ಸರ ಅಪಹರಣ ಮಾಡಿದವರ ಬೆನ್ನಟ್ಟಿದ್ದ ಪೊಲೀಸರಿಗೆ ಸಿಕ್ಕಿದ್ದು ಎಟಿಎಂ ಕಳ್ಳರು
ಬೆಂಗಳೂರು, ಜು. 06: ಅಪರಾಧ ಲೋಕವೇ ಹಾಗೇ. ಏನೋ ವಿಚಾರವಾಗಿ ತನಿಖೆ ಮಾಡುತ್ತಿದ್ದರೆ, ಇನ್ಯಾವುದೋ ಪ್ರಕರಣ ಪತ್ತೆಯಾಗುತ್ತದೆ. ಹೀಗಾಗಿಯೇ ಅಪರಾಧ ತನಿಖೆ ಒಂದು ರೀತಿಯ ಥ್ರಿಲ್ಲಿಂಗ್ ! ಅಂತದ್ದೇ ಒಂದು ಅಪರಾಧ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಒಂಟಿ ಮಹಿಳೆ ಸರ ಅಪಹರಣ ಮಾಡಿದ್ದ ಕಳ್ಳರನ್ನು ಹಿಡಿಯಲು ಹೋದ ಪೊಲೀಸರಿಗೆ ಪಾಂಡವಪುರದಲ್ಲಿ ನಡೆದಿದ್ದ ಎಟಿಎಂ ಕಳುವು ಯತ್ನ ಪ್ರಕರಣ ಪತ್ತೆ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಸರ ಕಸಿದುಕೊಂಡು ಪರಾರಿಯಾಗಿದ್ದರು. ಸರಗಳ್ಳರ ಭೇಟೆಗೆ ಇಳಿದ ಆರ್.ಆರ್. ನಗರ ಪೊಲೀಸರು ಸುಮಾರು ನೂರು ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಇಬ್ಬರ ಸುಳಿವು ಸಿಕ್ಕಿದ್ದು, ಅವರನ್ನು ಬಂಧಿಸಿ ವಿಚಾರಣೆಗೆ ನಡೆಸಿದಾಗ ಅಪರೂಪದ ಸಂಗತಿಗಳು ಹೊರ ಬಿದ್ದಿವೆ.
ತುರುವೇಕೆರೆ ಮೂಲದ ರವಿ ಆಚಾರ್ಯ ಹಾಗೂ ತಲಘಟ್ಟಪುರದ ನಿವಾಸಿ ರಾಹುಲ್ ಬಂಧಿತ ಆರೋಪಿಗಳು. ತುರುವೇಕೆರೆ ಮೂಲದ ರವಿ ಬೆಂಗಳೂರಿನಲ್ಲಿ ಮೊಬೈಲ್ ರಿಪೇರಿ ಅಂಗಡಿ ತೆರೆದಿದ್ದ. ರಾಃಹುಲ್ ಕುಡಿಯುವ ನೀರಿನ ವಾಟರ್ ಪ್ಲಾಂಟ್ ನಡೆಸುತ್ತಿದ್ದ. ಕೊರೊನಾ ಲಾಕ ಡೌನ್ ನಿಂದಾಗಿ ನಷ್ಟ ಅನುಭವಿಸಿದ್ದರು. ಸಾಲ ತೀರಿಸಲಾಗದೇ ಕಳ್ಳತನ ಮಾಡಿ ಶ್ರೀಮಂತರಾಗಲು ಪ್ಲಾನ್ ರೂಪಿಸಿದ್ದರು. ಅದರಂತೆ ಕೆಲ ದಿನದ ಹಿಂದೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಬಡಾವಣೆಯಲ್ಲಿ ಮಹಿಳೆ ಸರ ಕದ್ದು ಪರಾರಿಯಾಗಿದ್ದರು.
ಸುಮಾರು ಐದು ಕಿ.ಮೀ. ದೂರದ ವರೆಗೂ ಸಿಸಿಟಿವಿ ಪರಿಶೀಲಿಸಿ ಆರೋಪಿ ರವಿ ಮತ್ತು ರಾಹುಲ್ ನನ್ನು ಪತ್ತೆ ಮಾಡಿ ಬಂಧಿಸಿದ್ದರು. ಬಂಧನದ ವೇಳೆ ಪಾಂಡವಪುರದ ಎಟಿಎಂ ಸ್ಟೋರಿ ಬಯಲಿಗೆ ಬಂದಿದೆ.
Recommended Video
ವ್ಯಾಪಾರದಲ್ಲಿ ಇಬ್ಬರೂ ನಷ್ಟ ಅನುಭವಿಸದ್ದ ರವಿ ಮತ್ತು ರಾಹುಲ್ ಮೊದಲು ಕಣ್ಣು ಹಾಕಿದ್ದೇ ಗ್ರಾಮೀಣ ಭಾಗದ ಎಟಿಎಂ ಯಂತ್ರದ ಮೇಲೆ. ಗ್ಯಾಸ್ ಕಟರ್ ಮೂಲಕ ಪಾಂಡವಪುರದಲ್ಲಿ ಎಟಿಎಂ ಯಂತ್ರವನ್ನು ಕಡಿತ ಮಾಡಲು ಯತ್ನಿಸಿದ್ದರು. ಎಟಿಎಂ ಸೈರನ್ ಬಳಿಕ ಎಚ್ಚೆತ್ತು ಅಲ್ಲಿಂದ ಪರಾರಿಯಾಗಿದ್ದರು. ಎಟಿಎಂನನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಲು ಯತ್ನಿಸಿ ಕೈಯಲ್ಲಾಗದೇ ವಾಪಸು ಬಂದಿರುವ ಘಟನೆ ಬಗ್ಗೆ ಪೊಲೀಸರಿಗೆ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಸರ ಅಪರಹಣ ಪ್ರಕರಣದಲ್ಲಿ ತನಿಖೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ಪಾಂಡವಪುರದ ಪೊಲೀಸರಿಗೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.