Breaking: ನೂತನ ಲೋಕಾಯುಕ್ತರಿಂದ ಸಬ್ರಿಜಿಸ್ಟರ್ ಕಚೇರಿ ಮೇಲೆ ದಾಳಿ
ಬೆಂಗಳೂರು, ಜೂನ್ 28: ನೂತನ ಲೋಕಾಯುಕ್ತರಾಗಿ ಅಧಿಕಾರವನ್ನು ವಹಿಸಿಕೊಂಡಿರುವ ನ್ಯಾ. ಬಿ. ಎಸ್. ಪಾಟೀಲ್ ಕಾರ್ಯಾಚರಣೆಗೆ ಇಳಿದಿದ್ದಾರೆ. ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿದ್ದ ವ್ಯಾಪಕ ಭ್ರಷ್ಟಾಚಾರದ ವಿರುದ್ದ ಸಮರ ಸಾರಿದ್ದಾರೆ.
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವ್ಯಾಪಕ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಸೇರಿದಂತೆ 10 ಉಪ ನೋಂದಣಾಧಿಕಾರಿಗಳ ಕಚೇರಿಗಳ ಮೇಲೆ ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ವಿವಿಧ ಹಂತದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ; ಸಾಮಾನ್ಯವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಇಸಿ ಸರ್ಟಿಫಿಕೇಟ್ ವಿಳಂಬ, ಅಕ್ರಮವಾಗಿ ಜಮೀನು ಪರಭಾರೆ, ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ, ಖಾತಾ ಮಾಡಿಕೊಡಲು ಸಾರ್ವಜನಿಕರಿಂದ ಹೆಚ್ಚು ಹಣ ವಸೂಲಿ ಸೇರಿದಂತೆ ನಾನಾ ರೀತಿಯ ದೂರುಗಳ ಸರಮಾಲೆ ಲೋಕಾಯುಕ್ತಕ್ಕೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನೂತನ ಲೋಕಾಯುಕ್ತರು ಏಕಕಾಲದಲ್ಲಿ ಹತ್ತು ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಪರಿಶೀಲನೆ ಬಳಿಕ ಆಂತರಿಕ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ.
ಯಾವ ಯಾವ ಕಡೆಗಳಲ್ಲಿ ದಾಳಿ ನಡೆದಿದೆ; ಬೆಂಗಳೂರಿನ ಯಶವಂತಪುರ, ಕೆ. ಆರ್. ಪುರ, ಜಯನಗರ, ನಾಗರಭಾವಿ, ಬೊಮ್ಮನಹಳ್ಳಿ, ಗಂಗಾನಗರ, ಬ್ಯಾಟರಾಯನಪುರ, ಮಾದನಾಯಕನಹಳ್ಳಿ, ಆರ್. ಆರ್. ನಗರ, ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆ ಹಾಗೂ ಜಿಗಣಿ ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಕೆ. ವಿ. ಅಶೋಕ್ ನೇತೃತ್ವದಲ್ಲಿ 10 ಡಿಎಸ್ಪಿ 20 ಮಂದಿ ಇನ್ ಸ್ಪೆಕ್ಟರ್ ಸೇರಿದಂತೆ 50ಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ.