ತುರಹಳ್ಳಿ ಅರಣ್ಯದಲ್ಲಿ ಸಿಕ್ಕಿದ್ದ ಅರೆಬೆಂದ ದೇಹದ ಕೊಲೆ ರಹಸ್ಯ ಬಯಲು!
ಬೆಂಗಳೂರು, ಏಪ್ರಿಲ್ 14: ತುರಹಳ್ಳಿ ಅರಣ್ಯದಲ್ಲಿ ಇತ್ತೀಚೆಗೆ ಅರೆಬೆಂದ ರೀತಿಯಲ್ಲಿ ಮಧ್ಯ ವಯಸ್ಕನ ಶವ ಸಿಕ್ಕಿತ್ತು. ಅ ಅನಾಥ ಶವದ ವಾಸನೆ ನೋಡಿ ಅರಣ್ಯ ರಕ್ಷಕ ದೂರು ನೀಡಿದ್ದ. ಹತ್ಯೆಯಾದವನ ವಿವರ ಗೊತ್ತಿಲ್ಲ. ಕೊಲೆ ಮಾಡಿದವರು ಯಾರೂ ಎಂಬ ವಿವರ ಇಲ್ಲ. ಪೊಲೀಸ್ ಅಧಿಕಾರಿಯೊಬ್ಬರು ರಚಿಸಿದ ರೇಖಾ ಚಿತ್ರದಿಂದ ಮೃತನ ಗುರುತು ಪತ್ತೆ ಆಗಿದೆ. ಅದರ ಜಾಡು ಹಿಡಿದು ತನಿಖೆ ನಡೆಸಿದ ತಲಘಟ್ಟಪುರ ಪೊಲೀಸರು ನಾಲ್ವರು ಕೊಲೆ ಪಾತಕಿಗಳನ್ನು ಬಂಧಿಸಿದ್ದಾರೆ. ಮಾತ್ರವಲ್ಲ, ಐಷಾರಾಮಿ ಕಾರಿಗಾಗಿ ಅನ್ನ ಕೊಟ್ಟ ದಣಿಗೆ ಹಾಕಿದ್ದ ಹತ್ಯೆಯ ಸಂಚನ್ನೂ ಕೂಡ ಪತ್ತೆ ಮಾಡಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.
ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು
ಕನಕಪುರ ರಸ್ತೆಯಲ್ಲಿರುವ ತುರಹಳ್ಳಿ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿತ್ತು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಬೆಂಕಿಯನ್ನು ಅಗ್ನಿ ಶಾಮಕ ಪೊಲೀಸರು ನಂದಿಸಿದ್ದರು. ಇದಾಗಿ ಎರಡು ದಿನದ ನಂತರ ಕಾಡಿನ ಸಮೀಪ ವಾಸನೆ ಬರುತ್ತಿತ್ತು. ಅದನ್ನು ಗಮನಿಸಿದ ತುರಹಳ್ಳಿ ಅರಣ್ಯ ರಕ್ಷಕ ಅರೆಬೆಂದ ಶವ ನೋಡಿ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪುಟ್ಟೇನಹಳ್ಳಿ ಡಬಲ್ ಮರ್ಡರ್ : ಆರೋಪಿಗಳು ಅಂದರ್ ಆಗಿದ್ದೇ ಥ್ರಿಲ್ಲಿಂಗ್ !
ಕೊರಳಿನಲ್ಲಿದ್ದ ದಾರದಿಂದ ಮೃತನ ಪತ್ತೆ
ದೂರಿನ ಮೇರೆಗೆ ಮೃತದೇಹ ಪತ್ತೆ ಮಾಡಿದಾಗ ಆರಂಭದಲ್ಲಿ ಯಾವುದೇ ಕ್ಲೂ ಸಿಕ್ಕಿರಲಿಲ್ಲ. ಕೊಲೆ ಪ್ರಕರಣ ತನಿಖೆಗೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ವಿಶೇಷ ತನಿಖಾ ತಂಡ ರಚಿಸಿದ್ದರು. ಅಪರಿಚಿತ ಶವ ಕುರಿತು ಪೊಲೀಸ್ ಸಬ್ಇನ್ಸ್ಪೆಕ್ಟರ್ ರಚಿಸಿದ ರೇಖಾ ಚಿತ್ರದಿಂದ ಮೃತನ ಗುರುತು ಪತ್ತೆ ಮಾಡಲು ಅನುಕೂಲವಾಯಿತು. ಹಗರಿಬೊಮ್ಮನಹಳ್ಳಿ ತಾಲೂಕಿನ ನಿವಾಸಿ ಅಮಿತ್ ಎಂಬಾತ ಎಂದು ಗೊತ್ತಾಗಿದೆ. ಈತ ತಲಘಟ್ಟಪುರದ ನಿವಾಸಿ ಬಿಲ್ಡರ್ ಶಶಿಕುಮಾರ್ ಬಳಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ. ಕೂಡಲೇ ಶಶಿಕುಮಾರ್ ಅವರನ್ನು ಪೊಲೀಸರು ವಿಚಾರಣೆ ನಡೆಸಿ, ಅಮಿತ್ ವಾಸವಿದ್ದ ಶೆಡ್ಗೆ ಭೇಟಿ ನೀಡಿದ್ದಾರೆ.
