1975ರದು ತುರ್ತು ಪರಿಸ್ಥಿತಿಯಲ್ಲ, ಸರ್ವಾಧಿಕಾರ: ಎಸ್ ಎಲ್ ಭೈರಪ್ಪ
ಬೆಂಗಳೂರು, ಆಗಸ್ಟ್ 13: 1975 ರಲ್ಲಿ ದೇಶದಲ್ಲಿದ್ದಿದ್ದು ತುರ್ತು ಪರಿಸ್ಥಿತಿಯಲ್ಲ, ಸರ್ವಾಧಿಕಾರ ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಹೇಳಿದರು.
ಬೆಂಗಳೂರಿನ ಟೌನ್ ಹಾಲ್ ನಲ್ಲಿ ಸಾಹಿತ್ಯ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ 'ನಿರ್ಮಾಲ್ಯ' ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡುತ್ತಿದ್ದರು.
ಮೋಹನ್ ಭಾಗವತ್ ರಿಂದ ಆ.12ಕ್ಕೆ 'ನಿರ್ಮಾಲ್ಯ' ಕೃತಿ ಲೋಕಾರ್ಪಣೆ
'ನಿರ್ಮಾಲ್ಯ'ವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ದಿ.ನಾ.ಕೃಷ್ಣಪ್ಪ ಅವರ ಬದುಕನ್ನು ಮೆಲುಕು ಹಾಕುವ ಕೃತಿಯಾಗಿದ್ದು, ಕೃತಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಮೋಹನ್ ಭಾಗವತ್ ಲೋಕಾರ್ಪಣೆಗೊಳಿಸಿದರು. ಆರೆಸ್ಸೆಸ್ ನ ಹಿರಿಯ ಪ್ರಚಾರಕರಾದ ಚಂದ್ರಶೇಖರ ಭಂಡಾರಿ ಅವರು ರಚಿಸಿದ ಈ ಕೃತಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಾವಿರಕ್ಕೂ ಹೆಚ್ಚು ಜನ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಬಾಲ್ಯದ ಗೆಳೆಯರಾಗಿದ್ದ ನಾ ಕೃಷ್ಣಪ್ಪ ಅವರೊಂದಿಗೆ ಒಡನಾಡಿದ ಅಮೂಲ್ಯ ಕ್ಷಣಗಳನ್ನು ಎಸ್ ಎಲ್ ಭೈರಪ್ಪ ಅವರು ಸ್ಮರಿಸಿದರು. 'ನಾ ಕೃಷ್ಣಪ್ಪ ಅವರು ನನಗೆ ಗುರು, ನಮ್ಮಿಬ್ಬರದು ಏಕವಚನದ ಸಲಿಗೆಯ ಗೆಳೆತನ. ನನ್ನಲ್ಲಿ ಗಂಭೀರ ಸಾಹಿತ್ಯದ ಹುಚ್ಚು ಹಿಡಿಸಿದ್ದು ಮತ್ತು ದೊಡ್ಡ ದೊಡ್ಡ ಕೃತಿಗಳ ರಚನೆಗೆ ಪ್ರೇರಣೆಯಾಗಿದ್ದು ನಾ.ಕೃಷ್ಣಪ್ಪ ಅವರೊಂದಿಗಿನ ಒಡನಾಟ' ಎಂದು ಭೈರಪ್ಪ ಹೇಳಿದರು. (ಚಿತ್ರಕೃಪೆ: ಸಂವಾದ.org)
ತುರ್ತು ಪರಿಸ್ಥಿತಿಯಲ್ಲ, ಸರ್ವಾಧಿಕಾರ
'ತುರ್ತು ಪರಿಸ್ಥಿತಿಯ ಸಮಯದಲ್ಲಿ ನಾ ಕೃಷ್ಣಪ್ಪ ಅವರ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಅವರು ಎಲ್ಲಿದ್ದಾರೆ ಎಂಬುದು ಗೊತ್ತಿರಲಿಲ್ಲ. ಹೀಗಿರುವಾಗ ಒಂದು ದಿನ ತಡರಾತ್ರಿ ಅವರು ಮಾರುವೇಷದಲ್ಲಿ ನಮ್ಮ ಮನೆಗೆ ಬಂದಿದ್ದರು. ಅವರು ಜೈಲಿನಲ್ಲಿದ್ದಿರಬಹುದು ಎಂದುಕೊಂಡಿದ್ದ ನನಗೆ ಆಶ್ಚರ್ಯವಾಗಿತ್ತು.'
