ಮೆಡಿಕಲ್ ಸೀಟ್ ಬ್ಲಾಕ್ ಮಾಡುವ ಹೊಸ ದಾರಿಯಿದು !
ಬೆಂಗಳೂರು, ಡಿಸೆಂಬರ್ ೦3: ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆಯೋಕೆ ಬಂದಿದ್ರು. ಮೂವರಿಗೂ ಸೀಟು ಮಂಜೂರು ಆಗಿತ್ತು. ಇನ್ನೇನು ಕಾಲೇಜಿಗೆ ಹೋಗಿ ದಾಖಲಾತಿ ಮಾಡಬೇಕಿತ್ತು. ಕೊನೆ ಕ್ಷಣದಲ್ಲಿ ಅವರು ಮಾಡಿದ್ದ ಮಹಾ ತಪ್ಪಿನಿಂದ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದಾರೆ.
ಹೌದು. ಮೆಡಿಕಲ್ ಸೀಟು ಪಡೆದಿದ್ದ ವಿದ್ಯಾರ್ಥಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಮೆಡಿಕಲ್ ಸೀಟು ಪಡೆಯಲು ಯತ್ನಿಸಿದ ಮೂವರು ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ನಕಲಿ ದಾಖಲೆ ಸಲ್ಲಿಸಿ ಮೆಡಿಕಲ್ ಸೀಟು ಪಡೆಯಲು ಯತ್ನಿಸಿದ ಮೂವರು ವಿದ್ಯಾರ್ಥಿಗಳ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೂವರು ವಿದ್ಯಾರ್ಥಿಗಳನ್ನು ಮಲ್ಲೇಶ್ವರ ಪೊಲೀಶರು ಬಂಧಿಸಿದ್ದಾರೆ. ಬೆಂಗಳೂರಿನ ಮಧು, ಚೈತ್ರಾ, ಪೂಜಾ ಬಂಧಿತ ಆರೋಪಿಗಳು. ಇವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.
ಮೂವರ ನಕಲಿ ವಿದ್ಯಾರ್ಥಿಗಳ ಸೆರೆ:
ಪ್ರಸಕ್ತ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಟಕ ಪರೀಕ್ಷಾ ಪ್ರಾಧಿಕಾರ ಸೀಟು ಹಂಚಿಕೆ ಪ್ರಕ್ರಿಯೆ ನಡೆಸುತ್ತಿದೆ. ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆ ಮಾಡಿದ್ದ ಪ್ರಾಧಿಕಾರ ದಾಖಲೆಗಳನ್ನು ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಗೆ ಸೂಚಿಸಿತ್ತು. ನವೆಂಬರ್ 27 ರಿಂದ ಡಿಸೆಂಬರ್ 1 ರೊಳಗೆ ಮೂಲ ದಾಖಲಾತಿ ಸಲ್ಲಿಸಲು ಸೂಚಿಸಲಾಗಿತ್ತು. ಮೆಡಿಕಲ್ ಸೀಟು ಪಡೆದಿದ್ದ ಗೌತಮ್ ಎಂಬುವರ ಹೆಸರಿನಲ್ಲಿ ಮಧು ಎಂಬಾತ, ಪರಾಗಿ ಎಂಬುವರ ಹೆಸರಿನಲ್ಲಿ ಪೂಜಾ, ಮಹೀನ್ ನವಾಜ್ ಹೆಸರಿನಲ್ಲಿ ಚೈತ್ರಾ ಎಂಬುವರು ಮೂಲ ದಾಖಲಾತಿ ಸಲ್ಲಿಸಲು ಬಂದಿದ್ದಾರೆ. ದಾಖಲೆಗಳ ಪರಿಶೀಲನೆ ವೇಳೆ ಇಲಾಖೆ ವೆಬ್ ತಾಣದಲ್ಲಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆರೋಪಿತ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದಾಗಿ ಗೊತ್ತಾಗಿದೆ. ಅವರ ಭಾವಚಿತ್ರ ನೋಡಿದ ನಂತರ ಮತ್ತಷ್ಟು ಖಚಿತವಾಗಿದೆ. ಮೂವರು ವಿದ್ಯಾರ್ಥಿಗಳನ್ನು ಕೆಇಎ ಅಧಿಕಾರಿಗಳು ವಿಚಾರಣೆ ನಡೆಸಿದಾಗ ನಕಲಿ ದಾಖಲೆ ಸಲ್ಲಿಸಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರ ವಿರುದ್ಧ ಕೆಇಎ ಅಧಿಕಾರಿಗಳು ಮಲ್ಲೇಶ್ವರಂ ಪೊಲೀಸರಿಗೆ ದೂರು ನೀಡಿದ್ದಾರೆ. ಮೂವರು ವಿದ್ಯಾರ್ಥಿಗಳನ್ನು ಬಂಧಿಸಿ ಪೊಲೀಸರು ವಂಚನೆ ಆರೋಪದಡಿ ಕೇಸು ದಾಖಲಿಸಿಕೊಂಡಿದ್ದಾರೆ.