ಹಣಕ್ಕಾಗಿ ಸಂಚು ರೂಪಿಸಿ ಹತ್ಯೆ
ಸೂಪರ್ ವೈಸರ್ ಆಗಿದ್ದ ಅಮಿತ್ಗೆ ಮಾಲೀಕ ಶಶಿಕುಮಾರ್ ಸ್ವಿಪ್ಟ್ ಕಾರು ಕೊಡಿಸಿದ್ದ. ಅಲ್ಲದೇ ನಾಲ್ಕು ಶೆಡ್ ನಿರ್ಮಿಸಿ ಅದರಲ್ಲಿ ಒಂದು ಕೊಠಡಿಯನ್ನು ಅಮಿತ್ಗೆ ನೀಡಿದ್ದ. ಉಳಿದ ಒಂದು ಶೆಡ್ ನಲ್ಲಿ ಉಪಕರಣಗಳನ್ನು ಇಟ್ಟಿದ್ದರು. ಮತ್ತೊಂದು ಶೆಡ್ನಲ್ಲಿ ಬಿಜಾಪುರ ಮೂಲದ ಟಿಪ್ಪರ್ ಚಾಲಕ ನಾಗರಾಜ್ ಮತ್ತು ಕ್ಲೀನರ್ ಆಗಿದ್ದ ಅಪ್ರಾಪ್ತ ಬಾಲಕ ನೆಲೆಸಿದ್ದರು. ಯಾವಾಗ ಅಮಿತ್ ತಂಗಿದ್ದ ಶೆಡ್ಗೆ ಪೊಲೀಸರು ಭೇಟಿ ನೀಡಿದರೊ ಅವಾಗ ರಕ್ತ ಸಿಕ್ತ ಇಟ್ಟಿಗೆ ಕೂಡ ಪತ್ತೆಯಾಗಿತ್ತು. ನಾಗರಾಜ್ ಮತ್ತು ಅಪ್ರಾಪ್ತ ಬಾಲಕನ ಮೇಲೆ ಪೊಲೀಸರ ಅನುಮಾನ ದಟ್ಟವಾಗಿತ್ತು. ಕೂಡಲೇ ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆ ವೃತ್ತಾಂತ ಬಯಲಿಗೆ ಬಂದಿದೆ.
ಮೃತನ ಕಾರಿನಲ್ಲೇ ಶವ ಸಾಗಿಸಿ ಬೆಂಕಿ ಇಟ್ಟರು !
