IPS ಅಧಿಕಾರಿ ರವಿ ಚನ್ನಣ್ಣನವರ್ ತಮ್ಮ ಎಂದು ನಂಬಿಸಿ ಅರ್ಚಕನಿಂದ ಮೋಸ
ಬೆಂಗಳೂರು, ಜು. 26: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ನನ್ನ ಅಣ್ಣ ಎಂದು ನಂಬಿಸಿ ದೇವಾಲಯದ ಅರ್ಚಕ ಐವತ್ತಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಗಮನಕ್ಕೆ ತಂದಾಗ ಅವನು ಯಾರೋ ನನಗೆ ಗೊತ್ತೆ ಇಲ್ಲ, ದೂರು ಕೊಟ್ಟು ಅರೆಸ್ಟ್ ಮಾಡಿಸಿ ಎಂದು ಸಲಹೆ ನೀಡಿದ್ದಾರೆ. ಅರ್ಚಕ ವಿರುದ್ಧ ವಂಚನೆ ದೂರು ದಾಖಲಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಅರ್ಚಕನ ವಂಚಕ ಪ್ಲಾನ್: ಉತ್ತರಹಳ್ಳಿಯ ಅರ್ಚಕ ಮಹಾಬಲ ಅಲಿಯಾಸ್ ಮಂಜನಾಥ್ ವಂಚನೆ ಮಾಡಿದ ಆರೋಪಿ. ಉತ್ತರಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದರು. ಸೆಲಿಬ್ರಿಟಿಗಳ ಜತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ತೋರಿಸಿ ತಾನು ಪ್ರಭಾವಿ ವ್ಯಕ್ತಿ ಎಂದು ಬಿಂಬಿಸಿಕೊಂಡಿದ್ದ. ದೇವಾಲಯಕ್ಕೆ ಪೂಜೆಗೆಂದು ಬರುವರಿಗೆ ಈ ಫೋಟೋಗಳನ್ನು ತೋರಿಸಿ ಪರಿಚಯ ಮಾಡಿಕೊಂಡು ವಂಚಕ ಬಲೆಗೆ ಕೆಡವುತ್ತಿದ್ದ. ಆಶ್ರಯ ಮನೆ ನೀಡುವುದಾಗಿ ಸಾಕಷ್ಟು ಮಂದಿಗೆ ನಾಮ ಹಾಕಿದ್ದಾನೆ. ಧನ ಸಹಾಯ ಯೋಜನೆ ಅಡಿ ಆರ್ಥಿಕ ನೆರವು ಕೊಡಿಸುವ ಆಸೆ ಹುಟ್ಟಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಸೆಲ್ಫಿ ತೋರಿಸಿ ನಂಬಿಸಿದ್ದ ಅರ್ಚಕ
ಸಾಮಾಜಿಕ ಜಾಲ ತಾಣದಲ್ಲಿ ತನ್ನದೇ ಅಭಿಮಾನ ಬಳಗ ಹೊಂದಿರುವ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಹೆಸರು ಚಿರಪರಿಚಿತ. ಇವರ ಜತೆ ತೆಗೆಸಿಕೊಂಡಿದ್ದ ಫೋಟೋ ತೋರಿಸಿ ತಾನು ರವಿ ಚನ್ನಣ್ಣನವರ್ ಅವರ ಸಹೋದರ ಸಂಬಂಧಿ ಎಂದು ಪುಂಗಿ ಬಿಟ್ಟಿದ್ದ. ಮಾತ್ರವಲ್ಲದೇ, ಪ್ರಭಾವಿ ರಾಜಕಾರಣಿಗಳು ಹಾಗೂ ಸೆಲಬ್ರಿಟಿಗಳ ಜತೆ ಸಮಾರಂಭಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ಮಹಾಬಲ ಅದನ್ನೇ ಉತ್ತರಹಳ್ಳಿಯ ಜನರಿಗೆ ತೋರಿಸಿ ತಾನು ಪ್ರಭಾವಿ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿರುವುದಾಗಿ ಬಿಂಬಿಸಿಕೊಂಡಿದ್ದ. ಅರ್ಚಕನಾಗಿದ್ದ ಕಾರಣ ಈತನನ್ನು ಸಾಕಷ್ಟು ಮಂದಿ ನಂಬಿದ್ದರು.
