ಅಷ್ಟಕ್ಕೂ ಅಮೂಲ್ಯ 'ಪಾಕಿಸ್ತಾನ್ ಜಿಂದಾಬಾದ್' ಎಂದಿದ್ದೇಕೆ?
ಬೆಂಗಳೂರು, ಫೆಬ್ರವರಿ 21: ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ಅಮೂಲ್ಯ ಲಿಯೋನಾ ಎಂಬ ಯುವತಿ ಬಗ್ಗೆ ದೇಶ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ತುಂಬಿದ ಸಭೆಯಲ್ಲಿ ಅಮೂಲ್ಯ ಪೊಲೀಸರ ಸಮ್ಮುಖವೇ ದೇಶದ್ರೋಹಿ ಹೇಳಿಕೆಯನ್ನು ಏಕೆ ನೀಡಿದಳು? ಎಂಬುದರ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಓದಿನಲ್ಲಿ ಚುರುಕಾಗಿದ್ದ ಲಿಯೋನಾ ಪ್ರಚಾರಕ್ಕೋಸ್ಕರ ಈ ರೀತಿ ಹೇಳಿಕೆ ನೀಡಿರಬಹುದು. ಅವಳಿಗೆ ಇತ್ತೀಚಿನ ದಿನಗಳಲ್ಲಿ ಪ್ರಚಾರದ ಹುಚ್ಚಿತ್ತು ಎಂದು ಅವಳನ್ನು ಹತ್ತಿರದಿಂದ ಬಲ್ಲ ಅವಳ ಕೆಲ ಸ್ನೇಹಿತರು ಮಾತನಾಡಿಕೊಳ್ಳುತ್ತಿದ್ದಾರೆ.
ಹಿಂದೂ ಮುಸ್ಲಿಂ ಸಿಖ್ ಇಸಾಯಿ ಫೌಂಡೇಶನ್ ಗುರುವಾರ ಸಂಜೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ಸಿಎಎ ವಿರೋಧಿ ಸಮಾವೇಶದಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ದೇಶ ವಿರೋಧಿ ಘೋಷಣೆ ಕೂಗಿದ್ದಳು ಚಿಕ್ಕಮಗಳೂರು ಮೂಲದ ಅಮೂಲ್ಯ ಲಿಯೋನಾ.
Breaking: ಪಾಕಿಸ್ತಾನ ಪರ ಘೋಷಣೆ ಕೂಗಿದ ಮತ್ತೊಬ್ಬ ಯುವತಿ
ಪಾಕ್ ಪರ ಘೋಷಣೆ ಕೂಗಿ ರಾಷ್ಟ್ರವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ ಅಮೂಲ್ಯಳ ಬಗ್ಗೆ ಒನ್ಇಂಡಿಯಾ ವಿಚಾರಿಸಿದಾಗ ಅವಳು ಇಷ್ಟೇಲ್ಲ ಮಾಡಿರುವುದು ಪ್ರಜ್ಞಾಪೂರ್ವಕವಾಗಿ ಅಲ್ಲ, ಬದಲಿಗೆ ತನ್ನ ವೈಯಕ್ತಿಕ ಪ್ರಚಾರಕ್ಕಾಗಿ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸೂಕ್ತ ಸಂದರ್ಭ ಸಿಕ್ಕಿತು
ಗುರುವಾರ ಅಮೂಲ್ಯ ಲಿಯೋನಾ ಬೆಂಗಳೂರಿನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಕಾರಣವಿದೆ. ಕಾರ್ಯಕ್ರಮಕ್ಕೆ ಬಂದಿದ್ದ ಮತ್ತೊಬ್ಬ ವಿವಾದಾತ್ಮಕ ರಾಜಕಾರಣಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಎದುರಿಗೇ ವಿವಾದಾತ್ಮಕ ಹೇಳಿಕೆ ನೀಡಿದರೆ ಹೆಚ್ಚು ಪ್ರಚಾರ ಸಿಗುತ್ತದೆ ಎಂದು ಭಾವಿಸಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾಳೆ ಎನ್ನುವುದು ಅವಳನ್ನು ಹತ್ತಿರದಿಂದ ಬಲ್ಲವರ ಗುಮಾನಿ.
