ಬೆಂಗಳೂರನ್ನು ಇಟಲಿ, ನ್ಯೂಯಾರ್ಕ್ ಮಾಡಬೇಡಿ: ಎಚ್.ಕೆ. ಪಾಟೀಲ್
ಬೆಂಗಳೂರು, ಜು. 04: ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿಯಾಗುತ್ತದೆ ಎಂಬ ಆತಂಕದಲ್ಲಿ ಜನರು ಬೆಂಗಳೂರನ್ನು ತೊರೆಯುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಅಂತರ್ ಜಿಲ್ಲಾ ಓಡಾಟಕ್ಕೆ ಸರ್ಕಾರ ನಿರ್ಬಂಧ ಹಾಕಲಿದೆ ಎಂಬ ರೂಮರ್ ಕೂಡ ಎದ್ದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸೋಮವಾರ (ಜು.6) ಬೆಂಗಳೂರಿನ ಎಲ್ಲ ಶಾಸಕರ ಸಭೆ ಕರೆದಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಬೆಂಗಳೂರು ಮತ್ತೆ ಲಾಕ್ಡೌನ್ ಆಗುತ್ತದೆ ಎಂಬ ಆತಂಕದಲ್ಲಿ ಜನರಿದ್ದಾರೆ.
Recommended Video
ಜೊತೆಗೆ ಬೆಂಗಳೂರಿನಲ್ಲಿ ಸೋಂಕಿತರಿಗೆ, ಸೋಂಕಿನ ಲಕ್ಷಣವಿದ್ದವರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಬೆಂಗಳೂರನ್ನು ಮತ್ತೊಂದು ಇಟಲಿ ಅಥವಾ ನ್ಯೂಯಾರ್ಕ್ ಮಾಡಬೇಡಿ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಎಚ್ಚರಿಸಿದ್ದಾರೆ. ಅದಕ್ಕೆ ಅವರು ಸೂಕ್ತ ವಿವರಗಳನ್ನೂ ಕೊಟ್ಟಿದ್ದಾರೆ.
ಸರ್ಕಾರಕ್ಕೆ ಯಾವ ಚಾಟಿಯಿಂದ ಬೀಸಬೇಕು? ಎಚ್ ಕೆ ಪಾಟೀಲ್ ಆಕ್ರೋಶ
ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿ ಬೌದ್ಧಿಕ ದಿವಾಳಿತನ ತೋರುತ್ತಿದೆ. ಸಚಿವರ ನಡುವೆ ಹೊಂದಾಣಿಕೆ ಕೊರತೆ ಇದೆ. ಜನರಿಗೆ ಯಾವ ರೀತಿಯ ಪರಿಹಾರ ನೀಡಬೇಕು? ಜನರನ್ನು ಹೇಗೆ ರಕ್ಷಿಸಬೇಕು? ಎಂದು ಯೋಚನೆ ಮಾಡುತ್ತಿಲ್ಲ. ರಾಜ್ಯದಲ್ಲಿ ಕೊರೊನಾ ವೈರಸ್ ವಿಮಾ ಯೋಜನೆ ಜಾರಿಗೆ ತನ್ನಿ. ಕ್ವಾರಂಟೈನ್ ಆದರೆ ವಿಮೆ ಘೋಷಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವರದಿಗಳು ಬಂದಿಲ್ಲ
ಕೊರೊನಾ ಸೋಂಕಿತರ ವಿಚಾರದಲ್ಲಿ ಸರ್ಕಾರ ನೀಡುವ ಅಂಕಿ ಸಂಖ್ಯೆಗಿಂತ ಬೇರೆಯೇ ಇದೆ. ಶಂಕಿತರಿಗೆ ನಡೆಸಿರುವ 40 ಸಾವಿರ ಪರೀಕ್ಷಾ ವರದಿಗಳು ಇನ್ನೂ ಬಂದಿಲ್ಲ. ಕೆಲವು ಮಾದರಿಗಳನ್ನು ಸಂಗ್ರಹಿಸಿ ಹತ್ತು ಹನ್ನೆರಡು ದಿನ ಆದರೂ ವರದಿ ಬಂದಿಲ್ಲ. ಆರು ದಿನಗಟ್ಟಲೆ ಶವ ಹಸ್ತಾಂತರಿಸಿಲ್ಲ. ಇಂತಹ ಸರ್ಕಾರವನ್ನು ನಾಗರಿಕ ಸರ್ಕಾರ ಎನ್ನಲಾಗುತ್ತದೆಯಾ? ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಎಚ್ಚರಿಸಿದ್ದಾರೆ.
ಆರೋಗ್ಯ ಮಂತ್ರಿ ಆರೋಗ್ಯ ರಕ್ಷಣೆ ಕೆಲಸ ಮಾಡಲಿ. ಸ್ಮಶಾನ ನೋಡುವ ಕೆಲಸವನ್ನು ಕಂದಾಯ ಸಚಿವರಿಗೆ ವಹಿಸಿ. ಕೊರೊನಾ ಸಂದರ್ಭದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ಆಗುತ್ತಿವೆ. ಕೊರೊನಾ ಸೋಂಕಿತರು ಆಹಾರ ನೀರು, ಚಿಕಿತ್ಸೆ ಇಲ್ಲ ಎಂದು ಬೇಡಿಕೊಳ್ಳುತ್ತಿದ್ದಾರೆ. ಬೀದಿಯಲ್ಲಿ ಹೆಣ ಬಿದ್ದರೂ ನೋಡುತ್ತಿಲ್ಲ. ಇದೆಲ್ಲ ಮಾನವ ಹಕ್ಕುಗಳ ಆಯೋಗಕ್ಕೆ ಕಾಣಿಸುತ್ತಿಲ್ಲವೇ? ಅವರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಎಚ್ ಕೆ ಪಾಟೀಲ್ ಆಗ್ರಹಿಸಿದ್ದಾರೆ.
