ಹತ್ಯೆಗೆ ಸಂಚು ಆರೋಪ: ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಏನಂದ್ರು?
ಬೆಂಗಳೂರು, ಜನವರಿ 17: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಮ್ಮ ಮೇಲೆ ಕೊಲೆಗೆ ಸಂಚು ರೂಪಿಸಲು ಪರೋಕ್ಷವಾಗಿ ಕಾರಣ ಎಂದು ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ.
ಪೌರತ್ವ ನಿಷೇಧ ಕಾಯ್ದೆ ಪರವಾಗಿ ನಡೆದ ಶಾಂತಿಯುವ ಮೆರವಣಿಗೆಯಲ್ಲಿ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯವರನ್ನು ಕೊಲ್ಲಲು ಸಂಚು ನಡೆದಿತ್ತು ಎಂದು ಪೊಲೀಸರು ನೀಡಿರುವ ಮಾಹಿತಿ ಕುರಿತು ಅವರು ಮಾತನಾಡಿದರು.
ಸಂಸದ ತೇಜಸ್ವಿ , ಸೂಲಿಬೆಲೆ ಕೊಲೆಗೆ ಸಂಚು: ಪೊಲೀಸರಿಂದ ಬಂತು ಆಘಾತಕಾರಿ ಮಾಹಿತಿ
ಹೌದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಸ್ಡಿಪಿಐ ಕಾರ್ಯಕರ್ತರ ಮೇಲಿದ್ದ 1500 ಕ್ಕೂ ಹೆಚ್ಚು ಪ್ರಕರಣಗಳನ್ನು ವಾಪಸ್ ಪಡೆದಿರುವುದೇ ಈಗ ನಮ್ಮ ಮೇಲೆ ಹತ್ಯೆಗೆ ಸಂಚು ರೂಪಿಸಲು ಕಾರಣವಾಯಿತು ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವರುಣ್ (31) ಎಂಬಾತನ ಮೇಲೆ ಚಾಕು ಇರಿದು ಕೊಲೆಗೆ ಯತ್ನಿಸಲಾಗಿತ್ತು. ಇಂದು ಬೆಂಗಳೂರಿನ ಟೌನ್ ಹಾಲ್ ಎದುರು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಮೆರವಣಿಗೆಯಲ್ಲಿ ಭಾಗವಹಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ಜೆ.ಸಿ ರೋಡ್ ನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳಿಂದ ಕೊಲೆ ಯತ್ನ ಮಾಡಲಾಗಿತ್ತು. ನಡು ರಸ್ತೆಯಲ್ಲಿಯೇ ಏಕಾಏಕಿ ಚಾಕುವಿನಿಂದ ಚುಚ್ಚಿದ್ದರು.
ಎಸ್ಡಿಪಿಐ ಸಂಘಟನೆ ಬ್ಯಾನ್ ಆಗಬೇಕು
ಎಸ್ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡಬೇಕು, ಇಲ್ಲವಾದಲ್ಲಿ ಇನ್ನಷ್ಟು ಜನರ ಹತ್ಯೆ ನಡೆಯುತ್ತದೆ ಎಂದರು.
ಅಂದು ಕಲ್ಲು ನೇರವಾಗಿ ನನ್ನ ಎದೆಗೆ ಬಂದು ಬಿದ್ದಿತ್ತು
ಚಕ್ರವರ್ತಿ ಸೂಲಿಬೆಲೆ ಮಾತನಾಡಿ, 'ನಾವು ಹಿಂದೂ ಆಗಿ ಯಾವತ್ತೂ ಮೃತ್ಯುವಿಗೆ ಬೆಲೆ ನೀಡುವುದಿಲ್ಲ. ಅಂದು ಮೆರವಣಿಗೆ ವೇಳೆ ಗಟ್ಟಿಯಾದ ಕಲ್ಲು ನೇರವಾಗಿ ನನ್ನ ಎದೆಗೆ ಬಂದು ಬಿದ್ದಿತ್ತು. ಅಷ್ಟು ಜನರ ಮಧ್ಯೆ ನೇರವಾಗಿ ನನಗೆ ಕಲ್ಲು ಬಂದು ಬೀಳುವುದು ಹೇಗೆ ಸಾಧ್ಯ ಎನ್ನುವುದು ನನ್ನ ಪ್ರಶ್ನೆ'
ಎದುರಾಳಿಗಳ ಉದ್ದೇಶ ಸ್ಪಷ್ಟವಾಗಿತ್ತು
ನಮ್ಮನ್ನು ಕೊಲ್ಲುವುದೇ ಎದುರಾಳಿಗಳ ಉದ್ದೇಶ ಎನ್ನುವುದು ಅಂದೇ ಸ್ಪಷ್ಟವಾಗಿತ್ತು. ಕಾರ್ಯಕ್ರಮ ಮುಗಿದ ಮೇಲೆ ಪೊಲೀಸರಿಗೆ ನಾವು ಇದನ್ನು ವಿವರಿಸಿದ್ದೆವು. ನಮಗೆ ಯಾರಿಂದಲೂ ಏನೂ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ಪೊಲೀಸರಿಗೆ ಧನ್ಯವಾದ ತಿಳಿಸಲೇ ಬೇಕು ಎಂದರು.
ಕೊಲ್ಲುವುದು ಅವರ ಸಂಸ್ಕೃತಿ
ಕೊಲ್ಲುವುದು ಅವರ ಸಂಸ್ಕೃತಿ, ದೇಶಕ್ಕಾಗಿ ಹೋರಾಡುವುದು, ದೇಶದ ಕಾನೂನನ್ನು ಕಾಪಾಡುವುದು ನಮ್ಮ ಸಂಸ್ಕೃತಿ, ಇದರಲ್ಲಿ ಯಾರೂ ಪ್ಯಾನಿಕ್ ಆಗುವುದು ಬೇಡ.ನಾವು ಮೃತ್ಯ ದೇವತೆ ಪೂಜೆ ಮಾಡುವವರು ಎಂದೂ ಮೃತ್ಯುವಿಗೆ ಹೆದರುವುದಿಲ್ಲ. ನಮ್ಮನ್ನು ಕೊಲ್ಲಲು ನಿಮ್ಮ ಸಂಚು ಯಾವಾಗಲೂ ಫಲಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.