ಉತ್ತಮನಾಗು-ಉಪಕಾರಿಯಾಗು: ವಿವೇಕ್ ಬ್ಯಾಂಡ್ ಅಭಿಯಾನ
ಬೆಂಗಳೂರು, ಜನವರಿ 12 : ಯುವಜನರಲ್ಲಿ ಸಾಮಾಜಿಕ ಸೇವಾ ಮನೋಭಾವ ಪೋಷಿಸುವ 'ಉತ್ತಮನಾಗು-ಉಪಕಾರಿಯಾಗು' ಎಂಬ ಸ್ವಾಮಿ ವಿವೇಕಾನಂದರ ಸಂದೇಶ ಸಾರುವ ವಿವೇಕ್ ಬ್ಯಾಂಡ್ -2018 ಅಭಿಯಾನಕ್ಕೆ ಜಯನಗರದ ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ಶುಕ್ರವಾರ ಚಾಲನೆ ದೊರೆಯಿತು.
ಸಮರ್ಥ ಭಾರತ ಸಂಸ್ಥೆ ಜನವರಿ 12 ರಂದು ಸ್ವಾಮಿ ವಿವೇಕಾನಂದರ 155 ಜಯಂತಿಹಾಗೂ ರಾಷ್ಟ್ರೀಯ ಯುವ ದಿನದ ಅಂಗವಾಗಿ ರಾಜ್ಯಾದ್ಯಂತ ವಿವೇಕ್ ಬ್ಯಾಂಡ್ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅದರ ಭಾಗವಾಗಿ ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ವಿವೇಕಾನಂದರ ನೆನೆದು 'ಯುವದಿನ'ಕ್ಕೆ ಶುಭನುಡಿದ ಗಣ್ಯರು
ವಿವೇಕ್ ಬ್ಯಾಂಡ್ ಅಭಿಯಾನದ ಉದ್ದೇಶ: ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ತಮ್ಮ ವಯಕ್ತಿಕ ಜೀವನದಲ್ಲಿ ಉತ್ತಮ ಗುಣ ಸ್ವಭಾವವನ್ನು ಮೈಗೂಡಿಸಿಕೊಳ್ಳುವುದರ ಜತೆಗೆ ಸಮಾಜಕ್ಕೆ ಉಪಯೋಗವಾಗುವಂತಹ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಹೆಚ್ಚಿನ ಯುವಜನತೆಯನ್ನು ಸ್ಫೂರ್ತಿದಾಯಕ ಕಾರ್ಯಗಳಿಗೆ ಪ್ರೇರೇಪಿಸುವ ಮೂಲಕ ಅನೇಕರಿಗೆ ಆದರ್ಶ ವ್ಯಕ್ತಿಗಳಾಗುವ ಮೂಲ ಉತ್ತಮನಾಗು-ಉಪಕಾರಿಯಾಗು ಎಂಬ ಪರಂಪರೆಯನ್ನು ನಿರ್ಮಿಸುವ ಆಶಯವನ್ನು ಈ ಅಭಿಯಾನ ಹೊಂದಿದೆ. ಈ ಬಾರಿ ಖಾದಿ ಧರಿಸಿ, ಗಿಡವೊಂದನ್ನು ಪೋಷಿಸಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಕುರಿತು ಜಾಗೃತಿ ಮೂಡಿಸಿ, ಯುವ ಜನತೆ ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದೆ.
ಗುರುವಿನ ಗುಲಾಮನಾಗುವ ವರೆಗೆ ಯಶಸ್ಸು ಪಡೆಯಲು ಸಾಧ್ಯವಿಲ್ಲ: ಈ ವೇಳೆ ಮಾತನಾಡಿದ ಇಸ್ರೋ ಮಾಜಿ ಅಧ್ಯಕ್ಷ ಡಾ. ರಾಧಾಕೃಷ್ಣನ್, ಶಿಕ್ಷಕನೆಂದರೆ ಭಾರತೀಯರಿಗೆ ಕೇವಲ ಅಕ್ಷರ ಕಲಿಸುವ ಉದ್ಯೋಗಿಯಲ್ಲ, ಶಿಕ್ಷಕನೆಂದರೆ ಗುರು. ಆತನಿಗೆ ಆಚಾರ್ಯರ ಸ್ಥಾನವಿದೆ. ಗುರು ಮತ್ತು ದೇವರ ನಡುವೆ ನಾವು ಅಂತರ ಕಾಣುವುದಿಲ್ಲ ಹೀಗಾಗಿ ಸ್ವಾಮಿ ವಿವೇಕಾನಂದರು ಶಿಕ್ಷಕರನ್ನು ಗುರುವಿನ ಮೂಲಕ ಆಚಾರ್ಯ ಸ್ಥಾನ ನೀಡಿದ್ದರು ಎಂದು ಬಣ್ಣಿಸಿದರು.
21 ನೇ ಶತಮಾನದಲ್ಲಿ ಭಾರತ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಆರ್ಥಿಕತೆಯ ದಿಗಂತದಲ್ಲಿ ಕೊಂಡೊಯ್ದಿರುವ ಹಿಂದಿನ ಶಕ್ತಿ ನಮ್ಮ ಪರಂಪರೆ ಎನ್ನುವುದನ್ನು ಮರೆಬಾರದು ಎಂದು ಕಳಕಳಿ ವ್ಯಕ್ತಪಡಿಸಿದರು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಹಾಗೆ ಗುರುವಿಗೆ ತಲೆಬಾಗದಿದ್ದರೆ, ಗುರುವಿನ ಆಶೀರ್ವಾದವಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.