ಇಟಲಿ, ನ್ಯೂಯಾರ್ಕ್ ಮಾಡಬೇಡಿ
ಜನರು ಆಸ್ಪತ್ರೆಗಳಿಗೆ ಸೇರಿಸಿಕೊಳ್ಳದೆ ಸಾವಿಗೀಡಾದ ಪ್ರಕರಣಗಳು ನಡೆಯುತ್ತಿವೆ. ಬೆಂಗಳೂರನ್ನು ಇಟಲಿ, ನ್ಯೂಯಾರ್ಕ್ ಮಾಡಬೇಡಿ. ಜನರಿಗೆ ತುರ್ತು ಸೇವೆ ಸಿಗುವಂತಾಗಬೇಕು. ಅಂಬುಲೆನ್ಸ್ಗಳ ಕೊರತೆ ಯಾಗಿದ್ದರೆ ಬಿಎಂಟಿಸಿ ಬಸ್ಗಳನ್ನು ಅಂಬುಲೆನ್ಸ್ಗಳಾಗಿ ಪರಿವರ್ತಿಸಿ. ಪ್ರತಿ ವಾರ್ಡ್ಗೂ ಎರಡು ಮೂರು ಅಂಬುಲೆನ್ಸ್ಗಳನ್ನು ವ್ಯವಸ್ಥೆ ಮಾಡಿ. ಅದನ್ನೂ ಮಾಡದಿದ್ದರೆ ನಿಮ್ಮನ್ನು ನಾಗರಿಕ ಸರ್ಕಾರ ಎಂದು ಕರೆಯಬೇಕೆ?
ಚಿಕಿತ್ಸೆ ದೊರೆಯದೆ ಜನ ಸತ್ತರೆ ಸರ್ಕಾರವೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸೋಂಕಿತರಿಗೆ ವಿಮಾ
ಈಗಾಗಲೇ ಹಲವಾರು ಕಂಪನಿಗಳು ವಿಮೆ ಮಾಡಿಸಲು ಮುಂದೆ ಬಂದಿವೆ. ಸರ್ಕಾರ ವಿಮಾ ಕಂಪನಿಗಳನ್ನು ಸಂಪರ್ಕಿಸಿ ವಿಮೆ ಜಾರಿಗೆ ಕ್ರಮ ಕೈಗೊಳ್ಳಬೇಕು. ಕೊರೊನಾ ಪಾಸಿಟಿವ್ ಬಂದರೆ 5 ಲಕ್ಷ ರೂ. ಪರಿಹಾರ ವಿಮೆ ಘೋಷಣೆ ಮಾಡಬೇಕು. ಜನರು ಸಾಕಷ್ಟು ಆರ್ಥಿಕ ತೊಂದರೆಯಲ್ಲಿದ್ದಾರೆ. ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ವೈದ್ಯರ
ಕೊರತೆ,
ನರ್ಸ್ಗಳ
ಕೊರತೆಯಿಂದ
ಜನರಿಗೆ
ಸರಿಯಾದ
ಚಿಕಿತ್ಸೆ
ಸಿಗುತ್ತಿಲ್ಲ.
ಸರ್ಕಾರ
ತುರ್ತಾಗಿ
ವೈದ್ಯರು,
ನರ್ಸ್
ಹಾಗೂ
ಸೇವೆ
ಮಾಡುವವರನ್ನು
ನೇಮಕ
ಮಾಡಿಕೊಳ್ಳಬೇಕು
ಎಂದು
ಅವರು
ಆಗ್ರಹಿಸಿದ್ದಾರೆ.
ಕಳಪೆ ಸ್ಯಾನಿಟೈಸರ್
ಎಸ್. ಎಂ. ಸ್ಯಾನಿಟೈಸರ್ ಎಂಬ ಸಂಸ್ಥೆ 97 ರೂ. ಗೆ ಒಂದು ಲೀಟರ್ ಸ್ಯಾನಿಟೈಸರ್ ಕೊಡಲು ಸಿದ್ದರಿದ್ದರು. ಅದನ್ನು ರದ್ದು ಮಾಡಿ 250 ರೂಗೆ ಮತ್ತೆ ಅವರಿಂದಲೇ ಖರೀದಿ ಮಾಡಿದ್ದಾರೆ. ರಾಮನಗರ ಹಾಗೂ ಕಲಬುರ್ಗಿಯಲ್ಲಿ ಈ ಸ್ಯಾನಿಟೈಸರ್ ಕಳಪೆ ಗುಣಮಟ್ಟದ್ದಿದೆ ಎಂದು ನಿರಾಕರಿಸಲಾಗಿದೆ.
ಡ್ರಗ್ಸ್ ಆಂಡ್ ಲಾಜಿಸ್ಟಿಕ್ ಇಲಾಖೆಯಿಂದ ಉಪಕರಣಗಳನ್ನು ನೀಡಲು ಟೆಂಡರ್ ಹಾಕಿರುವ ಸಂಸ್ಥೆಗಳಿಗೆ ಪಾಸ್ವರ್ಡ್ ನೀಡಲಾಗಿದೆ ಎಂಬ ದೂರು ಬಂದಿದೆ. ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಬಹಿರಂಗ ಭ್ರಷ್ಟಾಚಾರಕ್ಕೆ ನೀವೇ ಅವಕಾಶ ಕೊಟ್ಟಂತಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.