'ನಿಮ್ಮನ್ನು ಜೈಲಿಗೆ ಹಾಕಲಿಲ್ಲವೇ?' ಎಂದು ನಾನು ಅವರಲ್ಲಿ ಪ್ರಶ್ನಿಸಿದ್ದೆ. ನನ್ನ ಪ್ರಕಾರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿಗೆ ಹೋಗುವುದೆಂದರೆ ಮಹಾ ಸಾಧನೆ ಎಂದುಕೊಂಡಿದ್ದೆ. ಆದರೆ ಅವರು ಹೇಳಿದ್ದೇ ಬೇರೆ! 'ಜೈಲಿಗೆ ಹೋಗಿಬಿಟ್ಟರೆ ಅಲ್ಲಿ ಆರಾಮಾಗಿ ಊಟಮಾಡಿಕೊಂಡು ಇದ್ದುಬಿಡಬಹುದು. ಈ ಸಂದರ್ಭದಲ್ಲಿ ನಮ್ಮಂಥ ಕಾರ್ಯಕರ್ತರು ಜೈಲಿಗೆ ಹೋದರೆ, ಜನರಲ್ಲಿ ಸರ್ಕಾರದ ಸರ್ವಾಧಿಕಾರದ ಬಗ್ಗೆ ಅರಿವು ಮೂಡಿಸುವ ಕೆಲಸ ಯಾರು ಮಾಡಬೇಕು?' ಎಂದು ಕೇಳಿದ್ದರು. ಬಂದಂತೆಯೇ ನಸುಕಿನ ಜಾವದಲ್ಲಿ ಎಲ್ಲಿಗೆ ಹೋಗುತ್ತೇನೆ ಎಂದೂ ಹೇಳದೆ ಮರೆಯಾಗಿದ್ದರು... ' ಎಂದು ನಾ ಕೃಷ್ಣಪ್ಪ ಅವರ ಉದಾತ್ತ, ದೇಶಪ್ರೇಮಿ ವ್ಯಕ್ತಿತ್ವವನ್ನು ಭೈರಪ್ಪ ಸ್ಮರಿಸಿದರು.
ಮೋದಿಯನ್ನು ದ್ವೇಷಿಸುವ ಬದಲು ಅವರ ಕೆಲಸವನ್ನು ಪ್ರೀತಿಸಿ: ಭೈರಪ್ಪ
ಕೃಷ್ಣಪ್ಪ ಅವರ ಸಾಮಿಪ್ಯ ಸಿಕ್ಕಿದ್ದು ಪುಣ್ಯ: ಭಾಗವತ್
ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಮೋಹನ್ ಭಾಗವತ್ ಅವರು, ನಾ ಕೃಷ್ಣಪ್ಪ ಅವರ ಸಾಮೀಪ್ಯ ದೊರೆತಿದ್ದು ನಮ್ಮ ಪುಣ್ಯ ಎಂದರು. 'ಪೂರ್ಣ ಸಮರ್ಪಣಾ ಭಾವದಿಂದ ಯಾವುದೇ ಕೆಲಸ ಮಾಡಿದರೂ ಅದು ಯಶಸ್ವಿಯಾಗುತ್ತದೆ. ಅದಕ್ಕೆ ನಾ ಕೃಷ್ಣಪ್ಪ ಅವರ ಬದುಕು ಒಂದು ಉದಾಹರಣೆ. 'ನಿರ್ಮಾಲ್ಯ' ಕೃತಿಯನ್ನು ಕೊಂಡು, ನಿಮ್ಮೆಲ್ಲರ ಮನೆಯಲ್ಲಿಯೂ ಇಡಿ. ನಿಮ್ಮ ಮಕ್ಕಳಿಗೆ ಇದನ್ನು ಓದಿಸಿ. ಇಂಥವರ ಬದುಕು ಮುಂದಿನ ತಲೆಮಾರಿನ ಮಕ್ಕಳಿಗೆ ಪ್ರೇರಣೆಯಾಗಲಿ ಎಂದರು.
ವನಸುಮದಂತೆ ಕೃಷ್ಣಪ್ಪ ಅವರ ಬದುಕು: ಭಾಗವತ್
'ನಾ ಕೃಷ್ಣಪ್ಪ ಅವರ ಬದುಕು ಒಂದು ಹೂವಿನಂತೆ. ಅದು ಸುಂದರವಾಗಿ ಅರಳಿ, ಸುವಾಸನೆ ಬೀರಿ ಯಾವ ಫಲಾಪೇಕ್ಷೆಯೂ ಇಲ್ಲದೆ ಹೇಗೆ ಹೊರಟುಹೋಗುತ್ತದೋ, ಅವರ ಬದುಕೂ ಹಾಗೆ. ಆದರೆ ಅವರು ಉಳಿಸಿಹೋದ ಮೌಲ್ಯಗಳು, ನಡೆದ ದಾರಿ ನಮ್ಮ ಮಕ್ಕಳಿಗೆ ಪ್ರೇರಣೆಯಾಗಲಿ.ಶಿವಾಜಿ ಹುಟ್ಟಬೇಕು, ಆದರೆ ನಮ್ಮ ಮನೆಯಲ್ಲಲ್ಲ ಎಂಬ ಮನೋಭಾವ ಬದಲಾಗಲಿ. ನಮ್ಮ ಮಕ್ಕಳನ್ನೂ ವೀರನಾಯಕರನ್ನಾಗಿ ಮಾಡುವ, ಅವರಲ್ಲಿ ದೇಶಪ್ರೇಮ ಬಿತ್ತುವ ಕೆಲಸವಾಗಲಿ. ಇಂಥ ಪುಸ್ತಕಗಳಿಂದ ಅದು ಸಾಧ್ಯ ಎಂದು ಭಾಗವತ್ ಅಭಿಪ್ರಾಯಪಟ್ಟರು.
ಪುಸ್ತಕ ಪರಿಚಯಿಸಿದ ದತ್ತಾತ್ರೇಯ ಹೊಸಬಾಳೆ
ಪುಸ್ತಕ ಪರಿಚಯಿಸಿದ ದತ್ತಾತ್ರೇಯ ಹೊಸಬಾಳೆ ಅವರು ಲೇಖಕ ಸಂದ್ರಶೇಖರ ಭಂಡಾರಿ ಅವರು ನಾ ಕೃಷ್ಣಪ್ಪ ಅವರ ಉದಾತ್ತ ವ್ಯಕ್ತಿತ್ವವನ್ನು ಅಕ್ಷರಕ್ಕಿಳಿಸುವ ಪ್ರಯತ್ನ ಮಾಡಿದ್ದು ಶ್ಲಾಘನೀಯ ಎಂದರು. ಒಬ್ಬ ಸಾಧಕ ಹೇಗೆ ಬದುಕಬಲ್ಲ ಎಂಬುದನ್ನು ನಾ ಕೃಷ್ಣಪ್ಪ ಒಂದು ಉದಾಹರಣೆ ಎಂದ ಅವರು, ನಾ ಕೃಷ್ಣಪ್ಪ ಅವರು ನೂರಾರು ಜನರಿಗೆ ಬರೆದ ಎಷ್ಟೋ ಪತ್ರಗಳಿವೆ. ಅವೆಲ್ಲವನ್ನೂ ಸೇರಿಸಿ ಒಂದು ಪುಸ್ತಕ ಮಾಡಿದರೂ, ಅದೇ ಒಂದು ಅತ್ಯುತ್ತಮ ಗ್ರಂಥವಾಗುತ್ತದೆ ಎಂಬ ಸಲಹೆ ನೀಡಿದರು. ಕೃತಿ ಕರ್ತೃ ಚಂದ್ರಶೇಖರ ಭಂಡಾರಿ, ಆರ್ಎಸ್ಎಸ್ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್, ದಕ್ಷಿಣ ಮಧ್ಯ ಸಂಘ ಚಾಲಕ ವೆಂಕಟ್ರಾಂ ಉಪಸ್ಥಿತರಿದ್ದರು.