ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನ
ಬೆಂಗಳೂರು, ಆಗಸ್ಟ್, 28 : ರಾಜ್ಯ ಪ್ರವಾಸೋದ್ಯಮ ಇಲಾಖೆ ಪೆಸಿಫಿಕ್ ಏಷಿಯಾ ಟ್ರಾವೆಲ್ ಅಸೋಸಿಯೇಷನ್ ಮಾರ್ಟ್(ಪಿಎಟಿಎ) 38ನೇ ಅಂತರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನ ಹಮ್ಮಿಕೊಂಡಿದೆ.
ಈ ಸಮ್ಮೇಳನವು ಸೆಪ್ಟೆಂಬರ್ 6 ರಿಂದ 8 ಅಂದರೆ ಭಾನುವಾರದಿಂದ ಸೋಮವಾರದವರೆಗೆ ನಗರದ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದು, ಕರ್ನಾಟಕ 1.08 ಕೋಟಿ ಬಿಡ್ ಮಾಡುವ ಮೂಲಕ ಅವಕಾಶ ಪಡೆದುಕೊಂಡಿದೆ.[ಮೈಸೂರು : ಕೆಎಸ್ಟಿಡಿಸಿ ಟೂರ್ ಪ್ಯಾಕೇಜ್ ವಿವರಗಳು]
ಈ ಸಮ್ಮೇಳನದಲ್ಲಿ ಭಾಗವಹಿಸಲು ವಿಶ್ವದ ರಾಷ್ಟ್ರಗಳಿಂದ ಸಾವಿರಕ್ಕೂ ಹೆಚ್ಚು ಮಂದಿ ನೊಂದಣಿ ಮಾಡಿಕೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳ 400ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಲಿವೆ ಎಂದು ಪ್ರವಾಸೋದ್ಯಮ ಸಚಿವ ಆರ್.ವಿ ದೇಶಪಾಂಡೆ ತಿಳಿಸಿದ್ದಾರೆ.
ವಿಶ್ವದ ಸಣ್ಣ ರಾಷ್ಟ್ರಗಳಾದ ಸಿಂಗಾಪುರ್, ಮಲೇಷಿಯಾ ರಾಷ್ಟ್ರಗಳು ದೇಶದ ಒಟ್ಟು ವರಮಾನದ 15 ರಿಂದ 20ರಷ್ಟ್ಟು ಪಾಲನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಮೀಸಲಿಟ್ಟಿದೆ. ಆದರೆ ನಾವು ನೈಸರ್ಗಿಕ ಸಂಪನ್ಮೂಲ ಹೇರಳವಾಗಿದ್ದಾಗಲೂ ಕೇವಲ 6% ಮಾತ್ರ ಮೀಸಲಿಟ್ಟಿದ್ದೇವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಾಜ್ಯ ಅಭಿವೃದ್ಧಿ ಹೊಂದಲು ಹೆಚ್ಚು ಪ್ರೋತ್ಸಾಹ ಅಗತ್ಯವಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಟ್ರಾವೆಲ್ ಮಿತ್ರ ಸೇವೆ :
ಗೃಹ ಇಲಾಖೆಯ ನೆರವಿನಿಂದ ಪ್ರವಾಸಿಗರ ಸುರಕ್ಷತೆಗೆ ಟ್ರಾವೆಲ್ ಮಿತ್ರ ಸೇವೆ ಆರಂಭಿಸಲು ತೀರ್ಮಾನಿಸಿದ್ದೇವೆ. ರಾಜ್ಯದ ಐದು ವಿಶ್ವವಿದ್ಯಾಲಯಗಳಲ್ಲಿ ಪ್ರವಾಸೋದ್ಯಮ ಅಧ್ಯಯನ ವಿಭಾಗ ಪ್ರಾರಂಭ ಮಾಡಲಾಗುತ್ತಿದೆ.
ಇವುಗಳ ಜೊತೆಗೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಹೋಟೆಲ್, ವಸತಿ, ಸಾರಿಗೆ, ಸಂಪರ್ಕ, ಪ್ರವಾಸಿ ತಾಣಗಳ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.