ಮೆಡಿಕಲ್ ಸೀಟು ಅಕ್ರಮ
ಸರ್ಕಾರಿ ಕೋಟಾದಡಿ ಹಂಚಿಕೆ ಮಾಡುವ ಮೆಡಿಕಲ್ ಸೀಟು ಪಡೆದ ಅಭ್ಯರ್ಥಿ ಆ ಕಾಲೇಜಿಗೆ ಹೋಗದಿದ್ದರೆ ಆ ಸೀಟು ಇರುವ ನಿಯಮಗಳ ಪ್ರಕಾರ ಖಾಸಗಿ ಮೆಡಿಕಲ್ ಕಾಲೇಜಿಗೆ ಬಿಟ್ಟು ಕೊಡಬೇಕಾಗುತ್ತದೆ. ಆ ಸೀಟನ್ನು ಖಾಸಗಿಯವರಿಗೆ ಮಾರಾಟ ಮಾಡಿದರೆ ಕೋಟಿ ರೂಪಾಯಿ ಸಿಗುತ್ತದೆ. ಹೀಗಾಗಿ ಸರ್ಕಾರಿ ಕೋಟಾದಡಿ ಖಾಸಗಿ ಕಾಲೇಜುಗಳಿಗೆ ಮಂಜೂರು ಆಗುವ ಸೀಟು ತಪ್ಪಿಸಲು ನಾನಾ ವಾಮ ಮಾರ್ಗಗಳನ್ನು ಅನುಸರಿಸುವುದು ಮೊದಲಿನಿಂದಲೂ ನಡೆಯುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತಿ ವರ್ಷವೂ ಎಷ್ಟೇ ಬಿಗಿ ನಿಯಮ ತಂದರೂ ಖಾಸಗಿ ಕಾಲೇಜುಗಳು ಹೊಸದೊಂದು ಹಾದಿ ಹುಡಿಕೊಳ್ಳುತ್ತವೆ. ಅದರ ಭಾಗವಾಗಿ ಈ ಅಕ್ರಮ ನಡೆದಿದೆಯಾ ಎಂಬ ಅನುಮಾನ ಹುಟ್ಟು ಹಾಕಿದೆ. ಖಾಸಗಿ ಮೆಡಿಕಲ್ ಕಾಲೇಜುಗಳು ಸರ್ಕಾರಿ ಕೋಟಾದಡಿ ಸೀಟು ಪಡೆದು ಬರುವ ಅಭ್ಯರ್ಥಿಗಳನ್ನೇ ಬುಕ್ ಮಾಡಿ ಬಿಟ್ಟು ಹೋಗುವಂತೆ ಮಾಡುವ ಜಾಲ ಈ ಹಿಂದೆ ಪತ್ತೆಯಾಗಿತ್ತು. ಈಗಲೂ ಅದು ನಡೆದರೂ ಅಚ್ಚರಿಯೇನಲ್ಲ.