ಧನ ಸಹಾಯ ಸ್ಕಿಮ್ನಲ್ಲೂ ಬ್ಲೇಡ್
ಆಶ್ರಯ ಯೋಜನೆ ಅಡಿ ಮನೆ ಕೊಡಿಸುವುದಾಗಿ ನಂಬಿಸಿದ್ದ. ಉಚಿತ ಮನೆ ಸಿಗುವ ಆಸೆಗೆ ಬಿದ್ದ ಜನರಿಂದ ತಲಾ 50 ರಿಂದ 1 ಲಕ್ಷ ರೂ. ವರೆಗೂ ವಸೂಲಿ ಮಾಡಿದ್ದಾನೆ. ಆರಂಭದಲ್ಲಿ ಆಧಾರ್ ಕಾರ್ಡ್ ಮತ್ತು ದಾಖಲೆಗಳನ್ನು ನೀಡುವಂತೆ ಸೂಚಿಸುತ್ತಿದ್ದ. ದಾಖಲೆಗಳು ನೀಡಿದವರಿಗೆ ಆಶ್ರಯ ಯೋಜನೆ ಅಡಿ ಮನೆ ಸಿಗಬೇಕಾದರೆ ಇಷ್ಟು ಖರ್ಚು ಆಗುತ್ತದೆ. ನನಗೆ ಪರಿಚಿತರ ಮೂಲಕ ನಿಮಗೆ ತಪ್ಪದೇ ಮನೆ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸುತ್ತಿದ್ದ. ಅರ್ಚಕ ಮಹಾಬಲ ಮಾತು ನಂಬಿ ದಾಖಲೆ ಕೊಟ್ಟವರು ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ತಿಂಗಳು ಕಳೆದರೂ ಮನೆ ಮಂಜೂರು ಆಗಲಿಲ್ಲ. ಹಣವೂ ವಾಪಸು ಬಂದಿರಲಿಲ್ಲ. ಸುಮಾರು ನೂರಕ್ಕೂ ಹೆಚ್ಚು ಮಂದಿಗೆ ಮೋಸ ಮಾಡಿದ್ದಾನೆ ಎನ್ನಲಾಗಿದೆ.
ಅರೆಸ್ಟ್ ಮಾಡಿಸಿ ಎಂದ ಐಪಿಎಸ್
ರವಿಚನ್ನಣ್ಣನವರ್ ಸಹೋದರ ಎಂದು ಹೇಳಿಕೊಂಡಿದ್ದ ಮಹಾಬಲ ಬಗ್ಗೆ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಅವರ ಗಮನಕ್ಕೆ ತಂದಿದ್ದಾರೆ. ಅವನು ಯಾರೋ ನನಗೆ ಪರಿಚಯವೇ ಇಲ್ಲ. ಮೊದಲು ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ದೂರು ನೀಡಿ ಬಂಧಿಸುವಂತೆ ಹೇಳಿ ಎಂದು ಸ್ಪಷ್ಟನೆ ನೀಡಿದ್ದಾರೆ. ಇದಾದ ಬಳಿಕ ಮೋಸ ಹೋದವರು ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Recommended Video
ಟೀಮ್ ರಚಿಸಿದ್ದ ಮಹಾಬಲ
ಅರ್ಚಕ ಮಹಾಬಲ ಹಾಗೂ ಈತನಿಗೆ ಏಜೆಂಟರಾಗಿ ಕೆಲಸ ಮಾಡಿದ ಸುಂದರೇಶನ್, ಸವಿತಾ, ವಸಂತ ಲಕ್ಷ್ಮೀ ವಿರುದ್ಧವೂ ಸುಬ್ರಮಣ್ಯಪುರ ಠಾಣೆಯಲ್ಲಿ ಬಾಲಾಜಿ ಕುಮಾರ್ ಎಂಬುವರು ದೂರು ನೀಡಿದ್ದಾರೆ. ಸುಂದರೇಶನ್, ವಸಂತಲಕ್ಷ್ಮೀ ಹಾಗೂ ಸವಿತಾ ಆಶ್ರಯ ಯೋಜನೆ ಅಡಿ ಮನೆ ಬಯಸುವರನ್ನು ಹುಡುಕಿಕೊಂಡು ಬಂದು ಮಹಾಬಲ ಅವರಿಗೆ ಪರಿಚಯಿಸುತ್ತಿದ್ದರು. ಪರಿಚಿತರಿಗೆ ಪುಂಗಿ ಬಿಟ್ಟು ಮೋಸ ಮಾಡುತ್ತಿದ್ದ ಮಹಾ ಬಲ ಇದೀಗ ದುಡ್ಡಿನ ಸಮೇತ ನಾಪತ್ತೆಯಾಗಿದ್ದಾನೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.