ಜೈಲಿನಲ್ಲಿದ್ರೂ ಉದ್ಯಮಿಗಳ ಬಳಿ ಹಫ್ತಾ ವಸೂಲಿ ಮಾಡ್ತಿದೆ ಆ ರೌಡಿ ಗ್ಯಾಂಗ್
ಬೆಂಗಳೂರು, ಡಿಸೆಂಬರ್ 04: ಜೈಲಿನಲ್ಲಿರುವ ಆ ರೌಡಿಗಳಿಂದ ಉದ್ಯಮಿ ವ್ಯಾಪಾರಸ್ಥರಿಗೆ ಪೋನ್ ಕಾಲ್ ಬರುತ್ತೆ. ಗೂಗಲ್ ಪೇ, ಪೋನ್ ಪೇ ಮೂಲಕ ಹಣ ಹಾಕುವಂತೆ ಧಮ್ಕಿ ಹಾಕ್ತಾರೆ. ಹಣ ಕೊಡದಿದ್ದರೆ ಲೋಕಲ್ ಹುಡುಗರನ್ನು ಕಳಿಸಿ ಹಲ್ಲೆ ಮಾಡಿಸುತ್ತಾರೆ. ಇದು ಏರಿಯಾದಲ್ಲಿದ್ದುಕೊಂಡು ರೌಡಿಗಳು ಮಾಡುತ್ತಿರುವ ಕೆಲಸವಲ್ಲ. ಬದಲಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ಉದ್ಯಮಿಗಳು ಹಾಗೂ ವ್ಯಾಪಾರಿಗಳ ಬಳಿ ಹಫ್ತಾ ವಸೂಲಿ ಮಾಡ್ತಿರುವ ರೌಡಿ ಗ್ಯಾಂಗ್ ನ ಅಸಲಿ ಕಥೆ.
ಇತ್ತೀಚೆಗೆ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದು ರೌಡಿ ಸ್ಲಂ ಭರತ್. ಈತನ ವಿರುದ್ಧ ಕೊಲೆ, ಕೊಲೆಯತ್ನ ಸಾಕಷ್ಟು ಪ್ರಕರಣಗಳಿದ್ದವು. ಉದ್ಯಮಿಗಳಿಗೆ ಹೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದ. ಇವನ ಉಪಟಳ ಸಹಿಸದೇ ಜನ ರೋಸಿ ಹೋಗಿದ್ದರು. ಈತನನ್ನು ಬಂಧಿಸುವ ವೇಳೆ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದ. ಸ್ಲಂ ಭರತನ ಸಮಾಜ ಘಾತುಕ ಕೆಲಸದಿಂದ ಜನ ಬೆಚ್ಚಿ ಬಿದ್ದಿದ್ದರು.
ರೌಡಿಗೆ ಸಿಕ್ಕ ರಾಜ ಮರ್ಯಾದೆ ಯಾವ ಹೀರೋಗೂ ಸಿಗಲ್ಲ !
ಈತನ ವಿರುದ್ಧ ಐವತ್ತಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದವು. ಉತ್ತರ ಪ್ರದೇಶದಲ್ಲಿ ಈತನನ್ನು ಬಂಧಿಸಿದ್ದ ಪೊಲೀಸರು ಬೆಂಗಳೂರಿಗೆ ಕರೆ ತಂದಿದ್ದರು. ಮಹಜರಿಗೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಅಂತಿಮವಾಗಿ ಹೆಸರಘಟ್ಟ ಬಳಿ ಪೊಲೀಸರ ಮೇಲೆ ದಾಳಿ ನಡೆಸಲು ಹೋಗಿ ಗುಂಡೇಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದ ಸ್ಲಂ ಭರತ್ ಕಳೆದ ಫೆಬ್ರವರಿಯಲ್ಲಿ ಮೃತಪಟ್ಟಿದ್ದ.
ಇದಾದ ಕೂಡಲೇ ಆತನ ಶಿಷ್ಯರಾದ ಬ್ಯಾಡರಹಳ್ಳಿ ಸಿದ್ಧ, ಸ್ಲಂ ಮಧು, ಮನೋಜ್ ಎಂಬುವರು ಪೊಲೀಸರ ಎದುರು ಶರಣಾಗಿದ್ದರು. ಸ್ಲಂ ಭರತ ನ ಶಿಷ್ಯರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಇದೀಗ ಅಲ್ಲಿಂದಲೇ ಸ್ಲಂ ಭರತ್ ಶಿಷ್ಯಂದಿರು ಹಫ್ತಾ ವಸೂಲಿಗಾಗಿ ಪೋನ್ ಕರೆ ಮಾಡಿ ಹೆದರಿಸುತ್ತಿದ್ದಾರೆ. ಗುರು ಎನ್ಕೌಂಟರ್ ಆದರೂ ಆತನ ಹೆಸರಿನಲ್ಲಿ ಶಿಷ್ಯಂದಿರು ಜೈಲಿನಿಂದಲೇ ಮೊಬೈಲ್ ಮೂಲಕ ಉದ್ಯಮಿಗಳಿಗೆ ಕರೆ ಮಾಡಿ ಹಣಕ್ಕೆ ಪೀಡಿಸುತ್ತಿದ್ದಾರೆ.
ಬೆಂಗಳೂರು: ಪೊಲೀಸರಿಂದ ಬೆಳ್ಳಂಬೆಳಿಗ್ಗೆ ಎರಡು ಕಡೆ ಶೂಟೌಟ್
ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ಬ್ಯಾಡರಹಳ್ಳಿ, ಲಗ್ಗರೆ ಸುತ್ತಮುತ್ತ ವ್ಯಾಪಾರಸ್ಥರಿಗೆ ಹಾಗೂ ಉದ್ಯಮಿಗಳಿಗೆ ಕರೆ ಮಾಡಿ ಬ್ಯಾಂಕ್ ಖಾತೆಗೆ ಹಣ ಹಾಕುವಂತೆ ಧಮ್ಕಿ ಹಾಕಿದ್ದಾರೆ. ಈ ಬಗ್ಗೆ ಕೆಲವರು ದೂರು ನೀಡಲು ಹೆದರಿ ಸುಮ್ಮನಾಗಿದ್ದಾರೆ. ಲಗ್ಗೆರೆ ನಿವಾಸಿ ಶಂಕರ್ ಎಂಬಾತ ದೂರು ನೀಡಿದ್ದು, ಮೂವರ ವಿರುದ್ಧ ರಾಜಗೋಪಾಲನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
Recommended Video
ವ್ಯಾಪಾರಿ ಶಂಕರ್ಗೆ ಜೈಲಿನಿಂದಲೇ ಕರೆ ಮಾಡಿ ಹಣ ನೀಡುವಂತೆ ಧಮ್ಕಿ ಹಾಕಿದ್ದಾರೆ. ಬ್ಯಾಡರಹಳ್ಳಿ ಸಿದ್ದನ ಸಹೋದರ ಶ್ರೀಧರ್ನ ಪೋನ್ಗೆ ಏಳು ಸಾವಿರ ರೂಪಾಯಿ ಕಳಿಸಿದ್ದಾನೆ. ಪುನಃ ಶಂಕರ್ ಮೊಬೈಲ್ ಗೆ ಕರೆ ಮಾಡಿ ಏರಿಯಾದಲ್ಲಿ ವ್ಯಾಪಾರ ಮಾಡುವ ಎಲ್ಲರಿಗೂ ಪೋನ್ ಕೊಡಬೇಕು ಎಂದು ಹೆದರಿಸಿದ್ದಾರೆ. ನಿಮ್ಮ ಪೋನ್ ಕರೆ ನಾನು ಯಾಕೆ ಬೇರೆಯವರಿಗೆ ಕೊಡಬೇಕು ಎಂದು ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾರೆ. ರಾಜಣ್ಣ ಎಂಬುವರಿಗೆ ಪೋನ್ ಕೊಟ್ಟಿದ್ದು ಅವರಿಗೂ ಸಹ ಹಣ ಹಾಕದಿದ್ದರೆ ನಿಮ್ಮ ಅಂಗಡಿ ಇಲ್ಲದಂತೆ ಮಡುವುದಾಗಿ ಹೆದರಿಸಿದ್ದಾರೆ. ಈ ಕುರಿತು ಶಂಕರ್ ನೀಡಿದ ದೂರಿನ ಮೇರೆಗೆ ರಾಜಗೋಪಾಲನಗರ ಪೊಲೀಸರು ಮೂವರು ಆರೊಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ.