ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ಹೆಚ್ಚಳಕ್ಕೆ ಖಂಡನೆ
ಬೆಂಗಳೂರು, ಮೇ 28: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 20-30 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಆಮ್ ಆದ್ಮಿ ಪಕ್ಷ ಖಂಡಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅವರು, 'ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಬೆನ್ನಲ್ಲೇ ಭುಗಿಲೆದ್ದಿರುವ ಆರ್ಥಿಕ ಬಿಕ್ಕಟ್ಟಿಗೆ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಇದರ ಜೊತೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 20-30 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡುವ ನಿರ್ಧಾರ ಸರಿ ಅಲ್ಲ' ಎಂದಿದ್ದಾರೆ.
ಕೊರೊನಾ ನಿಯಂತ್ರಣದಲ್ಲಲ್ಲ, ಭ್ರಷ್ಟಾಚಾರದಲ್ಲಿ ಬಿಬಿಎಂಪಿ ಮುಂದು: ಎಎಪಿ
'ರಾಜ್ಯದಲ್ಲಿ ಹತ್ತು ಮಹಾನಗರ ಪಾಲಿಕೆಗಳು, 58 ನಗರ ಸಭೆಗಳು ಸೇರಿದಂತೆ ಎಲ್ಲಾ ಪುರಸಭೆ, ಪಟ್ಟಣ ಪಂಚಾಯತ್ಗಳಲ್ಲಿ ಜನಾಭಿಪ್ರಾಯವನ್ನು ತೆಗೆದುಕೊಳ್ಳದೆ, ಏಕಾಏಕಿ ತೆರಿಗೆ ಹೆಚ್ಚಳ ಮಾಡಿರುವುದು ಖಂಡನೀಯ. ಸ್ವಯಂ ಘೋಷಿತ ತೆರಿಗೆ ಪ್ರಕಾರ ಕನಿಷ್ಟ ಶೇ. 15 ದರವನ್ನು ಪ್ರತಿ 3 ವರ್ಷಕ್ಕೊಮ್ಮೆ ಹೆಚ್ಚಳ ಮಾಡುವ ನಿಯಮವನ್ನು ಮುಂದಿಟ್ಟುಕೊಂಡು ಕೊರೊನಾವೈರಸ್ ಸಂದರ್ಭದಲ್ಲಿ ಜನರಿಂದ ತೆರಿಗೆ ವಸೂಲಿ ಮಾಡಲು ಮುಂದಾಗಿರುವುದು ಎಷ್ಟು ಸರಿ?' ಎಂದು ಪ್ರಶ್ನಿಸಿದ್ದಾರೆ.
ವಲಸೆ ಕಾರ್ಮಿಕರ ಮನೆಗಳಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳನ್ನು ಬಂಧಿಸಿ: ಪೃಥ್ವಿ ರೆಡ್ಡಿ
'ಉದ್ಯೋಗವಿಲ್ಲದೆ, ವ್ಯಾಪಾರ ವಹಿವಾಟಿನಿಂದಾಗಿ ಆದಾಯವಿಲ್ಲದೇ ಕಂಗೆಟ್ಟಿರುವ ಜನರಿಗೆ ಈಗ ಹೆಚ್ಚಿನ ಹೊರೆ ಹಾಕುವುದು ಅಮಾನವೀಯ ನಡೆಯಾಗಿದೆ. ಪಾಲಿಕೆಗಳ ಅಭಿವೃದ್ಧಿಯ ಕಡೆಗೆ ನಿರ್ಲಕ್ಷ್ಯ ತೋರಿ, ಆಸ್ತಿ ತೆರಿಗೆ ಹೆಚ್ಚಿಸಿ ಸುಲಿಗೆಗೆ ಇಳಿದಿರುವುದನ್ನು ಆಮ್ ಆದ್ಮಿ ಪಕ್ಷ ವಿರೋಧಿಸುತ್ತದೆ' ಎಂದಿದ್ದಾರೆ.