಕುಟುಂಬ ಮನೆಗೆ ಬಂದ ತಕ್ಷಣ ಬೆಂಕಿ ಹೊತ್ತಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಬಳಿಕ ಯಾರೋ ವ್ಯಕ್ತಿ ಮನೆಯ ಒಳಗೆ ನುಗ್ಗಿರುವುದು ಖಾತ್ರಿಯಾಗಿದೆ. ಮನೆ ಹಾಗೂ ನೆರೆ ಮನೆಯ ಸಿಸಿಟಿವಿ ದೃಶ್ಯವನ್ನು ಪರೀಕ್ಷಿಸಿದಾಗ ಸ್ವಸ್ತಿಕ್ ಮನೆಯ ಒಳಗೆ ನುಗ್ಗಿರುವುದು ಸ್ಪಷ್ಟವಾಗಿತ್ತು.
ನಿಮ್ಮ ಮನೆಯ ಬಾಗಿಲು ತೆರೆದಿತ್ತು ಯಾವುದಾದರೂ ಒಂದು ವಸ್ತುವನ್ನು ಕಳವು ಮಾಡಿಕೊಂಡು ಹೋಗಬೇಕು ಎಂದು ಪ್ರಯತ್ನಿಸಿದೆ. ಮನೆಯಿಂದ ಹೊರಬರಲಾರದೆ ಈ ರೀತಿ ಮಾಡಿಕೊಂಡೆ ನನಗೆ ಹೊಡಿಯಬೇಡಿ ಎಂದು ಬೇಡಿಕೊಂಡಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಿ, ಬಳಿಕ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.