ರಾಜ್ಯ ರಾಜಕಾರಣದಿಂದ ಬಿಎಸ್ವೈ ದೂರವಿಡುವ ಪ್ರಯತ್ನ: ಕಾಂಗ್ರೆಸ್ ಟೀಕೆ
ಬೆಂಗಳೂರು, ಆಗಸ್ಟ್ 17: ಬಿಎಸ್ ಯಡಿಯೂರಪ್ಪ ಅವರನ್ನು ಸಂಸದೀಯ ಸಮಿತಿಗೆ ಕಳಿಸುವ ಮೂಲಕ ರಾಜ್ಯ ರಾಜಕಾರಣದಿಂದ ಬಿಎಸ್ವೈ ಮುಕ್ತ ಬಿಜೆಪಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಟೀಕೆ ಮಾಡಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಮತ್ತು ಪಕ್ಷದ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ. ಈ ಬಗ್ಗೆ ಬಿಜೆಪಿ ಬುಧವಾರ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ. ಪಕ್ಷದ ಸಂಸದೀಯ ಮಂಡಳಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸೇರಿಸಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಉನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯಿಂದ ಕೈಬಿಡಲಾಗಿದೆ.
Breaking: ಬಿಜೆಪಿ ಕೇಂದ್ರ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದ ಬಿಎಸ್ ಯಡಿಯೂರಪ್ಪ
ರಾಜ್ಯ ರಾಜಕಾರಣದಿಂದ ಬಿಎಸ್ವೈರನ್ನು ದೂರವಿಡುವ ಪ್ರಯತ್ನ!
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿಯ ಸಂಸದೀಯ ಸಮಿತಿಗೆ ಕಳಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಬಿಎಸ್ವೈ ಮುಕ್ತ ಬಿಜೆಪಿ (BSY mukta BJP) ಮಾಡುವಲ್ಲಿ ಯಶಸ್ವಿ ಹೆಜ್ಜೆಯನ್ನಿಟ್ಟಿದೆ 'ಸಂತೋಷ ಕೂಟ' ಎಂದು ವ್ಯಂಗ್ಯವಾಡಿದೆ.
'ಬಿಎಸ್ ಯಡಿಯೂರಪ್ಪ ಅವರೀಗ ಅಧಿಕೃತವಾಗಿ 'ಮಾರ್ಗದರ್ಶಕ ಮಂಡಳಿ' ಸೇರಿದಂತಾಯಿತು!' ಎಂದು ಕಾಲೆಳೆದಿದೆ. 'ಬಿಎಸ್ ಯಡಿಯೂರಪ್ಪ ಅವರನ್ನು ಮುಗಿಸಿ ಹಾಕುವ ಡಿಮೋಷನ್ ಕೊಟ್ಟು ಪ್ರಮೋಷನ್ ಎಂಬಂತೆ ಬಿಂಬಿಸುತ್ತಿದೆ ಬಿಜೆಪಿ ಕರ್ನಾಟಕ' ಎಂದು ಟೀಕೆ ಮಾಡಿದೆ.
ಬೊಮ್ಮಾಯಿ 'ಆತಂಕೋತ್ಸವ' ಎದುರಿಸುತ್ತಿದ್ದಾರೆ!
ಮುಂದುವರೆದು, "ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿ ಉತ್ಸವವನ್ನು ಕಂಡ ಬಸವರಾಜ ಬೊಮ್ಮಾಯಿಯವರು ಜನೋತ್ಸವ ಮಾಡಲು ಹೆದರಿದ್ದಾರೆ! ಬಿಜೆಪಿಯೊಳಗೆ 'ಕಲಹೋತ್ಸವ' ನಡೆಯುತ್ತಿರುವಾಗ, ಬೊಮ್ಮಾಯಿಯವರು 'ಆತಂಕೋತ್ಸವ'ಎದುರಿಸುತ್ತಿರುವಾಗ, ಸರ್ಕಾರದಲ್ಲಿ ಬಿಜೆಪಿ ಜನೋತ್ಸವ ನಡೆಯುತ್ತಿರುವಾಗ, ಜನರು ಬರುವುದುಂಟೇ, ಜನೋತ್ಸವ ನಡೆಯುವುದುಂಟೇ!" ಎಂದು ವ್ಯಂಗ್ಯವಾಡಿದೆ.
ಮುಂದಿನ ಮುಖ್ಯಮಂತ್ರಿ ನಿರಾಣಿ ಪೋಸ್ಟರ್!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೈಗೊಂಬೆ ಎಂದಿರುವ ಕಾಂಗ್ರೆಸ್, "ಮತ್ತೊಮ್ಮೆ ಜನೋತ್ಸವ ಮುಂದೂಡಲಾಗಿದೆಯಂತೆ. ಬಿಜೆಪಿ ಜನೋತ್ಸವ ಮಾಡುತ್ತಿರುವ ಸಿಎಂ ಬೊಮ್ಮಾಯಿಯವರಿಗೆ ಜನೋತ್ಸವ ಮಾಡುವ ಶಕ್ತಿಯೂ ಇರಲಿಲ್ಲ, ಈಗ ಯೋಗವೂ ಇಲ್ಲ ಎಂದೆನಿಸುತ್ತದೆ! ಸುರೇಶ್ ಗೌಡರ 'ಸಿಎಂ ಬದಲಾವಣೆ' ಹೇಳಿಕೆಗೂ, ಮುಂದಿನ ಸಿಎಂ ನಿರಾಣಿ ಎಂಬ ಪೋಸ್ಟರ್ಗೂ ಹಾಗೂ ಜನೋತ್ಸವದ ಮುಂದೂಡಿಕೆಗೂ ಸಂಬಂಧವಿದೆಯೇ ಬಿಜೆಪಿ?" ಎಂದು ಪ್ರಶ್ನಿಸಿದೆ.
ಯಾರ ರಾಜೀನಾಮೆ ಪಡೆಯುವಿರಿ ಬಸವರಾಜ ಬೊಮ್ಮಾಯಿ?
"ಬಿಜೆಪಿಯ ಜನೋತ್ಸವ ಮುಂದೂಡಿಕೆಯ ಮೇಲೆ ಮುಂದೂಡಿಕೆಯಾಗುತ್ತಿದೆ, ಆದರೆ, ಬಿಜೆಪಿ ಜನೋತ್ಸವ ಮಾತ್ರ ಅಡೆತಡೆಯಿಲ್ಲದೆ ಸಾಗುತ್ತಿದೆ. ಮಾಧುಸ್ವಾಮಿಯವರ ರಾಜೀನಾಮೆ ಕೇಳಿದ ಎಸ್ಟಿ ಸೋಮಶೇಖರ್ ಅವರ ಅಕ್ರಮದ ವಿರುದ್ದ ಪ್ರಧಾನಿಗೆ ಪತ್ರ ಬರೆಯಲಾಗಿದೆ, ಈಗ ಯಾರ ರಾಜೀನಾಮೆ ಪಡೆಯುವಿರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ? ಮಾಧುಸ್ವಾಮಿಯವರದ್ದೋ, ಸೋಮಶೇಖರ್ರದ್ದೋ?" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ಆಯ್ಕೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಮುಖಂಡರು ಅಭಿನಂದನೆ ತಿಳಿಸಿದ್ದಾರೆ.
Recommended Video