ಬಿಜಾಪುರ ಮೂಲದ ನಾಗರಾಜ್ ಟಿಪ್ಪರ್ ಚಾಲನೆ ಮಾಡುತ್ತಿದ್ದ. ಮೈತುಂಬಾ ಸಾಲ ಮಾಡಿಕೊಂಡಿದ್ದ. ಅಮಿತ್ನನ್ನು ಕೊಲೆ ಮಾಡಿ ಆತನ ಬಳಿಯಿದ್ದ ಕಾರ್ನ್ನು ಮಾರಾಟ ಮಾಡಿ ಸಾಲ ತೀರಿಸಲು ಸ್ಕೆಚ್ ಹಾಕಿದ್ದ. ಅದರಂತೆ ಅಮಿತ್ ನ ತಲೆ ಮೇಲೆ ಇಟ್ಟಿಗೆಯಿಂದ ಒಡೆದು ಕೊಲೆ ಮಾಡಿದ್ದ. ಕ್ಲೀನರ್ ಆಗಿದ್ದ ಪರಿಚಿತನ ಸಹಾಯ ಪಡೆದುಕೊಂಡಿದ್ದ. ಮೃತ ಅಮಿತ್ನ ದೇಹವನ್ನು ಆತನ ಕಾರಿನಲ್ಲಿಯೇ ಹೊರಗೆ ಎತ್ತಿಕೊಂಡು ಹೋಗಿದ್ದಾನೆ. ಟಿಪ್ಪರ್ ಲಾರಿಯಲ್ಲಿ ಡೀಸೆಲ್ ತೆಗೆದುಕೊಂಡಿದ್ದು, ತುರಹಳ್ಳಿ ಅರಣ್ಯದ ಸಮೀಪ ಶವ ಬಿಸಾಡಿ ಸುಟ್ಟು ಹಾಕಿದ್ದಾರೆ. ಇದೇ ವೇಳೆ ಅರಣ್ಯದಲ್ಲಿ ಕೂಡ ಬೆಂಕಿ ಕಾಣಿಸಿಕೊಂಡಿದ್ದರಿಂದ ಯಾರಿಗೂ ಅನುಮಾನ ಬಂದಿಲ್ಲ. ಆನಂತರ ಕಾರಿನ ನಂಬರ್ ಬದಲಿಸಿ ಇಬ್ಬರ ಸಹಾಯದಿಂದ ಗೋವಾದಲ್ಲಿ ಮಾರಾಟ ಮಾಡಿದ್ದಾರೆ. ಮಾತ್ರವಲ್ಲ ಮುಂದಿನ ವಾರ ಅಡಿ ಕಾರ್ ಕೊಡುವುದಾಗಿ ಹೇಳಿ ಬಂದಿದ್ದಾರೆ. ಇದೀಗ ಆರೋಪಿ ನಾಗರಾಜ್, ಅಪ್ರಾಪ್ತ ಬಾಲಕ, ಪರಶುರಾಮ್, ಅರುಣ್ , ಮಂಜುನಾಥ್ ಎಂಬುವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Recommended Video
ಬಿಲ್ಡರ್ ಶಶಿಕುಮಾರ್ ಕೂದಲೆಳೆಯಲ್ಲಿ ಬಚಾವ್
ಬಿಲ್ಡರ್ ಶಶಿಕುಮರ್ ಹತ್ಯೆ ಮಾಡಿ ಆತನ ಬಳಿಯಿದ್ದ ಆಡಿ ಕ್ಯೂ 6 ಕಾರನ್ನು ಕದ್ದು ಮಾರಾಟ ಮಾಡಲು ಹಂತಕ ನಾಗರಾಜ್ ಪ್ಲಾನ್ ರೂಪಿಸಿದ್ದ. ಅಮಿತ್ ಕಾರನ್ನು ಗೋವಾದಲ್ಲಿ ಮಾರಾಟ ಮಾಡಿದವರಿಗೆ ಇನ್ನೊಂದು ವಾರದಲ್ಲಿ ಆಡಿ ಕಾರು ತಂದು ಕೊಡುವುದಾಗಿ ತಿಳಿಸಿದ್ದ. ಅದರಂತೆ ಬಿಲ್ಡರ್ ಶಶಿಕುಮಾರ್ ಹತ್ಯೆಗೂ ನಾಗರಾಜ್ ಸಂಚು ರೂಪಿಸಿದ್ದ. ಇನ್ನೇನು ಹತ್ಯೆ ಮಾಡಿ ಕಾರು ಲಪಟಾಯಿಸುವ ಮೊದಲೇ ಅಮಿತ್ ಹತ್ಯೆ ವೃತ್ತಾಂತ ಬಯಲಾಗಿದೆ. ನಾಲ್ವರು ಆರೋಪಿಗಳು ಜೈಲು ಪಾಲಾಗಿದ್ದಾರೆ. ಒಂದು ರೇಖಾ ಚಿತ್ರದ ಎಳೆ ಇಡಿದುಕೊಂಡು ಇಡೀ ಕೊಲೆ ರಹಸ್ಯವನ್ನು ಪತ್ತೆ ಮಾಡಿದ ತಲಘಟ್ಟಪುರ ಪೊಲೀಸರ ಕಾರ್ಯಶೈಲಿಯನ್ನು ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.