ಅಸಲಿ ವಿದ್ಯಾರ್ಥಿಗಳ ವಿಚಾರಣೆ:
ಇಲ್ಲಿ ಮೊದಲ ಸುತ್ತಿನ ಕೌನ್ಸಲಿಂಗ್ ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂವರು ಅಸಲಿ ವಿದ್ಯಾರ್ಥಿಗಳಿಗೆ ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜಿಗೆ ಸೀಟು ಮಂಜೂರು ಮಾಡಬೇಕಿತ್ತು. ಅದರ ಪ್ರಕಾರ ಗೌತಮ್, ಪರಾಗಿ ಹಾಗೂ ಮಹೀನ್ ನವಾಜ್ ಕೆಇಎ ಸೂಚಿಸಿರುವ ನಿಗಧಿತ ದಿನಾಂಕದೊಳಗೆ ದಾಖಲೆಗಳನ್ನು ಸಲ್ಲಿಸಬೇಕಿತ್ತು. ಅವರು ಮೂಲ ದಾಖಲೆಗಳ ಪರಿಶೀಲನೆಗೆ ಬಂದಿಲ್ಲ. ಬದಲಾಗಿ ವಿದ್ಯಾರ್ಥಿ ಮಧು, ಸ್ವಾಗತಗಾರಿಣಿ ಪೂಜಾ ಹಾಗೂ ನೃತ್ಯ ಸಂಯೋಜಕಿ ಚಿತ್ರಾ ಮೂಲ ದಾಖಲೆಗಳ ಪರಿಶೀಲನೆಗೆ ಹೋಗಿರುವುದು ಹಲವು ಅನುಮಾನ ಮೂಡಿಸಿದೆ. ಸರ್ಕಾರಿ ಮೆಡಿಕಲ್ ಸೀಟು ಸಿಕ್ಕಿದರೂ ಅಸಲಿ ದಾಖಲೆಗಳನ್ನು ಸಲ್ಲಿಸಲು ಬಂದಿಲ್ಲ ಎಂದರೆ ಸೀಟು ಬ್ಲಾಕ್ ಮಾಡಿ ಖಾಸಗಿ ಕಾಲೇಜಿಗೆ ಬಿಟ್ಟು ಕೊಡುವ ಈ ಅಕ್ರಮದಲ್ಲಿ ಅವರು ಶಾಮೀಲಾಗಿದ್ದಾರೆಯೇ ? ಅವರು ಯಾಕೆ ಮೂಲ ದಾಖಲಾತಿ ಸಲ್ಲಿಕೆಗೆ ಬಂದಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ. ಈ ಕುರಿತು ಪೊಲೀಸರನ್ನು ಕೇಳಿದಾಗ, ಅಸಲಿ ವಿದ್ಯಾರ್ಥಿಗಳನ್ನು ಸಹ ಈ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತೇವೆ. ಸದ್ಯ ಆರೋಪಿತ ನಕಲಿ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದೇವೆ. ಮುಂದಿನ ತನಿಖೆಯಲ್ಲಿ ಸತ್ಯ ಬಯಲಾಗಲಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷವೂ ಆಗಿತ್ತು
ರಾಜ್ಯದಲ್ಲಿ ಕಳೆದ ವರ್ಷ ಸರ್ಕಾರಿ ಕೋಟಾದಡಿ ಖಾಸಗಿ ಕಾಲೇಜುಗಳಿಗೆ ಮಂಜೂರಾಗಿದ್ದ ಸೀಟುಗಳ ಪೈಕಿ ಸುಮಾರು 213 ಸೀಟುಗಳನ್ನು ಕೊನೆ ಕ್ಷಣದಲ್ಲಿ ವಿದ್ಯಾರ್ಥೀಗಳು ಬಿಟ್ಟು ಹೋಗಿದ್ದರು. ಆ ಕೊನೆ ಸುತ್ತಿನ ಕೌನ್ಸಲಿಂಗ್ ಮುಗಿಯುವ ವರೆಗೂ ಸುಮ್ಮನಿರುವ ವಿದ್ಯಾರ್ಥಿಗಳು ಖಾಸಗಿ ಕಾಲೇಜಿಗೆ ಸೀಟು ಬಿಟ್ಟು ಹೋಗುತ್ತಾರೆ. ಆ ಸೀಟನ್ನು ಮತ್ತೆ ಸರ್ಕಾರದ ಕೋಟಾದಡಿ ಆಯ್ಕೆ ಮಾಡುವದಿಲ್ಲ. ಬದಲಿಗೆ ಆ ಸೀಟನ್ನು ಖಾಸಗಿ ಕಾಲೇಜುಗಳು ಮಾರಿಕೊಳ್ಳುತ್ತವೆ. ಆಡಳಿತ ಕೋಟಾದಡಿ ಸೀಟು ಮಾರಿಕೊಂಡು ಬರುವ ಹಣದಲ್ಲಿ ಸೀಟು ಬಿಟ್ಟು ಕೊಡುವ ವಿದ್ಯಾರ್ಥಿಗೂ ಹಣ ಕೊಡುವ ದಂಧೆ ನಿರಂತವಾಗಿ ನಡೆಯುತ್ತಿದೆ. ಸೀಟ್ ಬ್ಲಾಕ್ ಮಾಡಿ ಮಾರಾಟ ಮಾಡುವ ದಂಧೆಯ ಬಗ್ಗೆ ಜನ್ಮ ಭೂಮಿ ಫೌಂಡೇಷನ್ ಸಂಸ್ಥಾಪಕ, ವಕೀಲ ನಟರಾಜ್ ಶರ್ಮಾ ಆರ್ಟಿಐ ಅಡಿ ದಾಖಲೆಗಳ ಸಮೇತ ಅಕ್ರಮ ಬಯಲಿಗೆ ಎಳೆದಿದ್ದರು. ಸೀಟು ಬ್ಲಾಕಿಂಗ್ ಅಕ್ರಮದಲ್ಲಿ ಕೆಇಎ ಅಧಿಕಾರಿಗಳು ಕೂಡ ಶಾಮೀಲಾಗಿರುವ ಆರೋಪ ಕೇಳಿ ಬಂದಿತ್ತು.
Recommended Video
ಈ ವರ್ಷವೂ ಅದೇ ಹಾದಿ
ಸಿಇಟಿ ಸರ್ಕಾರಿ ಕೋಟಾದಡಿ ಸೀಟು ಮಂಜೂರು ಮಾಡಿದ ಬಳಿಕ ಆ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ, ಡಿಡಿ ಸಲ್ಲಿಕೆ ಪ್ರಕ್ರಿಯೆಗಳನ್ನು ಖಾಸಗಿ ಕಾಲೇಜಿನಲ್ಲೂ ನಡೆಯುತ್ತದೆ. ಆದರೆ, ಮೆಡಿಕಲ್ ಕಾಲೇಜು ಆಡಳಿತ ಮಂಡಳಿಗಳು ವಿದ್ಯಾರ್ಥಿಗಳು ನಿಗಧಿತ ಸಮಯಕ್ಕೆ ಅಭ್ಥರ್ಥಿ ಬರದಂಗೆ ನೋಡಿಕೊಳ್ಳುತ್ತಾರೆ. ಇಲ್ಲವೇ ದಾಖಲೆಗಳಲ್ಲಿ ಸಣ್ಣ ತಪ್ಪು ಕಂಡು ಹಿಡಿದು ದಾಖಲೆ ಸರಿಯಿಲ್ಲ ಎಂದು ಕೊನೆ ಕ್ಷಣದಲ್ಲಿ ವಾಪಸು ಕಳಿಸುತ್ತಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಮೋಸ ಮಾಡಿ ಸೀಟನ್ನು ಉಳಿಸಿಕೊಳ್ಳುತ್ತಾರೆ. ಕಳೆದ 2018-19 ನೇ ಸಾಲಿನಲ್ಲಿ ಈ ರೀತಿ ಇನ್ನೂರಕ್ಕೂ ಹೆಚ್ಚು ಸೀಟು ಮೋಸ ಮಾಡಿದ್ದರು. ಈ ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿ ದಾಖಲೆಗಳನ್ನು ಪಡೆದು ದೂರು ಸಲ್ಲಿಸಿದ್ದೆ. ಈವರೆಗೂ ಸಂಬಂಧಪಟ್ಟ ಕಾಲೇಜುಗಳ ಮೇಲೆ ಇಲಾಖೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ವಕೀಲ ನಟರಾಜ್ ಶರ್ಮಾ ತಿಳಿಸಿದ್ದಾರೆ.