ಫೋನ್ ಕದ್ದಾಲಿಕೆ ಪ್ರಕರಣ: ಸಿಐಐನಿಂದ ಎಡಿಜಿಪಿ ಅಲೋಕ್ ಕುಮಾರ್ ಗೆ ಸಮನ್ಸ್
ಬೆಂಗಳೂರು, ನವೆಂಬರ್ 07: ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ತಂಡ ಮುಂದುವರೆಸಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿ, ಒಂದು ಸುತ್ತಿನ ವಿಚಾರಣೆ ನಡೆಸಿದ್ದ ಸಿಬಿಐ ಈಗ ಮತ್ತೊಮ್ಮೆ ಅಲೋಕ್ ಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಪ್ರಮುಖ ವ್ಯಕ್ತಿಗಳ ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐನಿಂದ ವಿಚಾರಣೆಗೆ ಒಳಗಾಗಿರುವ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಹುದ್ದೆಯಿಂದ ವರ್ಗಾವಣೆ ಮಾಡಲಾಗಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸುಮಾರು 600 ವ್ಯಕ್ತಿಗಳ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ. ಅಲೋಕ್ ಕುಮಾರ್ ಅವರ ನಿವಾಸದಲ್ಲಿಯೇ ದೂರವಾಣಿ ಕದ್ದಾಲಿಕೆಯ ವ್ಯವಸ್ಥೆ ಮಾಡಲಾಗಿತ್ತು ಎಂಬ ಆರೋಪವಿದೆ.
ಫೋನ್ ಟ್ಯಾಪಿಂಗ್ ಹಗರಣದ ಮೂಲ ಪೆನ್ಡ್ರೈವ್ ಎಲ್ಲಿದೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಪೆನ್ಡ್ರೈವ್ ನಲ್ಲಿ ಮೂರು ಆಡಿಯೋ ಕ್ಲಿಪ್ನಲ್ಲಿರುವ ನಗರ ಪೊಲೀಸ್ ಆಯುಕ್ತ ಆಯುಕ್ತ ಭಾಸ್ಕರ್ ರಾವ್ ಮತ್ತು ಬ್ರೋಕರ್ ಪರಾಜ್ ಅಹ್ಮದ್ ಎಂಬುವರ ನಡುವೆ ನಡೆದಿರುವ ಸಂಭಾಷಣೆಯನ್ನು ಡೌನ್ಲೋಡ್ ಮಾಡಲು ಅಲೋಕ್ಕುಮಾರ್ ಹೇಳಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು.
ಅಲೋಕ್ ಗೆ ಮತ್ತೆ ಸಮನ್ಸ್ :
ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ), ಪೊಲೀಸ್ ಇನ್ಸ್ ಪೆಕ್ಟರ್ ಗಳ ವಿಚಾರಣೆ ಮೊದಲಿಗೆ ನಡೆಸಲಾಗುತ್ತಿದ್ದು, ನಂತರ ಅಲೋಕ್ ಕುಮಾರ್ ಗೆ ಸಮನ್ಸ್ ನೀಡಲಾಗುತ್ತದೆ. ಸಿಬಿಐನಿಂದ ಒಟ್ಟು 8 ಎಸಿಪಿ ಹಾಗೂ 54 ಪೊಲೀಸ್ ಇನ್ಸ್ ಪೆಕ್ಟರ್ ಗಳಿಗೆ ಎರಡನೇ ಸುತ್ತಿನ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಏಳು ಮಠಗಳ ಸ್ವಾಮೀಜಿ ಫೋನ್ ಕರೆಗಳನ್ನು ಕದ್ದಾಲಿಸಲಾಗಿದೆ ಎಂಬುದು ಸಿಬಿಐನ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ
ಪ್ರಮುಖ ಮಠಾಧೀಶರ ದೂರವಾಣಿ ಕರೆ ಕದ್ದಾಲಿಕೆ
ಒಕ್ಕಲಿಗ ಮತ್ತು ಲಿಂಗಾಯತ ಮಠಗಳೂ ಸೇರಿದಂತೆ ಕೆಲವು ಪ್ರಮುಖ ಮಠಾಧೀಶರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ರಾಜಕಾರಣಿಗಳ ಸಂಪರ್ಕದಲ್ಲಿರುವ ಪ್ರಮುಖ ಮಠಾಧೀಶರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬುದು ಆರೋಪವಿದೆ. ಮೊದಲ ಸುತ್ತಿನ ತನಿಖೆ ಬಳಿಕ ಟ್ಯಾಪ್ ಆಗಿದ್ದ ಫೋನ್ ನಂಬರ್ ಗಳ ಮಾಹಿತಿಗಳನ್ನು ಸಿಬಿಐ ಸಂಗ್ರಹಿಸಿದೆ.
ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಬಾಳೆಹೊನ್ನೂರಿನ ರಂಭಾಪುರಿ ಸ್ವಾಮೀಜಿ, ಕನಕ ಗುರು ಪೀಠದ ನಿರಂಜನಾನಂದ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಬೋವಿ ಗುರು ಪೀಠದ ಸಿದ್ದೇಶ್ವರ ಸ್ವಾಮೀಜಿ ಫೋನ್ ಕರೆಗಳು ಕದ್ದಾಲಿಸಲಾಗಿದೆ ಎನ್ನಲಾಗುತ್ತಿದೆ.
ಹಗರಣದ ಮೂಲ ಪೆನ್ಡ್ರೈವ್
ಅಲೋಕ್ ಕುಮಾರ್ ನಿರ್ದೇಶನದಂತೆ ಫೋನ್ ಟ್ಯಾಪಿಂಗ್ ಮಾಡಿ ಎಲ್ಲವನ್ನು ಪೆನ್ಡ್ರೈವ್ ನಲ್ಲಿ ಸೇವ್ ಮಾಡಲಾಗಿದೆ ಎಂಬ ಮಾಹಿತಿಯಿದೆ. ಆದರೆ ಪೆನ್ ಡ್ರೈವ್ ಎಲ್ಲಿದೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಪೆನ್ಡ್ರೈವ್ ನಲ್ಲಿ ಮೂರು ಆಡಿಯೋ ಕ್ಲಿಪ್ನಲ್ಲಿರುವ ನಗರ ಪೊಲೀಸ್ ಆಯುಕ್ತ ಆಯುಕ್ತ ಭಾಸ್ಕರ್ ರಾವ್ ಮತ್ತು ಬ್ರೋಕರ್ ಅಹ್ಮದ್ ಎಂಬುವರ ನಡುವೆ ನಡೆದಿರುವ ಸಂಭಾಷಣೆಯನ್ನು ಡೌನ್ಲೋಡ್ ಮಾಡಲು ಅಲೋಕ್ಕುಮಾರ್ ಹೇಳಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು.
ಅಲೋಕ್ ಕುಮಾರ್ ಅವರ ಆದೇಶದಂತೆ ಪೆನ್ಡ್ರೈವ್ ನಲ್ಲಿದ್ದ ಆಡಿಯೋ ಫೈಲ್ಗಳನ್ನು ಡೌನ್ಲೋಡ್ ಮಾಡುವಂತೆ ಹೇಳಿದ್ದರು ಅದರಂತೆ ಡೌನ್ಲೋಡ್ ಮಾಡಿದ್ದೆವು ಎಂದು ಸಿಸಿಬಿ ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ ಮಾಲ್ತೇಶ್ ಮತ್ತು ಮಿರ್ಜಾ ಅಲಿ ಅವರು ಸಿಬಿಐ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದರು.
ಇನ್ನೂ ನಿಗೂಢವಾಗಿ ಉಳಿದಿದೆ ಪ್ರಕರಣ
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರ ಪತ್ನಿ ಹಾಗೂ ಶಾಸಕಿ ಅನಿತಾಕುಮಾರಸ್ವಾಮಿ ದೂರವಾಣಿ ಕರೆಯನ್ನು ಸಹ ಕದ್ದಾಲಿಕೆ ಮಾಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಆದರೆ ಯಾವ ಕಾರಣಕ್ಕಾಗಿ ಇವರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗಿತ್ತು ಎಂಬುದು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿ ಉಳಿದಿದೆ.
ವಿಪಕ್ಷ ಮುಖಂಡರ ಫೋನ್ ಟ್ಯಾಪ್ ಅಲ್ಲದೇ ಸ್ವಪಕ್ಷದವರ ಫೋನ್ ಕೂಡಾ ಕದ್ದಾಲಿಕೆ ಮಾಡಿದ್ದರು. ಕುಮಾರಸ್ವಾಮಿ ಅವರ ಇಬ್ಬರು ಕಾರ್ಯದರ್ಶಿಗಳು ಈ ಎಲ್ಲಾ ಪ್ರಕ್ರಿಯೆಗಳ ನಿಗಾ ವಹಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.