ರಾಜ್ಯಸಭೆ ಚುನಾವಣೆ: ಬಿಜೆಪಿಯಿಂದ ತೇಜಸ್ವಿನಿ ಅನಂತ್ಕುಮಾರ್, ಕಾಂಗ್ರೆಸ್ನಿಂದ ಖರ್ಗೆ..?
ಬೆಂಗಳೂರು, ಜೂನ್ 1: ರಾಜ್ಯಸಭೆ ಚುನಾವಣೆಯ ದಿನಾಂಕ ಸಮೀಪಿಸಿದ್ದು, ಇನ್ನೇನು ಕೇವಲ 2 ವಾರ ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಯಾವ ಪಕ್ಷದಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬ ಚರ್ಚೆ ಜೋರಾಗಿದ್ದು, ಬಿಜೆಪಿಯಿಂದ ತೇಜಸ್ವಿನಿ ಅನಂತ್ ಕುಮಾರ್, ಕಾಂಗ್ರೆಸ್ ನಿಂದ ಖರ್ಗೆ ಹಾಗೂ ಜೆಡಿಎಸ್ ನಿಂದ ದೇವೇಗೌಡರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
Recommended Video
ಇದೇ ತಿಂಗಳು ಜೂನ್ 19 ರಂದು ರಾಜ್ಯದ 4 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಜೂನ್ 9 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ರಾಜ್ಯಸಭೆಯ 18 ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟ
ಸದ್ಯ ರಾಜ್ಯ ವಿಧಾನಸಭೆಯಲ್ಲಿರುವ ಬಲಾಬಲದ ಆಧಾರದ ಮೇಲೆ ಬಿಜೆಪಿ 2 ಸ್ಥಾನ ಗೆಲ್ಲಲಿದ್ದು, ಕಾಂಗ್ರೆಸ್ 1 ಸ್ಥಾನ ಗಳಿಸಲಿದೆ. ಇನ್ನು ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ನಾಲ್ಕನೇ ಸೀಟ್ ಪಡೆಯುವ ಸಾಧ್ಯತೆ ಇದೆ.
ಬಿಜೆಪಿಯಿಂದ ತೇಜಸ್ವಿನಿ ಅನಂತ್ ಕುಮಾರ್?
ಸದ್ಯ ಈ ಮೂರು ಪಕ್ಷದಿಂದ ಯಾವುದೇ ಹೆಸರು ಫೈನಲ್ ಆಗಿಲ್ಲ. ಆದರೆ ಬಿಜೆಪಿ ಪರ ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತವಾಗಿದ್ದ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಹೆಸರು ಕೇಳಿ ಬರುತ್ತಿದೆ. ತೇಜಸ್ವಿನಿ ಅವರಿಗೆ ನಾಯಕರು ಮತ್ತು ಕಾರ್ಯಕರ್ತರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಇವರನ್ನೇ ನೇಮಕ ಮಾಡಬೇಕೆಂದು ಕೆಲವರ ಅಭಿಪ್ರಾಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಭಾಕರ ಕೋರೆಯನ್ನು ಕಣಕ್ಕಿಳಿಸಬೇಕೆಂದು ಒತ್ತಡ!
ಇನ್ನೂ ಆರ್ಎಸ್ಎಸ್ ಮೂಲದ ಪ್ರಭಾಕರ ಕೋರೆ ಅವರನ್ನು ಕಣಕ್ಕಳಿಸಬೇಕೆಂದು ಒತ್ತಡ ಕೇಳಿ ಬರುತ್ತಿದ್ದರೇ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ರಾವ್ ಅವರು ಕರ್ನಾಟಕದಿಂದ ಆಯ್ಕೆ ಬಯಸಿದ್ದಾರೆ ಎನ್ನಲಾಗಿದೆ,ಆದರೆ ಬಿಜೆಪಿ ಕೋರ್ ಕಮಿಟಿ ಈ ಸಂಬಂಧ ಚರ್ಚಿಸಲು ಇನ್ನೂ ಸಭೆ ಸೇರಬೇಕಿದೆ.
ರಾಜ್ಯಸಭೆ ಚುನಾವಣೆ, ಕರ್ನಾಟಕದಲ್ಲಿ 4 ಸ್ಥಾನ ಖಾಲಿ, ರೇಸ್ನಲ್ಲಿ ಯಾರಿದ್ದಾರೆ?
ಜೆಡಿಎಸ್ನಿಂದ ದೇವೆಗೌಡರು ಕಣಕ್ಕೆ?
ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ದೇವೇಗೌಡರ ಹೆಸರು ಕೇಳಿ ಬರುತ್ತಿದೆ, ಜೆಡಿಎಸ್ ನ 34 ಶಾಸಕರಿದ್ದು, ಅವರಿಗೆ ಕಾಂಗ್ರೆಸ್ ಬೆಂಬಲ ಬೇಕಿದೆ, ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ದೇವೇಗೌಡರಿಗೆ ಮತ್ತೊಮ್ಮೆ ಸೋಲುಂಟಾಗುವ ಸಾಧ್ಯತೆಯಿದೆ ಎಂದು ಜೆಡಿಎಸ್ ನಾಯಕರು ಸಂಶಯ ವ್ಯಕ್ತ ಪಡಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಗೆ ಸಿಗುತ್ತಾ ಅವಕಾಶ?
ಇನ್ನೂ ಕಾಂಗ್ರೆಸ್ನಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಹೆಸರು ಕೂಡ ಕೇಳಿ ಬರುತ್ತಿದೆ. ಆದರೆ ಈ ಸಂಬಂಧ ಪಕ್ಷ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ರಾಜ್ಯಸಭೆಗೆ ಅಯ್ಕೆಯಾಗಬೇಕಾದರೇ ಪ್ರತಿ ಅಭ್ಯರ್ಥಿಗೆ 45 ಶಾಸಕರು ಮತ ಹಾಕಬೇಕು. ಇದರ ನಡುವೆ ವಿಧಾನಸಭೆಯಲ್ಲಿ 34 ಸದಸ್ಯರನ್ನು ಹೊಂದಿರುವ ಜೆಡಿಎಸ್, ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್ ಅನ್ನು ಬೆಂಬಲಿಸಬಹುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.