ರಸ್ತೆ ಅಗೆದ ಸಂಸ್ಥೆಯೇ ಪುನಃ ರಸ್ತೆ ನಿರ್ಮಿಸಬೆಕು: ಬಿಬಿಎಂಪಿ ಹೊಸ ರೂಲ್ಸ್
ಬೆಂಗಳೂರು, ಏಪ್ರಿಲ್ 19 : ನಗರದ ಹಲವೆಡೆ ರಸ್ತೆ ಅಗೆತದಿಂದಾಗಿ ಉಂಟಾಗುತ್ತಿದ್ದ ಟ್ರಾಫಿಕ್ ಕಿರಿಕಿರಿ ಕಡಿಮೆಯಾಗುವ ಸಾಧ್ಯತೆ ಇದೆ. ಇನ್ನು ಮುಂದೆ ಯಾವ ಸಂಸ್ಥೆ ರಸ್ತೆ ಅಗೆದಿತ್ತೋ ಅದೇ ಸಂಸ್ಥೆ ಪುನಃ ರಸ್ತೆ ನಿರ್ಮಾಣ ಮಾಡಬೇಕು ಎಂದು ಬಿಬಿಎಂಪಿ ಹೊಸ ಆದೇಶ ಮಾಡಿದೆ. ಅಲ್ಲದೆ ಈ ತಕ್ಷಣದಲ್ಲಿ ಈ ಆದೇಶ ಜಾರಿಯಲ್ಲಿರಲಿದೆ ಎಂದು ಪ್ರಕಟಣೆ ಹೊರಡಿಸಿದೆ.
ಪ್ರಸ್ತುತ ಕೆಲವು ಆಯ್ದ ಸಂಸ್ಥೆಗಳಾದ ಗೇಲ್ ಗ್ಯಾಸ್ ಇಂಡಿಯಾ, ಗೇಲ್ ಲಿಮಿಟೆಡ್, ಸಣ್ಣ ನೀರಾವರಿ ಮತ್ತು ಬಿಎಂಆರ್ಸಿಎಲ್ ಸಂಸ್ಥೆಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯಿಂದ ರಸ್ತೆ ಅಗೆತ ಪರವಾನಿಗೆ ಮಾತ್ರ ಪಡೆದು, ರಸ್ತೆ ಪುನಶ್ಚೇತನವನ್ನ ಆಯಾ ಸಂಸ್ಥೆಗಳೇ ನಿರ್ವಹಿಸುತ್ತಿವೆ. ಆದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಇತರೆ ಸಂಸ್ಥೆಗಳು ರಸ್ತೆ ಅಗೆತ ಪರವಾನಿಗೆ ಶುಲ್ಕದ ಜೊತೆಗೆ ರಸ್ತೆ ಅಗೆತದ ಪುನಃಶ್ಚೇತನ ಶುಲ್ಕ ಸಹ ಪಡೆದು ಬಿಬಿಎಂಪಿ ರಸ್ತೆ ಸರಿಪಡಿಸುವ ಕೆಲಸವನ್ನು ಮಾಡುತ್ತಿತ್ತು.
The big change FINALLY : The agency which is digging will have to restore the roads in Bengaluru and we don’t have to suffer for months before BBMP takes up the restoration!!#bettertomorrow @ArvindLBJP @manoharGABJP @JCREDDYPK @Clementcjayakum pic.twitter.com/HLKoae1M2i
— Mahadevapura Task Force-Mobility (@MTF_Mobility) April 18, 2022
ಆದರೆ ಇನ್ನು ಮುಂದೆ ಈ ಸಂಸ್ಥೆಗಳು ಕೇವಲ ರಸ್ತೆ ಅಗೆತದ ಪರವಾನಿಗೆ ಶುಲ್ಕ ಮಾತ್ರ ಕಟ್ಟಬೇಕಿದ್ದು, ರಸ್ತೆ ಪುನಃಶ್ಚೇತವನ್ನ ಆ ಸಂಸ್ಥೆಗಳೇ ಮಾಡಿಕೊಳ್ಳಬೇಕೆಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಈ ಮೂಲಕ ರಸ್ತೆ ಪುನಃಶ್ಚೇತನ ವಿಳಂಬವಾಗುವುದನ್ನ ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗಿದೆ.
