ಕೊಲೆ ಕೇಸಲ್ಲಿ ಜೈಲಿಗೆ ಹೋದ ಮಂತ್ರವಾದಿಯ ಬ್ಲಾಕ್ ಮಾಜಿಕ್ ತಂತ್ರ ಬೆಳಕಿಗೆ
ಬೆಂಗಳೂರು, ಏಪ್ರಿಲ್ 15: ಆತ ರಸ್ತೆ ಮೇಲೆ ಚಿತ್ರ ಬಿಡಿಸಿ ಮಂತ್ರ ಹಾಕಿದ್ರೆ ಬ್ಯಾಂಕ್ ನಲ್ಲಿರುವ ಹಣ ಗೋಡನ್ಗೆ ಬರುತ್ತದೆ! ಮಧ್ಯ ರಾತ್ರಿ ಒಂದೆಡೆ ಕೂತು ಮಂತ್ರ ಪಠಿಸಿದರೆ ಬ್ಯಾಂಕ್ ಲಾಕರ್ ನಲ್ಲಿರುವ ದುಡ್ಡು ಗೋಡೆಗಳನ್ನು ದಾಟಿ ಕೈ ಸೇರುತ್ತದಂತೆ ! ಈತ ಮನಸು ಮಾಡಿದರೆ ಕ್ಷಣ ಮಾತ್ರದಲ್ಲಿ ಶ್ರೀಮಂತರನ್ನಾಗಿ ಮಾಡುತ್ತಾನಂತೆ. ಒಂದೊಂದು ಮಂತ್ರವಿದ್ಯೆಗೂ ಒಂದೊಂದು ಭಿನ್ನ ಹೆಸರು. ಎಂ.ಬಿ. ಟಚ್, ವಾಲ್ ಟಚ್, ಶಿಪ್ಟಿಂಗ್ ಗೋಡನ್ ಟಚ್ ಇವು ಬ್ಲಾಕ್ ಮ್ಯಾಜಿಕ್ ವಿದ್ಯೆಯ ಹೆಸರುಗಳು. ಅಮಿತ್ ಎಂಬ ಯುವಕನ ಕೊಲೆ ಪ್ರಕರಣ ಸಂಬಂಧ ತಲಘಟ್ಟಪುರ ಪೊಲೀಸರು ಬಂಧಿಸಿರುವ ಆರೋಪಿಗಳ ಪೈಕಿ ಬ್ಲಾಕ್ ಮ್ಯಾಜಿಕ್ ಮಂತ್ರವಾದಿ ಕೂಡ ಒಬ್ಬ. ಸದ್ಯ ಜೈಲಿಗೆ ಹೋಗಿರುವ ಆತ, ಮಂತ್ರವಾದಿಯ ತಂತ್ರ ವಿದ್ಯೆ ಪೊಲೀಸರ ಮುಂದೆ ಪ್ರದರ್ಶಿಸಿದ್ದಾನೆ.
ಮಂತ್ರವಾದಿಯ ಹೆಸರು ಅರುಣ್ ರಾಥೋಡ್ ಅಲಿಯಾಸ್ ಮಂಜುನಾಥ್, ಬಿಜಾಪುರದ ಬಸವನ ಬಾಗೇವಾಡಿಯವ. ವ್ಯವಸಾಯ ಮಾಡಿಕೊಂಡಿದ್ದ ಈತ ಅದನ್ನು ಬಿಟ್ಟು ಮಾಟ ಮಂತ್ರ ವಿದ್ಯೆ ಕಲಿತನಂತೆ. ಆನಂತರ ರೈಸ್ ಪುಲ್ಲಿಂಗ್, ಆರ್ಬಿಐ ಫೈಲ್ ಡೀಲಿಂಗ್, ಬ್ಲಾಕ್ ಮಾಜಿಕ್ ಹೀಗೆ ನಾನಾ ಜನರ ಸಂಪರ್ಕ ಸಿಕ್ಕಿ ಇದೀಗ ಫುಲ್ ಟೈಮ್ ಬ್ಲಾಕ್ ಮಾಜಿಕ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದನಂತೆ. ಅಮಿತ್ ಎಂಬ ಮುಗ್ಧ ಯುವಕನ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಪ್ರಮುಖ ಆರೋಪಿ ನಾಗರಾಜ್ನ ಆಪ್ತ ಅರುಣ್ ರಾಥೋಡ್ ಬ್ಲಾಕ್ ಮ್ಯಾಜಿಕ್ ಕಹಾನಿ ಇದು.
ತುರಹಳ್ಳಿ ಅರಣ್ಯದಲ್ಲಿ ಸಿಕ್ಕಿದ್ದ ಅರೆಬೆಂದ ದೇಹದ ಕೊಲೆ ರಹಸ್ಯ ಬಯಲು!
ಅಂದಹಾಗೆ ಮೈತುಂಬಾ ಸಾಲ ಮಾಡಿಕೊಂಡಿದ್ದ ನಾಗರಾಜ್ ಸಾಲ ತೀರಿಸುವ ಜತೆಗೆ ಶ್ರೀಮಂತನಾಗುವ ಕನಸು ಕಾಣುತ್ತಿದ್ದ. ಬ್ಲಾಕ್ ಮ್ಯಾಜಿಕ್ ಅರುಣ್ನನ್ನು ಸಂಪರ್ಕಿಸಿ ಸಲಹೆ ಪಡೆದಿದ್ದ. ಅದಕ್ಕೆ ಅರುಣ್ ರಾಥೋಡ್, ನೀನು ಶ್ರೀಮಂತನಾಗಬೇಕಾದರೆ ಬ್ಲಾಕ್ ಮ್ಯಾಜಿಕ್ ಒಂದೇ ದಾರಿ ಎಂದು ಪುಸಲಾಯಿಸಿದ್ದ. ಇದರ ನಡುವೆಯೇ ಸಾಲ ತೀರಿಸಲು ಸ್ವಿಪ್ಟ್ ಕಾರಿಗೆ ಸ್ಕೆಚ್ ಹಾಕಿದ್ದ ನಾಗರಾಜ್ ಹಗರಿಬೊಮ್ಮನಹಳ್ಳಿ ಮೂಲದ ಅಮಿತ್ನನ್ನು ಕೊಲೆ ಮಾಡಿ ಮೃತ ದೇಹವನ್ನು ತುರಹಳ್ಳಿ ಅರಣ್ಯದಲ್ಲಿ ಹಾಕಿ ಸುಟ್ಟು ಹಾಕಿದ್ದ. ವಿಪರ್ಯಾಸವೆಂದರೆ ದೇಹ ಸಂಪೂರ್ಣ ಸುಟ್ಟಿರಲಿಲ್ಲ. ಈ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡು ತಲಘಟ್ಟಪುರ ಪೊಲೀಸರು ತನಿಖೆ ನಡೆಸಿದ್ದರು.
ಮೃತ ಅಮಿತ್ಗೆ ಸೇರಿದ್ದ ಕಾರನ್ನು ಪ್ರಮುಖ ಆರೋಪಿ ನಾಗರಾಜ್ , ಬ್ಲಾಕ್ ಮ್ಯಾಜಿಕ್ ಧೀರ ಅರುಣ್ ರಾಥೋಡ್ ಗೆ ಕೊಟ್ಟಿದ್ದ. ಅದಕ್ಕೆ ನಕಲಿ ನಂಬರ್ ಸೃಷ್ಟಿಸಿ ಗೋವಾದಲ್ಲಿ ತನ್ನ ಆಪ್ತ ಗೆಳೆಯರ ಮೂಲಕ ಅರುಣ್ ರಾಥೋಡ್ ಮಾರಾಟ ಮಾಡಿದ್ದ. ಹೀಗಾಗಿ ಅರುಣ್ ರಾಥೋಡ್ ನನ್ನ ತಲಘಟ್ಟಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಾನು ಬ್ಲಾಕ್ ಮ್ಯಾಜಿಕ್ ಮಾಡುವ ಸಂಗತಿಯನ್ನು ಬಾಯಿ ಬಿಟ್ಟಿದ್ದಾನೆ.
ಬ್ಯಾಂಕ್ ಲಾಕರ್ ನಲ್ಲಿರುವ ಹಣವನ್ನು ಬೇರಡೆಗೆ ಶಿಫ್ಟ್ ಮಾಡ್ತೇನೆ. ಒಂದು ಗೋಡನ್ನಲ್ಲಿರುವ ಹಣವನ್ನು ವಾಲ್ನಲ್ಲಿಯೇ ಇನ್ನೊಂದು ಗೋಡನ್ಗೆ ಶಿಫ್ಟ್ ಮಾಡಿಸುತ್ತೇನೆ ಎಂದೆಲ್ಲಾ ಹೇಳಿದ್ದಾನೆ. ಇದೆಲ್ಲವನ್ನೂ ಕೇಳಿಸಿಕೊಳ್ಳುವವರೆಗೂ ಕೇಳಿಸಿಕೊಂಡ ಪೊಲೀಸರು ಎರಡು ಬಿಟ್ಟು ಪೊಲೀಸ್ ಲಾಠಿ ರುಚಿ ತೋರಿಸಿದ್ದಾರೆ. ಅವಾಗ ಅಸಲಿ ಸತ್ಯ ಬಾಯಿ ಬಿಟ್ಟು, ಕಾರು ಮಾರಾಟ ವಿಚಾರದಲ್ಲಿ ಶಾಮೀಲಾಗಿರುವ ಸಂಗತಿ ಬಾಯಿ ಬಿಟ್ಟಿದ್ದಾನೆ.
ರೈಸ್ ಪುಲ್ಲಿಂಗ್ ಮಾದರಿಯಲ್ಲಿಯೇ ಬ್ಯಾಂಕ್ ಲಾಕರ್ ಹಣವನ್ನು ಎಗರಿಸುವ ಮಾಟ ಮಂತ್ರ ಮಾಡುವುದಾಗಿ ಅರುಣ್ ರಾಥೋಡ್ ಹೇಳಿದ್ದಾನೆ. ಆಯ್ತು ನೀನು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಅದೇನು ಮಾಡ್ತಿಯೋ ಮಾಡಿ ನಡಿ ಎಂದು ಕೈಗೆ ಕೋಳ ಹಾಕಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಅಟ್ಟಿದ್ದಾರೆ. ಬ್ಲಾಕ್ ಮ್ಯಾಜಿಕ್ ಹೆಸರಿನಲ್ಲಿ ಸಾಕಷ್ಟು ಮಂದಿ ಮೋಸ ಮಾಡುತ್ತಾರೆ. ಅದೇ ರೀತಿ ಇದು ಕೂಡ ಮೋಸ ಮಾಡುವ ತಂತ್ರ. ಯಾರೂ ಕೂಡ ಬ್ಲಾಕ್ ಮ್ಯಾಜಿಕ್ ಮೋಡಿ ತಂತ್ರಗಳಿಗೆ ಬಲಿಯಾಗಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.