ಈ ರೀತಿ ಪತ್ರ ಬರೆಯುವುದರಲ್ಲಿ ಪ್ರಯೋಜನ ಇಲ್ಲ: ರೂಪಾ ಡಿ ಮೌದ್ಗಿಲ್
ಬೆಂಗಳೂರು, ಮಾರ್ಚ್ 13: "ಐಪಿಎಸ್ ಅಧಿಕಾರಿಗಳು ಸರಕಾರಕ್ಕೆ ಪತ್ರ ಬರೆದ ಬಗ್ಗೆ ಅಂದರೆ, ಐಪಿಎಸ್ ಅಸೋಸಿಯೇಷನ್ ಅಂತ ಬರೆದಿದ್ದಾರೆ ಅಧ್ಯಕ್ಷರು, ಅದರಲ್ಲಿರುವ ವಿಷಯಗಳ ಬಗ್ಗೆ ಯಾವುದೇ ಸುಳಿವಿಲ್ಲ. ಯಾವುದೇ ಚರ್ಚೆ ಮಾಡಿ ನಿರ್ಧಾರಕ್ಕೆ ಬಂದಿದ್ದಲ್ಲ. ಇಂಥದ್ದೊಂದು ಪತ್ರ ಬರೆದಿದ್ದಾರೆ ಅಂತಲೂ ಗೊತ್ತಿರಲಿಲ್ಲ" ಎಂದು ಐಜಿಪಿ ರೂಪಾ ಡಿ ಮೌದ್ಗಿಲ್ ಪ್ರತಿಕ್ರಿಯೆ ನೀಡಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಆರ್.ಪಿ.ಶರ್ಮಾ ರಾಜ್ಯ ಸರಕಾರಕ್ಕೆ ಪತ್ರವೊಂದನ್ನು ಬರೆದಿದ್ದರು. ಆ ನಂತರದ ಇತ್ತೀಚೆಗಿನ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯ ಪಡೆಯಲು ಒನ್ ಇಂಡಿಯಾ ಕನ್ನಡ ಅವರನ್ನು ಸಂಪರ್ಕಿಸಿದಾಗ, "ಪತ್ರಿಕೆಗಳಲ್ಲಿ ಈ ಬಗ್ಗೆ ಬಂದಾಗಲೇ ಗೊತ್ತಾಗಿದ್ದು. ಹಾಗಾಗಿ ಈ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ನನಗೂ ಗೊತ್ತಿರಲಿಲ್ಲ. ಅಧ್ಯಕ್ಷರಿಗೆ ಅಭಿಪ್ರಾಯ ಇದ್ದಿದ್ದರೆ. ಆರ್.ಪಿ.ಶರ್ಮಾ ಅನ್ನೋ ಸ್ವಂತ ಹೆಸರಲ್ಲಿ ಹೋರಾಡಬಹುದಿತ್ತು. ಸಂಘದ ಹೆಸರಲ್ಲಿ ಬರೆದಿದ್ದಾರೆ"
"ಐಪಿಎಸ್ ಸಂಘದಲ್ಲಿ ಇರುವವರ ಎಲ್ಲರ ಅಭಿಪ್ರಾಯವೂ ಇದೇ ಅಂತ ಅಂದುಕೊಳ್ಳುವುದು ತಪ್ಪು. ಏಕೆಂದರೆ ನಾವ್ಯಾರೂ ಅಭಿಪ್ರಾಯಗಳನ್ನು ಎಲ್ಲೂ ಇನ್ನೂ ಹಂಚಿಕೊಂಡಿಲ್ಲ" ಎಂದಿದ್ದಾರೆ.
ಈ ರೀತಿ ಪತ್ರದಿಂದ ಆಗುವಂಥದ್ದಾದರೂ ಏನು?
ಮುಂದುವರಿದು, "ಕೆಲವು ಘಟನೆಗಳ ಬಗ್ಗೆ ಬರೆದಿದ್ದಾರೆ. ರಶ್ಮಿ ಮಹೇಶ್ ಮೇಲೆ ಹಲ್ಲೆ ಆಗಿದ್ದು, ಮೈಸೂರು ಡಿಸಿಗೆ ಯಾರೋ ಕೆಲವರು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು ಅಂಥದ್ದೆಲ್ಲ ಇದೆ, ನಿಜ. ಆದರೆ ಈ ರೀತಿ ಪತ್ರದಿಂದ ಆಗುವಂಥದ್ದಾದರೂ ಏನು? ಏನು ಸಾಧಿಸಲಿಕ್ಕೆ ಹೊರಟಿದ್ದಾರೆ ಅದರ ಉದ್ದೇಶ ಗೊತ್ತಾಗ್ತಿಲ್ಲ".
