ಅಂಗನವಾಡಿ ಮಕ್ಕಳಿಗೆ ಆರುದಿನವೂ ಮೊಟ್ಟೆ ಭಾಗ್ಯ
ಬೆಂಗಳೂರು, ಫೆಬ್ರವರಿ 3: ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು ಸರಕಾರ ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆಯನ್ನು ವಿತರಿಸಲು ಮುಂದಾಗಿದೆ. ವಾರದ ಆರೂ ದಿನವೂ ಮಕ್ಕಳಿಗೆ ಮೊಟ್ಟೆಯನ್ನು ವಿತರಿಸುವ ಯೋಜನೆಯನ್ನು ಮುಂದಿನ ಬಜೆಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಲಿದ್ದಾರೆ ಎನ್ನಲಾಗಿದೆ.
ಒಂದು ವರ್ಷದಿಂದ ಆರು ವರ್ಷದ ಮಕ್ಕಳಲ್ಲಿ ಆಪೌಷ್ಟಿಕತೆ ಹೆಚ್ಚಾಗಿದ್ದು, ದೈಹಿಕ ಬೆಳವಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಅಲ್ಲದೆ ಅಂಗವೈಕಲ್ಯ, ಶ್ವಾಸ ಸಂಬಂಧಿಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಲೂ ರಾಜ್ಯ ಸರಕಾರಕ್ಕೆ ಶಿಫಾರಸ್ಸು ನೀಡಿದ್ದರು. ಈ ಹಿನ್ನೆಲೆ ಅಂಗನ ವಾಡಿ ಮಕ್ಕಳಗೆ ಮೊಟ್ಟೆ ವಿತರಿಸುವ ಅಗತ್ಯವಿದೆ ಎಂದು ವಿವರಿಸಲಾಗಿತ್ತು. ಇದನ್ನು ಪರಿಗಣಿಸಿದ ಸರಕಾರ ಜನವರಿ 18 ರಿಂದ ಆದೇಶ ಹೊರಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಕ್ಕಳಿಗೆ ಮೊಟ್ಟೆ ವಿತರಣೆ ಪ್ರಾರಂಭಿಸಲಾಗಿತ್ತು.[ವಾರಕ್ಕೊಮ್ಮೆ ಮಕ್ಕಳಿಗೆ ರಾಗಿಮುದ್ದೆ ಭಾಗ್ಯ!]
ಆದರೆ ಕೇವಲ ಪರಿಶಿಷ್ಟರಿಗೆ ಈ ಯೋಜನೆ ಹೊರಡಿಸಿ ಅಸಮಾನತೆ ಉಂಟು ಮಾಡಲಾಗಿದೆ ಎಂಬ ಕೂಗು ಕೇಳಿದ ಪರಿಣಾಮ ಈಗ ಮತ್ತೊಂದು ಅಧಿಸೂಚನೆ ಹೊರಡಿಸಿ, ರಾಜ್ಯದ ಎಲ್ಲ ಅಂಗನವಾಡಿಗಳಲ್ಲಿ ವಾರದ ಆರೂ ದಿನವೂ ಮೊಟ್ಟೆ ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ಸರಕಾರ ತರಲು ಮುಂದಾಗಿದೆ.[ಶಾಲಾ ಮಕ್ಕಳಿಗೆ 'ಶೂ ಭಾಗ್ಯ', ಸಂಪುಟದ ಒಪ್ಪಿಗೆ]
ರಾಜ್ಯದ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಯಾಗಿ ಶಾರೀರಿಕ, ಬೌದ್ಧಿಕ ಬೆಳವಣಿಗೆಗೆ ಮೊಟ್ಟೆ ಸಹಕಾರಿಯಾಗಲಿದೆ. ಅಲ್ಲದೆ ಅಂಗನವಾಡಿಗಳಲ್ಲಿ ದಾಖಲಾತಿ ಕುಸಿತವಾಗಿರುವ ಕಾರಣ ಈ ಯೋಜನೆಯಿಂದ ದಾಖಲಾತಿಯ ಪ್ರಮಾಣದಲ್ಲಿಯೂ ಗಣನೀಯವಾಗಿ ಏರಿಕೆ ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.