ವಿವಿಧ ಠಾಣೆಗಳಲ್ಲಿ ದೂರು
ಎಡಪಂಥೀಯ ಲೇಖಕಿ ಗೌರಿ ಲಂಕೇಶ್ ಹತ್ಯೆಯಾದಾಗ ಸಹಜವಾಗಿ ದೇಶ್ಯಾದ್ಯಂತ ಪ್ರತಿಭಟನೆಗಳು ಜರುಗಿದ್ದವು. ಆ ಸಮಯದಲ್ಲಿ ಅಮೂಲ್ಯ ಲಿಯೋನಾ ಸಂಘಟನೆಗಳ ಅಡಿಯಲ್ಲಿ ಪ್ರತಿಭಟನೆಗೆ ಹೋಗದೇ ತಾನೇ ಒಂದಿಷ್ಟು ಹುಡುಗರ ಗುಂಪು ಕಟ್ಟಿಕೊಂಡು ಪ್ರತಿಭಟನೆಗಳನ್ನು ನಡೆಸಲು ಮಂದಾಗಿದ್ದಳು. ಅಲ್ಲದೇ ಮೋದಿ ಅಮಿತ್ ಷಾ ವಿರುದ್ಧ ಕೆಟ್ಟ ಮಾತುಗಳನ್ನಾಡಿದ್ದಕ್ಕೆ ಹಾಗೂ ಅನುಮತಿ ಇಲ್ಲದೇ ಪ್ರತಿಭಟನೆ ಮಾಡಿದ್ದಕ್ಕೆ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆ ಸೇರಿದಂತೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ನಾಲ್ಕು ದೂರು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಬರೀ ಆಕ್ರೋಶದ ಮಾತುಗಳು
ಎಡಪಂಥೀಯ ವಿಚಾರಧಾರೆಗಳಿಂದ ಪ್ರಭಾವಗೊಂಡಿರುವ ಅಮೂಲ್ಯಳಿಗೆ ರಾತ್ರೋರಾತ್ರಿ ಹೆಸರು ಮಾಡಬೇಕು ಎಂಬ ಹುಮ್ಮಸ್ಸು ಇತ್ತಂತೆ ಎಂಬುದು ಅವಳ ಸ್ನೇಹಿತರನ್ನು ವಿಚಾರಿಸಿದಾಗ ಗೊತ್ತಾಗಿದೆ. ಹೀಗಾಗಿಯೇ ಅವಳು ಗೌರಿ ಲಂಕೇಶ್ ಹತ್ಯೆಯಾದಾಗ ಹಾಗೂ ಸಿಎಎ ವಿರೋಧಿ ಹೋರಾಟದಲ್ಲಿ ಬಿಜೆಪಿ, ಮೋದಿ, ಅಮಿತ್ ಷಾ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವ ಅವಕಾಶ ಸಿಕ್ಕಾಗ ಆಕ್ರೋಶದಿಂದ ಮಾತನಾಡುತ್ತಿದ್ದಳು ಎಂದು ಅವಳ ಸ್ನೇಹಿತರು ಹೇಳಿದ್ದಾರೆ.
ಹಲವು ಸಂಘಟನೆ ಇದಾವಂತೆ
ಇತ್ತೀಚೆಗೆ ಬಿಜೆಪಿ ಆರ್ಎಸ್ಎಸ್ ವಿರೊಧಿ ಶಕ್ತಿಗಳ ರೀತಿ ಹೆಚ್ಚು ಮಾತನಾಡುತ್ತಿದ್ದ ಅಮೂಲ್ಯ, ತನ್ನ ಹಿಂದೆ ಹಲವು ಸಂಘಟನೆಗಳು ಇವೆ ಎಂದು ತಾನೇ ಹೇಳಿಕೊಂಡಿದ್ದಾಳೆ. ಸಂದರ್ಶನವೊಂದರಲ್ಲಿ ನಾನು ಹೋರಾಟ ಮಾಡುತ್ತಿರುವುದು ಒಬ್ಬಳೆ ಎನಿಸುತ್ತದೆ. ಆದರೆ, ನನ್ನ ಹಿಂದೆ ತುಂಬಾ ಜನ ಇದ್ದಾರೆ ಎಂದು ಖಾಸಗಿ ಟಿವಿ ವಾಹಿನಿಯ ಬೈಟ್ನಲ್ಲಿ ಹೇಳಿದ್ದಾಳೆ.
ಜಯನಗರ ಮಹಿಳಾ ಕಾಲೇಜು ವಿದ್ಯಾರ್ಥಿನಿ
ಬೆಂಗಳೂರು ಜಯನಗರದ ಎನ್ಎಮ್ಕೆಆರ್ವಿ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ್ ವಿಷಯದಲ್ಲಿ ಪದವಿ ಪಡೆಯುತ್ತಿರುವ ಅಮೂಲ್ಯ ಸದ್ಯ ಬೆಂಗಳೂರಿನಲ್ಲಿ ನೆಲಸಿದ್ದಾಳೆ. ಗೌರಿ ಲಂಕೇಶ್ ಹತ್ಯೆಯಾದಾಗ ಹಾಗೂ ಎಡಪಂಥೀಯ ಕಾರ್ಯಕ್ರಮಗಳಲ್ಲಿ, ಸಿಎಎ ವಿರೋಧಿ ಹೋರಾಟದಲ್ಲಿ ಸ್ವಯಂಪ್ರೇರಿತವಾಗಿ ಕಾಣಿಸಿಕೊಳ್ಳುತ್ತಿದ್ದಳು. ಕನ್ನಡದ ಜೊತೆ ಹಿಂದಿ ಇಂಗ್ಲೀಷ್ ಚೆನ್ನಾಗಿ ಮಾತನಾಡುತ್ತಾಳೆ.
ಕಂಬಿ ಹಿಂದುಗಡೆ ಅಮೂಲ್ಯ
ಬೆಂಗಳೂರಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿರುವ ಎಡಪಂಥೀಯ ಚಿಂತನೆಯ ಯುವತಿ ಅಮೂಲ್ಯ ಲಿಯೋನಾಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಅಮೂಲ್ಯ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದಾಳೆ.