ಪ್ರಿಯಕರನಿಂದಲೇ ಅಂಗನವಾಡಿ ಟೀಚರ್ ಹತ್ಯೆ
ಬೆಂಗಳೂರು, ನವೆಂಬರ್ 27: ಅಂಗನವಾಡಿ ಶಿಕ್ಷಕಿ ಲಾಡ್ಜ್ ನಲ್ಲಿ ಕೊಲೆಯಾಗಿರುವ ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಸಂಬಂಧ ಮೃತ ಮಹಿಳೆಯ ಪ್ರಿಯಕರನ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಸಿದ್ಧಾಪುರದ ನಿವಾಸಿ ಕಮಲಾ ಅಂಗನವಾಡಿ ಟೀಚರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪಕ್ಕದಲ್ಲೇ ಟೈಲರ್ ಕೆಲಸ ಮಾಡುತ್ತಿದ್ದ ದಿಲೀಪ್ ಕುಮಾರ್ ನನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನವೆಂಬರ್ 25 ರಂದು ಕಮಲಾ ಕಾಣೆಯಾಗಿದ್ದರು. ಈ ಕುರಿತು ಪೋಷಕರು ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಜೆ.ಸಿ. ರಸ್ತೆಯಲ್ಲಿರುವ ಲಾಡ್ಜ್ ನಲ್ಲಿ ಕೊಠಡಿ ಬುಕ್ ಮಾಡಿದ್ದ ದಿಲೀಪ್ ಕುಮಾರ್ ನವೆಂಬರ್ 25 ರಂದು ಕಮಲಾ ಅವರನ್ನು ಕರೆದುಕೊಂಡು ಬಂದಿದ್ದಾನೆ. ಲಾಡ್ಜ್ ನಿಂದ ಹೊರ ಹೋದ ದಿಲೀಪ್ ಕುಮಾರ್ ಎರಡು ದಿನವಾದರೂ ಬಂದಿರಲಿಲ್ಲ. ಕೊಠಡಿಯಿಂದ ವಾಸನೆ ಬರುತ್ತಿದ್ದ ಕಾರಣ ಲಾಡ್ಜ್ ಸಿಬ್ಬಂದಿ ಬಾಗಿಲು ತಟ್ಟಿದ್ದಾರೆ. ಹೊರೆಗೆ ಯಾರೂ ಬಂದಿಲ್ಲ. ಅನುಮಾನಗೊಂಡ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Recommended Video
ಪೊಲೀಸರು ಬಾಗಿಲು ಒಡೆದು ನೋಡಿದಾಗ ಕಮಲಾ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡು ಬಂದಿದೆ. ಪ್ರಿಯಕರ ಕಮಲಾ ಅವರನ್ನು ಕೊಲೆ ಮಾಡಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮಲಾ ಹತ್ಯೆ ಬಳಿಕ ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಇಷ್ಟ ವಿಲ್ಲದೇ ದಿಲೀಪ್ ಕುಮಾರ್ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.