'ಆರ್ಟಿಕಲ್ 371(ಜೆ) ಅಡಿ ಮಂತ್ರಿ ಸ್ಥಾನ ಕೊಡಿ'
ಬೆಂಗಳೂರು, ಜ. 01: ಹೈದಾರಾಬಾದ್ ಕರ್ನಾಟಕ ಭಾಗಕ್ಕೆ 371 ಜೆ ಅಡಿಯಲ್ಲಿ ಮಂತ್ರಿಸ್ಥಾನ ಕೊಡಬೇಕೆಂದು ಬಿಜೆಪಿ ಸುರಪುರ ಶಾಸಕ ರಾಜೂಗೌಡ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಹೈದರಾಬಾದ್ ಕರ್ನಾಟಕ ಭಾಗದ ಶಾಸಕರು ಭೇಟಿ ಮಾಡಿ ಒತ್ತಾಯಿಸಿದ್ದಾರೆ.
ನಂತರ ಮಾತನಾಡಿದ ಶಾಸಕ ರಾಜೂಗೌಡ, ಹೈ-ಕ ಭಾಗದ ಎಲ್ಲಾ ಶಾಸಕರು, ಸಂಸದರು ಯಡಿಯೂರಪ್ಪ ಅವರನ್ನು ಬೇಟಿ ಮಾಡಿದ್ದೇವೆ. ನಮ್ಮ ಭಾಗದ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಹೈದರಾಬಾದ್ ಕರ್ನಾಟಕದ ಶಾಸಕ ಹಾಲಪ್ಪ ಆಚಾರ್ ಆದರೂ ಸರಿನೇ, ಬೇರೆಯವರಿಗಾದ್ರು ಸರಿನೇ, ಯಾರಿಗಾದ್ರೂ ಒಬ್ಬರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದ್ದೇವೆ ಎಂದಿದ್ದಾರೆ.
ಹೈ-ಕ ಭಾಗಕ್ಕೆ ಸ್ಥಾನಮಾನ ಕೊಡ್ಬೇಕು ಅಂತ ಕೇಳಿದ್ದೇವೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ. ಯೋಚನೆ ಮಾಡಿ ಸಚಿವ ಸ್ಥಾನ ಕೊಡಲಿ. ನಮಗೆ ಆಗಿರುವ ರಾಜಕೀಯ ತಾರತಮ್ಯ ಹೋಗಬೇಕು. ಯಡಿಯೂರಪ್ಪ ಅವರು ಕೂಡ ಸಂಪೂರ್ಣ ಭರವಸೆ ಕೊಟ್ಟಿದ್ದಾರೆ. 371 ಜೆ ನಲ್ಲೂ ಕೂಡ ಹೈದಾರಾಬಾದ್ ಕರ್ನಾಟಕಕ್ಕೆ ರಾಜಕೀಯ ಪ್ರಾತಿನಿದ್ಯ ನೀಡಬೇಕು ಎಂದಿದೆ. ಇದೇ ಹಿನ್ನೆಲೆಯಲ್ಲಿ ಭೇಟಿಮಾಡಿ ಒತ್ತಾಯಿಸಿದ್ದೇವೆ ಎಂದು ರಾಜೂಗೌಡ ಹೇಳಿದ್ದಾರೆ.