ಬೆಂಗಳೂರು: ವರದಕ್ಷಿಣೆ ಕಿರುಕುಳ: ಮಹಿಳಾ ಟೆಕ್ಕಿ ಆತ್ಮಹತ್ಯೆ
ಬೆಂಗಳೂರು, ಫೆಬ್ರವರಿ 26 : ರಾಮಮೂರ್ತಿನಗರದ ಕೆಂಪೇಗೌಡ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಮಹಿಳಾ ಟೆಕ್ಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಮೂಲದ ರಶ್ಮಿ (೨೮) ಮೃತಪಟ್ಟವರು.
ಪತಿ ಮತ್ತು ಅತ್ತೆಯ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ರಾಮಮೂರ್ತಿನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಷ್ಟೇ ಅಲ್ಲದೆ ಸಾಯುವ ಮೊದಲು ಅಮೇರಿಕದಲ್ಲಿರುವ ತನ್ನ ಸಹೋದರಿಗೆ ಮೆಸೇಜ್ ಮಾಡಿದ್ದು, ಅದರಲ್ಲಿ ಇದು ನನ್ನ ಕೊನೆ ಮೆಸೇಜ್ ಇನ್ನುಮುಂದೆ ತನ್ನ ಮಗುವನ್ನು ನೀನೇ ನೋಡಿಕೊಳ್ಳಬೇಕು ಎಂದು ಬರೆದಿದ್ದರು. ಮಲ್ಲೇಶ್ವರದಲ್ಲಿರುವ ರಶ್ಮಿ ತಾಯಿಗೆ ಅವರ ಸಹೋದರಿ ವಿಷಯ ತಿಳಿಸಿ ರಶ್ಮಿ ಇದ್ದ ಅಪಾರ್ಟ್ ಮೆಂಟ್ ಗೆ ಬರುವುದರೊಳಗೆ ರಶ್ಮಿ ನೇಣಿಗೆ ಶರಣಾಗಿದ್ದಳು.
ಕೋಲಾರ ಮೂಲದ ರಶ್ಮಿ ತನ್ನದೇ ಊರಿನ ಸತೀಶ್ ಎಂಬುವರನ್ನು 3 ವರ್ಷದ ಹಿಂದೆ ಮದುವೆಯಾಗಿದ್ದರು. ಮಹದೇವಪುರದ ಪ್ರತಿಷ್ಟೀತ ಸಾಫ್ಟ್ ವೇರ್ ಕಂಪನಿಯಲ್ಲಿ ಇಬ್ಬರೂ ಟೆಕ್ಕಿಗಳಾಗಿ ಕೆಲಸ ಮಾಡಿಕೊಂಡಿದ್ದರು. ದಂಪತಿಗೆ ಒಂದು ವರ್ಷದ ಮಗು ಇದೆ. ಶನಿವಾರ ರಾತ್ರಿ ಮನೆಗೆ ತೆರಳಿದ್ದ ರಶ್ಮಿಮಗುವನ್ನು ಅಲ್ಲೇ ಬಿಟ್ಟು ವಾಪಾಸ್ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಂಪತಿ ರಾಮಮೂರ್ತಿನಗರದ ಕೆಂಪೇಗೌಡ ರಸ್ತೆಯಲ್ಲಿರುವ ಸಫೈರ್ ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿದ್ದರು. ಮೃತರ ತಾಯಿ ಕೊಟ್ಟ ದೂರಿನ ಮೇರೆಗೆ ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆಯಲಾಗಿದೆ. ಆತನಿಂದ ಹಿಂಸೆ ಅನುಭವಿಸಿರುವುದಾಗಿ ಆಕೆ ಹೇಳಿಕೊಂಡಿದ್ದಳು.ಇದಾದ ಕೆಲ ಹೊತ್ತಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.