ಕಾನೂನು ಪಾಲಿಸಬೇಕಾದವರು ಹಾಗೂ ಜಾರಿಗೊಳಿಸಬೇಕಾದವರು ನಾವು
"ಇದಕ್ಕೆಲ್ಲ ಕಡಿವಾಣ ಹಾಕುವುದಿಕ್ಕೆ ಕಾನೂನಲ್ಲಿ ಅವಕಾಶ ಇದೆ. ಕಾನೂನು ಪಾಲಿಸಬೇಕಾದವರು ಹಾಗೂ ಜಾರಿಗೊಳಿಸಬೇಕಾದವರು ನಾವು. ಹಾಗಾಗಿ ಬೇರೆಯವರಿಗೆ ನಾವೇಕೆ ಹಸ್ತಕ್ಷೇಪ ಮಾಡಲಿಕ್ಕೆ ಬಿಡ್ತಾ ಇದೀವಿ? ಅದು ರಾಜಕಾರಣಿ ಆಗಲಿ, ಬೇರೆಯವರಾಗಲಿ. ನಾವು ಸ್ಥಿರವಾಗಿ ನಿಂತುಕೊಂಡು, ಕಾನೂನು ಪ್ರಕಾರವೇ ನಡೆಯೋದು ಅಂತ ನಾವು ತೋರಿಸಿಕೊಟ್ಟರೆ ಎಲ್ಲರೂ ಸುಮ್ಮನಾಗುತ್ತಾರೆ".
ಎಲ್ಲರೂ ತಂತಮ್ಮ ಕೆಲಸಗಳಲ್ಲಿ ರಿಸ್ಕ್ ತಗೊಳ್ಳಬೇಕು
"ಅಲ್ಲಿ ಅದು ನಡೀತಾ ಇದೆ, ಇದು ನಡೀತಾ ಇದೆ ಎಂದು ಪತ್ರ ಬರೆಯುವುದರಿಂದ ಏನೂ ಆಗಲ್ಲ. ನಾನು ಕೂಡ ಹೋರಾಟ ಮಾಡ್ಲಿಲ್ವ? ವರದಿ ಕೊಟ್ಟೆ, ಆ ನಂತರ ಏನು ಬಂತೋ ಅದಕ್ಕೆ ಉತ್ತರ ಕೊಟ್ಟೆ. ಪಾರದರ್ಶಕವಾಗಿ ನಡೆದುಕೊಂಡೆ. ರಿಸ್ಕ್ ತಗೊಂಡೆ. ಅದೇ ರೀತಿ ಎಲ್ಲರೂ ತಂತಮ್ಮ ಕೆಲಸಗಳಲ್ಲಿ ರಿಸ್ಕ್ ತಗೊಳ್ಳಬೇಕು. ನಮಗೆ ಟ್ರಾನ್ಸ್ ಫರ್ ಆಗುತ್ತೆ, ಮತ್ತೊಂದು ಆಗುತ್ತೆ ಅಂತ ಒತ್ತಡಕ್ಕೆ ಬಗ್ಗಿದರೆ ಸರಿಯಲ್ಲ".
ಬೇರೆಯವರ ಮೇಲೆ ದೂಷಿಸುವುದರಲ್ಲಿ, ಈ ರೀತಿ ಪತ್ರ ಬರೆಯುವುದರಲ್ಲಿ ಪ್ರಯೋಜನ ಇಲ್ಲ
"ಹಾಗಾಗಿ ಅದೆಲ್ಲ ಮಾಡುವಂಥ ಕ್ಷಮತೆ, ಕಾನೂನು ಪ್ರಕಾರ ಸಾಮರ್ಥ್ಯ, ಶಕ್ತಿ, ಕಾನೂನೇ ಅಧಿಕಾರ ಕೊಟ್ಟಿದೆ. ಹಾಗಾಗಿ ಬೇರೆಯವರ ಮೇಲೆ ದೂಷಿಸುವುದರಲ್ಲಿ, ಈ ರೀತಿ ಪತ್ರ ಬರೆಯುವುದರಲ್ಲಿ ಪ್ರಯೋಜನ ಇಲ್ಲ. ಇಲ್ಲಿ ನಿರ್ದಿಷ್ಟವಾದ ವಿಷಯ ಅಂತ ಇಲ್ಲ. ಜತೆಗೆ ಈ ಸಮಸ್ಯೆ ಹೇಗೆ ಸರಿಪಡಿಸಬೇಕು ಅಂತಲೂ ಇಲ್ಲ. ಆದ್ದರಿಂದ ಇದರಲ್ಲಿ ಯಾವ ಅರ್ಥವೂ ಇಲ್ಲ".