ರಸ್ತೆ ಪುನಃಶ್ಚೇತನ ಕಾಮಗಾರಿ ವಿಳಂಬದಿಂದ ನಾಗರಿಕರಿಗೆ ತೊಂದರೆಯಾಗುತ್ತಿರುವ ದೂರುಗಳು ಬಂದ ಹಿನ್ನಲೆ ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ರಸ್ತೆ ಅಗೆತ ಪುನಃಶ್ಚೇತನದ ಕುರಿತು ಸುದೀರ್ಘ ಚರ್ಚೆ ನಡೆಸಿದ್ರು. ಬಳಿಕ ರಸ್ತೆ ಅಗೆಯಲು ಪರವಾನಿಗೆ ಕೋರುವ ಎಲ್ಲಾ ಸಂಸ್ಥೆಗಳೂ ಕೂಡ ತಾವೇ ಮತ್ತೆ ಪುನಶ್ಚೇತನ ಕಾಮಗಾರಿ ನಡೆಸಬೇಕು ಅಂತ ಸೂಚಿಸಿದೆ.
ಸದ್ಯ ಈ ನಿರ್ಧಾರ ಬೆಂಗಳೂರಿಗರಿಗೆ ಕೊಂಚ ರಿಲೀಫ್ ನೀಡಿದ್ದು, ಟ್ರಾಫಿಕ್ ಸ್ವಲ್ಪ ಕಡಿಮೆಯಾಗವ ಸಾಧ್ಯತೆ. ಈ ಹಿಂದೆ ಕೆಲ ಸಂಸ್ಥೆಗಳು ಕರೆಂಟ್ ವೈರ್ ಅಳವಡಿಸಲು ಅಥವಾ ಒಳಚರಂಡಿ, ನೀರು ಸರಬರಾಜು ಇನ್ನಿತರ ಕಾರ್ಯ ಮಾಡಲು ರಸ್ತೆ ಮಧ್ಯ ಅಥವಾ ಪಕ್ಕದಲ್ಲೇ ಅಗೆದು ಹಾಗೇ ಬಿಟ್ಟು ಹೋಗುತ್ತಿದ್ದರು. ಅದನ್ನ ಮುಚ್ಚುವ ಕೆಲಸವನ್ನ ಬಿಬಿಎಂಪಿ ಮಾಡಬೇಕಿತ್ತು. ಕೆಲವೊಮ್ಮೆ ಈ ಕಾರ್ಯ ವಿಳಂಬವೂ ಸಹ ಆಗುತ್ತಿತ್ತು. ಇದರಿಂದ ಮಳೆಗಾಲದಲ್ಲಿ ಗುಂಡಿ ಬೀಳುವುದು ಮತ್ತು ವಾಹನ ಸವಾರರು ಪ್ರಯಾಣಿಸಲು ಕಷ್ಟ ಉಂಟಾಗುತ್ತಿತ್ತು. ಅಲ್ಲದೆ ಕೆಲವರು ಈ ವಿಚಾರದ ಬಗ್ಗೆ ಕೋರ್ಟ್ನಲ್ಲೂ ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು, ಬಿಬಿಎಂಪಿಗೂ ಹಿಡಿ ಶಾಪ ಹಾಕಿದ್ದರು. ಸದ್ಯ ಈಗ ಇದಕ್ಕೆಲ್ಲಾ ಬ್ರೇಕ್ ಬೀಳಲಿದ್ದು, ಇನ್ನು ಮುಂದೆ ರಸ್ತೆ ಅಗೆತ ಮಾಡಿದ ಕಂಪನಿಯೇ ಕೆಲಸ ಮುಗಿದ ಬಳಿಕ ಪುನಃಶ್ಚೇತನದ ಕೆಲಸವನ್ನು ಮುಗಿಸುವಂತೆ ಸೂಚಿಸಿದೆ.
ಸದ್ಯ ಮಳೆಗಾಲ ಆರಂಭಕ್ಕೂ ಮುನ್ನವೇ ಈ ಕಾರ್ಯ ತ್ವರಿತ ಗತಿಯಲ್ಲಿ ಆದರೆ, ಜನ ಸಾಮಾನ್ಯರಿಗೂ ಸಹ ಮಳೆಗಾಲದ ಸಮಯದಲ್ಲಿ ಸಮಸ್ಯೆ ಉಂಟಾಗುವುದು ಕೊಂಚ ಕಡಿಮೆಯಾಗುವ ಸಾಧ್ಯತೆ ಇದೆ.