ದೇಶವನ್ನು ಮುನ್ನಡೆಸಲು ಸಂವಿಧಾನದಿಂದ ಮಾತ್ರ ಸಾಧ್ಯ : ರಣದೀಪ್ ಸಿಂಗ್ ಸುರ್ಜೆವಾಲ
ಬೆಂಗಳೂರು, ಆಗಸ್ಟ್ 16: ಪ್ರಜಾತಂತ್ರ ವ್ಯವಸ್ಥೆ ಮೇಲೆ ನಿರಂತರ ದಾಳಿ ನಡೆಯುತ್ತಿದೆ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ. ಸಂವಿಧಾನದ ಮೇಲೂ ದಾಳಿಯಾಗುತ್ತಿದೆ. ದೇಶದಲ್ಲಿ ವೈಜ್ಞಾನಿಕ ಚಿಂತನೆ ಮೇಲೆ ದಾಳಿ ಮಾಡುತ್ತಿದ್ದಾರೆ. ಈ ದೇಶವನ್ನು ಕೇವಲ ಸಂವಿಧಾನದ ಮೂಲಕ ಮುನ್ನಡೆಸಲಾಗುತ್ತದೆಯೇ ಹೊರತು, ಬೇರೆ ವಿಚಾರಗಳಿಂದ ಅಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದರು.
Recommended Video
ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಮಾಡುತ್ತಿದ್ದು, ಮಹಾತ್ಮ ಗಾಂಧಿ, ಪಂಡಿತ್ ನೆಹರೂ, ಸರ್ದಾರ್ ಪಟೇಲರು, ಮೌಲಾನ ಅಬ್ದುಲ್ ಕಲಾಂ, ಅಂಬೇಡ್ಕರ್ ಸೇರಿದಂತೆ ಲಕ್ಷಾಂತರ ಮಂದಿ ಸ್ವಾತಂತ್ರ್ಯಕ್ಕೆ ಹೋರಾಡಿದರು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು ಎಂದರು.
ಈ ದೇಶದ ಇತಿಹಾಸವನ್ನು ಬದಲಿಸಲು ಯಾರಿಗೂ ಸಾಧ್ಯವಿಲ್ಲ: ಡಿ.ಕೆ ಶಿವಕುಮಾರ್
ಭಾರತ ತನ್ನದೇ ಆದ ಸರ್ಕಾರ ರಚಿಸಿ ಸ್ವಾವಲಂಬನೆಯಾಗಿ ಬದುಕುವ ಸಲುವಾಗಿ, ಸ್ವಾಭಿಮಾನಕ್ಕಾಗಿ ಮಾಡಿದ ಹೋರಾಟ ಫಲದಿಂದಾಗಿ 75 ವರ್ಷಗಳಲ್ಲಿ ಈ ದೇಶ ಬಹಳಷ್ಟು ಬದಲಾಗಿದೆ. ಇಂದು ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ದೇಶ ಭಾರತ. ಕೃಷಿ ಉತ್ಪಾದನೆ, ಉದ್ಯೋಗ, ವಿಜ್ಞಾನ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದರು.
ಅಸಮಾನತೆ ವಿರುದ್ಧ ಹೋರಾಡಬೇಕಿದೆ
ಪ್ರೀತಿ ವಿಶ್ವಾಸದಿಂದ ಈ ದೇಶ ನಡೆಯುತ್ತದೆಯೇ ಹೊರತು ದಬ್ಬಾಳಿಕೆಯಿಂದ ಅಲ್ಲ. ದಲಿತರ ಮೇಲೆ ದಬ್ಬಾಳಿಕೆ ಮಾಡಿ, ಯುವಕರ ಉದ್ಯೋಗ ಕಿತ್ತುಕೊಂಡು, ಮಹಿಳೆಯರ ಗೌರವ ಕಸಿದು ಈ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋದರೆ ಮಾತ್ರ ದೇಶ ಮುಂದೆ ಸಾಗುತ್ತದೆ. ಅಲ್ಪಸಂಖ್ಯಾತರನ್ನು ಕೆಳದರ್ಜೆಯವರಂತೆ ಕಂಡು, ಬಡವರ ಜೀವನ ಕಸಿದರೆ ಈ ದೇಶ ಮುಂದೆ ಸಾಗುವುದಿಲ್ಲ ಎಂದರು.
