ರೋಗಿ ಬಳಿ ರೆಮ್ಡೆಸಿವಿರ್ ಕದ್ದು ಇನ್ನೊಂದು ಆಸ್ಪತ್ರೆಗೆ ಮಾರುತ್ತಿದ್ದ ನರ್ಸ್ ಬಂಧನ
ಬೆಂಗಳೂರು, ಮೇ. 18: ರೆಮ್ಡೆಸಿವಿರ್ ಜೀವ ರಕ್ಷಕ ಔಷಧಿಗೆ ಸೃಷ್ಟಿಯಾಗಿರುವ ಅಭಾವದಿಂದ ನಾನಾ ದಂಧೆಗಳು ಟಿಸಿಲೊಡೆದಿವೆ. ರೆಮ್ಡೆಸಿವಿರ್ ವಯಲ್ನಲ್ಲಿ ಗ್ಲೂಕೋಸ್ ನೀರು ತುಂಬಿ ಮಾರಾಟ ಮಾಡುತ್ತಿದ್ದ ದಂಧೆಕೋರರು ಸಿಕ್ಕಿಬಿದ್ದಿದ್ದರು. ಇದೀಗ ರೆಮ್ಡಿಸಿವಿಆರ್ ಚುಚ್ಚು ಮದ್ದು ಹೆಸರಿನಲ್ಲಿ ಹೊಸ ರೀತಿಯ ದಂಧೆ ಶುರುವಾಗಿದೆ. ರೋಗಿಗೆ ಕೊಡಬೇಕಿದ್ದ ರೆಮ್ಡೆಸಿವಿರ್ ಇಂಜಕ್ಷನ್ ಕೊಡದೇ ಕದ್ದ ನರ್ಸ್ ಅದನ್ನು ಬೇರೆ ಆಸ್ಪತ್ರೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ತಾನು ಕೆಲಸ ಮಾಡುವ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ನೀಡಬೇಕಿದ್ದ ರೆಮ್ಡೆಸಿವಿರ್ ಇಂಜಕ್ಷನ್ ಕದ್ದು ಅದನ್ನು ಬೇರೆ ಆಸ್ಪತ್ರೆಗೆ ಮಾರಾಟ ಮಾಡುತ್ತಿದ್ದ ನರ್ಸ್ ಒಬ್ಬರನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಮೂಲದ ಮನು ಬಂಧಿತ ಆರೋಪಿ. ಈತ ಕೋನಪ್ಪನಹ ಅಗ್ರಹಾರದಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ರೋಗಿಯೊಬ್ಬರು ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.
ಉಸಿರಾಟದ ತೀವ್ರ ತೊಂದರೆ ಎದುರಿಸುತ್ತಿದ್ದ ರೋಗಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ನೀಡಲೆಂದು ಎರಡು ರೆಮ್ಡೆಸಿವಿರ್ ಚುಚ್ಚು ಮದ್ದು ತಂದು ಕೊಟ್ಟಿದ್ದರು. ಅದರಲ್ಲಿ ಒಂದನ್ನು ಮಾತ್ರ ಹಾಕಿದ್ದ ಮನು, ಮತ್ತೊಂದ್ದನ್ನು ಕದ್ದು ಮನೆಗೆ ತಂದಿದ್ದ. ದುಬಾರಿ ಬೆಲೆಗೆ ಮಾರಾಟ ಮಾಡಲೆಂದು ಕಗ್ಗದಾಸಪುರದಲ್ಲಿರುವ ಅಭಯ ಹಸ್ತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರನ್ನು ಸಂಪರ್ಕಿಸಿದ್ದ. 25 ಸಾವಿರ ರೂಪಾಯಿ ಕೊಟ್ಟರೆ ರೆಮ್ಡೆಸಿವಿರ್ ಚುಚ್ಚು ಮದ್ದು ಕೊಡುವುದಾಗಿ ಹೇಳಿ ಡೀಲ್ ಕುದುರಿಸಿದ್ದ.
Recommended Video
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಬೈಯಪ್ಪನಹಳ್ಳಿ ಪೊಲೀಸರು, ಮನು ನನ್ನು ವಶಕ್ಕೆ ಪಡೆದು ಎಲೆಕ್ಟ್ರಾನಿಕ್ ಸಿಟಿ 2 ನೇ ಹಂತದಲ್ಲಿರುವ ಮನೆ ರೂಮ್ನಲ್ಲಿ ಶೋಧ ನಡೆಸಿದ್ದಾರೆ. ಅಲ್ಲಿ ಹದಿಮೂರು ರೆಮ್ಡಿಸಿವಿಆರ್ ಚುಚ್ಚು ಮದ್ದು ಹಾಗೂ 50 ಸಾವಿರ ರೂಪಾಯಿ ನಗದು ಸಿಕ್ಕಿದೆ. ಆರೋಪಿತ ಮನು ಅಷ್ಟೂ ರೆಮ್ಡೆಸಿವಿರ್ ಇಂಜೆಕ್ಷನ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ. ಮನು ನನ್ನು ಬಂಧಿಸಿದ್ದು, ಈ ಹಿಂದೆ ಈತ ಯಾರಿಗೆ ಮಾರಾಟ ಮಾಡಿದ್ದ ಎಂಬುದನ್ನು ಪತ್ತೆ ಮಾಡುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಬೈಯ್ಯಪ್ಪನಹಳ್ಳಿ ಪೊಲೀಸರ ಕಾರ್ಯವನ್ನು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು ಶ್ಲಾಘಿಸಿದ್ದಾರೆ.