2020 ರಲ್ಲಿ ಬಿಎಸ್ವೈ; ರಾಜಗುರು ದ್ವಾರಕನಾಥ್ ನುಡಿದ ಭವಿಷ್ಯ
ಬೆಂಗಳೂರು ಡಿಸೆಂಬರ್ 31: 'ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ 2020 ರ ನಂತರದ ರಾಜಕೀಯ ಭವಿಷ್ಯಕ್ಕೆ ಯಾವುದೇ ತೊಂದರೆ ಇಲ್ಲ. ಅವರು ಮುಂದಿನ ಮೂರು ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ' ಎಂದು ಖ್ಯಾತ ಜ್ಯೋತಿಷಿ 'ರಾಜಗುರು' ದ್ವಾರಕನಾಥ್ ಭವಿಷ್ಯ ನುಡಿದಿದ್ದಾರೆ.
'ಯಡಿಯೂರಪ್ಪ ಅವರು ಕಲಬುರಗಿ ಜಿಲ್ಲೆಯ ಗಾಣಗಾಪುರದ ದತ್ತ ದೇವರ ದರ್ಶನ ಮಾಡಿ ಬಂದ ನಂತರ ಅವರ ಸಂಕಷ್ಟಗಳು ದೂರವಾಗಿವೆ. ಮುಂದಿನ ಮೂರು ವರ್ಷ ಯಾವುದೇ ಅಡೆತಡೆ ಇಲ್ಲದೇ ಅಧಿಕಾರ ಪೂರ್ಣಗೊಳಿಸಲಿದ್ದಾರೆ. ಸದ್ಯ ಯಾವುದೇ ದುಷ್ಟ ಶಕ್ತಿಗಳ ಕಾಡಾಟ ಯಡಿಯೂರಪ್ಪನವರಿಗೆ ಇಲ್ಲ. ಒಂದೆರಡು ತಿಂಗಳು ಎದುರಾಗುವ ಅಡ್ಡಿಗಳನ್ನು ನಾಜೂಕಾಗಿ ನಿಭಾಯಿಸಿದರೆ ಮುಗಿಯಿತು.
ಭಾರತದಲ್ಲಿ ರಾಮಯುಗ ಮತ್ತೆ ಆರಂಭ: ರಾಜಗುರು ದ್ವಾರಕನಾಥ್
ಮುಂದಿನ ಮೂರು ವರ್ಷ ರಾಜಕೀಯದಲ್ಲಿ ಅವರನ್ನು ತಡೆಯುವವರು ಯಾರೂ ಇಲ್ಲ. ಯಡಿಯೂರಪ್ಪ ಗಾಣಗಾಪುರದ ದತ್ತ ದೇವಸ್ಥಾನದ ಅಭಿವೃದ್ಧಿಗೆ ಘೋಷಿಸಿರುವ 10 ಕೋಟಿ ರುಪಾಯಿ ಸದ್ಬಳಕೆಯಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದ್ಯ ಕಂಟಕ ಕಾಡುತ್ತಿದೆ. ಅವರೂ ಸಹ ಗಾಣಗಾಪುರದ ದತ್ತ ದೇವರ ದರ್ಶನ ಮಾಡಿಕೊಂಡು ಹೋಗುವುದು ಉತ್ತಮ' ಎಂದು ಹೇಳಿದ್ದಾರೆ.
ಬೆಂಗಳೂರಿನ ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್ ಅವರು ಹಲವು ರಾಜಕೀಯ ಮುಖಂಡರ ಭವಿಷ್ಯವನ್ನು ಆಗಾಗ ಹೇಳುತ್ತಿರುತ್ತಾರೆ. ಕೆಲವು ಬಾರಿ ಅವರು ನುಡಿದ ರಾಜಕೀಯ ನಾಯಕರ ಭವಿಷ್ಯ ಸತ್ಯವಾಗಿದೆ. ಯಡಿಯೂರಪ್ಪ ಸೇರಿದಂತೆ, ಡಿ.ಕೆ.ಶಿವಕುಮಾರ್, ಎಚ್ ಡಿ ದೇವೇಗೌಡ, ಕುಮಾರಸ್ವಾಮಿ ಅವರಿಗೂ ದ್ವಾರಕನಾಥ್ ಭವಿಷ್ಯ ನುಡಿದು, ಸ್ಟಾರ್ ಜ್ಯೋತಿಷಿ ಎನಿಸಿಕೊಂಡಿದ್ದಾರೆ.