ಭಾರತದಲ್ಲಿ ಉಡುಗೆ, ವೇಷ ಭೂಷಣ, ವರ್ಣ, ಭಾಷೆ, ಪ್ರದೇಶ, ಧರ್ಮದ ಆಧಾರದ ಮೇಲೆ ಭೇದ ಭಾವ ಮಾಡಲಾಗುತ್ತಿದೆ. ಇದರ ವಿರುದ್ಧ ಪ್ರೀತಿಯಿಂದ ಹೋರಾಡಬೇಕು. ಈ ದೇಶದಲ್ಲಿ ಯಾರೂ ಹಸಿವಿನಿಂದ ಮಲಗಬಾರದು, ಯುವಕರ ಕೈಯಲ್ಲಿ ಉದ್ಯೋಗ, ರೈತರ ನೆಮ್ಮದಿ ಬದುಕು, ದಲಿತರು ಆದಿವಾಸಿಗಳು ಎಲ್ಲರ ಹಿತಕಾಯುವ ದೇಶ ನಿರ್ಮಾಣವಾಗುವ ಮತ್ತೊಂದು ಸ್ವಾತಂತ್ರ್ಯದ ಹೋರಾಟದ ಮಾಡಬೇಕು ಎಂದು ಹೇಳಿದರು.
ನಾವೆಲ್ಲರೂ ದೇಶದ ಸಂವಿಧಾನ, ಬಡವರು, ಯುವಕರು, ರೈತರು, ಶೋಷಿತರ ಪರವಾಗಿ ಹೋರಾಟ ಮಾಡುವ ಪಣ ತೊಡಬೇಕು ಎಂದು ಕರೆ ನೀಡಿದರು.
ಸಂವಿಧಾನದ ಆಶಯವನ್ನೇ ಬುಡಮೇಲು ಮಾಡಲಾಗುತ್ತಿದೆ
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, "ನಾವುಗಳು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ನಮ್ಮ ಪೂರ್ವಜರು ತ್ಯಾಗ ಬಲಿದಾನದಿಂದ ಈ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಆದರೆ ದೆಹಲಿಯಲ್ಲಿ ಕೂತಿರುವ ವಿಶ್ವಗುರು ಸ್ವಾತಂತ್ರ್ಯವನ್ನು ಹತ್ತಿಕ್ಕುವ, ಸಂವಿಧಾನ ಬುಡಮೇಲು ಮಾಡುವ, ಪ್ರಜಾಪ್ರಭುತ್ವ ಧ್ವಂಸ ಮಾಡುವ ಹಾಗೂ ತ್ರಿವರ್ಣ ಧ್ವಜಕ್ಕೆ ಅಗೌರವ ಸೂಚಿಸುವ ಪ್ರಯತ್ನ ಮಾಡುತ್ತಿದ್ದಾರೆ." ಎಂದು ಆರೋಪಿಸಿದರು.
ಸ್ವತಂತ್ರ ಪೂರ್ವದಲ್ಲಿ ಸಂವಿಧಾನ ಇಲ್ಲದಿದ್ದಾಗ ಶೋಷಿತರನ್ನು ಪ್ರಾಣಿಗಿಂತ ಕೀಳಾಗಿ ಕಾಣುತ್ತಿದ್ದರು. ಹೀಗಾಗಿ ನೆಹರೂ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ತಂದು, ಮನುಷ್ಯರನ್ನು ಮನುಷ್ಯರಾಗಿ ಕಾಣುವಂತಹ ಸಮಾನತೆಯ ಭಾರತವನ್ನು ನಾವು ಕಾಪಾಡಬೇಕಿದೆ ಎಂದು ಕರೆ ನೀಡಿದರು.
ಕಳೆದ 75 ವರ್ಷಗಳಲ್ಲಿ ಅಭಿವೃದ್ಧಿ ಹೊಂದುವ ಮೂಲಕ ಇಡೀ ದೇಶಕ್ಕೆ ಬೆಂಗಳೂರು ಮಾದರಿಯಾಗಿದೆಯೇ ಹೊರತು ಗುಜರಾತ್ ಮಾದರಿ ಅಲ್ಲ. ಈ ಹಿರಿಮೆ ಉಳಿಸಿಕೊಳ್ಳಬೇಕಾದರೆ, 40 ಪರ್ಸೆಂಟ್ ಕಮಿಷನ್ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ನೆಹರೂ ಅವರಿಗೆ ಅಪಮಾನ ಮಾಡುವ ಪಕ್ಷ ಬಿಜೆಪಿ. ತ್ರಿವರ್ಣ ಧ್ವಜಕ್ಕೆ, ಸಂವಿಧಾನಕ್ಕೆ ಗೌರವ ನೀಡದವರನ್ನು ಮನೆಗೆ ಕಳುಹಿಸಬೇಕು ಎಂದರು.