ಬೆಂಗಳೂರಲ್ಲಿ ಟೆಕ್ಕಿ ವಿಜಯಲಕ್ಷ್ಮೀ ಹತ್ಯೆ, ದೆಹಲಿಯಲ್ಲಿ ಆರೋಪಿ ಬಂಧನ
ಬೆಂಗಳೂರು, ಆಗಸ್ಟ್ 23 : ಟೆಕ್ಕಿ ವಿಜಯಲಕ್ಷ್ಮೀ ಹತ್ಯೆ ಪ್ರಕರಣದ ಆರೋಪಿಯನ್ನು ವೈಟ್ಫೀಲ್ಡ್ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ಆರೋಪಿ ವಿಜಯಲಕ್ಷ್ಮೀ ಪ್ರಿಯಕರನಾಗಿದ್ದು ಇಮ್ಮಡಿಹಳ್ಳಿಯ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು.
ಐಟಿಪಿಎಲ್ನಲ್ಲಿರುವ ಎಂಯು-ಸಿಗ್ಮಾ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯಲಕ್ಷ್ಮೀ (23) ಅವರ ಮೃತದೇಹ ಆ.19ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿಜಯಲಕ್ಷ್ಮೀ ಜೊತೆ ವಾಸವಾಗಿದ್ದ ಹರೀಶ್ ಕುಮಾರ್ (24) ನಾಪತ್ತೆಯಾಗಿದ್ದ.
ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ಉಸಿರುಗಟ್ಟಿಸಿ ಹತ್ಯೆ
ವಿಜಯಲಕ್ಷ್ಮೀ ಸಹೋದರ ನಿತೀಶ್ ಹರೀಶ್ ಕುಮಾರ್ ದೆಹಲಿಯವನು. ಅಕ್ಕನ ಸ್ನೇಹಿತ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದರು. ದೂರವಾಣಿ ಕರೆ ದಾಖಲೆಗಳ ಆಧಾರದ ಮೇಲೆ ದೆಹಲಿಯಲ್ಲಿ ಹರೀಶ್ ಕುಮಾರ್ ಬಂಧಿಸಲಾಗಿದ್ದು, ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಕಡೆಗಣಿಸುತ್ತಿದ್ದಾಳೆ ಎಂದು ಕೊಲೆ ಮಾಡಿದ : ಆರೋಪಿ ಹರೀಶ್ ಕುಮಾರ್ ದೆಹಲಿಯಲ್ಲಿ ಜಿಮ್ ಸೆಂಟರ್ ನಡೆಸುತ್ತಿದ್ದ. ವಿಜಯಲಕ್ಷ್ಮೀ ಅದೇ ಜಿಮ್ನಲ್ಲಿ ತರಬೇತಿ ಪಡೆಯುತ್ತಿದ್ದಳು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು.
ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ, ಜಿ-ಮೇಲ್ ಐಡಿ ಬಗ್ಗೆ ಸಿಐಡಿ ತನಿಖೆ !
ದೆಹಲಿಯಲ್ಲಿ ವ್ಯಾಸಂಗ ಪೂರ್ಣಗೊಳಿಸಿದ ವಿಜಯಲಕ್ಷ್ಮೀಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತ್ತು. ಆಗಸ್ಟ್ 1ರಂದು ಆಕೆ ಬೆಂಗಳೂರಿಗೆ ಆಗಮಿಸಿದಳು. ಪಿಜಿಯಲ್ಲಿದ್ದುಕೊಂಡು ಕೆಲಸಕ್ಕೆ ಹೋಗುತ್ತಿದ್ದಳು. ನಂತರ ಹರೀಶ್ ಕುಮಾರ್ ಕರೆಸಿಕೊಂಡು ಚನ್ನಸಂದ್ರದಲ್ಲಿ ಬಾಡಿಗೆ ಮನೆ ಮಾಡಿ, ಒಟ್ಟಿಗೆ ಇದ್ದರು.
ಆ.11ರಂದು ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ಮನೆ ಮಾಡಿದರು. ಒಟ್ಟಿಗೆ ವಾಸ ಮಾಡುತ್ತಿದ್ದರು. ಆದರೆ, ವಿಜಯಲಕ್ಷ್ಮೀ ಬೆಂಗಳೂರಿಗೆ ಬಂದ ಬಳಿಕ ತನ್ನನ್ನು ಕಡೆಗಣಿಸಿದ್ದಾಳೆ ಎಂಬುದು ಹರೀಶ್ ಕುಮಾರ್ ಆರೋಪವಾಗಿತ್ತು. ಅದಕ್ಕಾಗಿ ಇಬ್ಬರ ನಡುವೆ ಜಗಳವೂ ಆಗಿತ್ತು.
'ನೀನು ಅವಿದ್ಯಾವಂತ. ಈಗ ನಿನಗಿಂತ ನಾನು ಹೆಚ್ಚು ದುಡಿಯುತ್ತೇನೆ' ಎಂದು ವಿಜಯಲಕ್ಷ್ಮೀ ಹರೀಶ್ ಕುಮಾರ್ನನ್ನು ಹೀಯಾಳಿಸುತ್ತಿದ್ದಳು. ಆ.16ರಂದು ಸಂಜೆ ಹರೀಶ್ ಕುಮಾರ್ ದೂರವಾಣಿ ಕರೆಯನ್ನು ವಿಜಯಲಕ್ಷ್ಮೀ ಸ್ವೀಕರಿಸಿರಲಿಲ್ಲ. ಆದ್ದರಿಂದ, ಕಂಪನಿ ಹತ್ತಿರ ಹೋಗಿ ಆತ ಜಗಳವಾಡಿ ಬಂದಿದ್ದ.
ಅಂದು ರಾತ್ರಿ ವಿಜಯಲಕ್ಷ್ಮೀ ಮತ್ತು ಹರೀಶ್ ಕುಮಾರ್ ನಡುವೆ ಜಗಳವಾಗಿದೆ. ವಿಜಯಲಕ್ಷ್ಮೀ ಹರೀಶ್ ಕುಮಾರ್ನನ್ನು ಜೋರಾಗಿ ತಳ್ಳಿದ್ದಾಳೆ, ಗೋಡೆಗೆ ತಲೆ ಬಡಿದು ರಕ್ತಬಂದಿದೆ. ಕೋಪದಲ್ಲ ಆತ ಕುತ್ತಿಗೆ ಹಿಸುಕಿದ್ದು, ವಿಜಯಲಕ್ಷ್ಮೀ ಸಾವನ್ನಪ್ಪಿದ್ದಾಳೆ.
ಆಕೆಯನ್ನು ಹಾಸಿಗೆ ಮೇಲೆ ಮಲಗಿಸಿ ಹರೀಶ್ ಕುಮಾರ್ ಮನೆಗೆ ಬೀಗ ಹಾಕಿಕೊಂಡು ಅಮೃತಸರಕ್ಕೆ ಹೋಗಿದ್ದ, ಬಳಿಕ ದೆಹಲಿಗೆ ತೆರಳಿದ್ದ. ದೂರವಾಣಿ ಕರೆ ದಾಖೆಗಳ ಮಾಹಿತಿ ಅನ್ವಯ ದೆಹಲಿಯಲ್ಲಿ ವೈಟ್ಫೀಲ್ಡ್ ಪೊಲೀಸರು ಹರೀಶ್ ಕುಮಾರ್ ಬಂಧಿಸಿದ್ದಾರೆ.