ಬೆಂಗಳೂರಲ್ಲಿ ಟೆಕ್ಕಿಯಿಂದ ತಂದೆ-ತಾಯಿ ಭೀಕರ ಹತ್ಯೆ?
ಬೆಂಗಳೂರು, ಮೇ 11: ನಗರದಲ್ಲಿ ವಿಶ್ವ ಅಮ್ಮಂದಿರ ದಿನದಂದೇ ದಂಪತಿಯ ಬರ್ಬರ ಹತ್ಯೆ ನಡೆದಿದೆ, ಇದರ ಹಿಂದೆ ಮಗನ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ಜೆಪಿ ನಗರದ ಆರ್ಬಿಐ ಲೇಔಟ್ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಗೋವಿಂದಪ್ಪ(65), ಶಾಂತಮ್ಮ(55) ಕೊಲೆಯಾದ ದಂಪತಿ. ಇವರ ಮಗ ನವೀನ್ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ.
ಮದ್ಯದ ಅಮಲಿನಲ್ಲಿ ಹರಿತವಾದ ಆಯುಧದಿಂದ ಹೊಡೆದು ತಂದೆ-ತಾಯಿಯನ್ನು ಕೊಲೆ ಮಾಡಿದ್ದಾನೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ಗೋವಿಂದಪ್ಪ ಅವರು ಆರ್ ಬಿಐ ನಿವೃತ್ತ ನೌಕರನಾಗಿದ್ದು, ಮಗ ನವೀನ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಂದೆ-ತಾಯಿಯನ್ನು ಕೊಲೆ ಮಾಡಿದ್ದು, ಕುಡಿದ ಮತ್ತಿನಲ್ಲಿ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಲ್ಲಿ ದಂಪತಿ ಬರ್ಬರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್
ಪ್ರಕರಣ ಸಂಬಂಧ ನವೀನ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಪ್ರಕರಣದ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಮಾತನಾಡಿ, ಹರಿತವಾದ ಆಯುಧದಿಂದ ಇರಿದು ದಂಪತಿ ಹತ್ಯೆ ನಡೆಸಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಮೃತ ಶಾಂತಮ್ಮ ಗುಮಾಸ್ತೆಯಾಗಿದ್ದರು.
ದುಷ್ಕರ್ಮಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ. ಘಟನೆ ಸಂಬಂಧ ಆ ಪ್ರದೇಶದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.