ಲಸಿಕೆಗೆ ಕಮಿಷನ್ ಆರೋಪ: ಶಾಸಕ ರವಿ ಸುಬ್ರಮಣ್ಯ ಸ್ಪಷ್ಟೀಕರಣ
ಬೆಂಗಳೂರು, ಮೇ 29: ಖಾಸಗಿ ಆಸ್ಪತ್ರೆಯಲ್ಲಿ ನೀಡಲಾಗುವ ಪ್ರತೀ ಲಸಿಕೆಯ ಮೇಲೆ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರು ಕಮಿಷನ್ ಪಡೆಯುತ್ತಿದ್ದಾರೆ ಎನ್ನುವ ಆರೋಪಕ್ಕೆ, ಶಾಸಕರು ಸ್ಪಷ್ಟನೆಯನ್ನು ನೀಡಿದ್ದಾರೆ.
ನಗರದ ದಕ್ಷಿಣ ಭಾಗದಲ್ಲಿರುವ ಅನುಗ್ರಹ ವಿಠಲ ಆಸ್ಪತ್ರೆಯ ಸಿಬ್ಬಂದಿ ಜೊತೆ ವ್ಯಕ್ತಿಯೊಬ್ಬರು ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಅದರಲ್ಲಿ, ಆಸ್ಪತ್ರೆಯ ಸಿಬ್ಬಂದಿ, ಪ್ರತೀ ಲಸಿಕೆಗೆ ರವಿ ಸುಬ್ರಮಣ್ಯ ಅವರಿಗೆ ಏಳು ನೂರು ರೂಪಾಯಿ ನೀಡಬೇಕೆಂದು ಹೇಳಿದ್ದರು.
ನಮ್ಮ ಕಥೆಯೇ ಹೀಗಾದರೆ ಜನ ಸಾಮಾನ್ಯರ ಪಾಡೇನು?; ಸಿದ್ದರಾಮಯ್ಯ
ನಾನು ನನ್ನ ಮಗನಿಗೆ ಲಸಿಕೆ ಹಾಕಬೇಕು, ಬಿಬಿಎಂಪಿಯಲ್ಲಿ ಉಚಿತವಾಗಿ ಲಸಿಕೆ ಹಾಕುತ್ತಾರೆ. ನೀವ್ಯಾಕೆ ಅಷ್ಟು ಚಾರ್ಜ್ ಮಾಡುತ್ತೀರಾ ಎಂದು ವ್ಯಕ್ತಿ ಪ್ರಶ್ನಿಸಿದಾಗ, ಆಸ್ಪತ್ರೆಯ ಸಿಬ್ಬಂದಿ ಕಮಿಷನ್ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ರವಿ ಸುಬ್ರಮಣ್ಯ, "ಲಸಿಕೆಯಲ್ಲಿ ಕಮಿಷನ್ ಪಡೆದು ಬದುಕುವಂತಹ ದುಸ್ಥಿತಿ ಆ ಭಗವಂತ ನನಗೆ ನೀಡಲಿಲ್ಲ. ನಾನು ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ, ವಿಚಾರಣೆ ನಡೆಸುವಂತೆ ಪೊಲೀಸರಿಗೂ ಮನವಿ ಮಾಡುತ್ತೇನೆ"ಎಂದು ಹೇಳಿದರು.
"ಆರೋಪ ಮಾಡಿರುವವರು ಹೊಟ್ಟೆಗೆ ಅನ್ನ ತಿನ್ನುತ್ತಾರೋ, ಸೆಗಣಿ ತಿನ್ನುತ್ತಾರೋ. ಕ್ಷೇತ್ರದಲ್ಲಿ ಎಲ್ಲರಿಗೂ ಲಸಿಕೆ ಸಿಗುವಂತಾಗಲಿ ಎಂದು ನಾವಿಲ್ಲಿ ಹಗಲಿರುಳು ದುಡಿಯುತ್ತಿದ್ದರೆ, ಇಂತಹಾ ಆರೋಪ ನಮಗೆ ಕೆಲಸ ಮಾಡುವ ಉತ್ಸಾಹವನ್ನು ಕಸಿದುಕೊಳ್ಳುತ್ತದೆ"ಎಂದು ರವಿ ಸುಬ್ರಮಣ್ಯ ಬೇಸರ ವ್ಯಕ್ತ ಪಡಿಸಿದರು.
"ಸತ್ಯ ಪರಿಶೀಲನೆಗೆ ನಾನು ಆ ಆಸ್ಪತ್ರೆಗೆ ಹೋಗಲೂ ನಾನು ಸಿದ್ದ. ವ್ಯಾಕ್ಸಿನ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಾವು ಕೈಯಿಂದ ದುಡ್ಡು ಖರ್ಚು ಮಾಡಿ ಜನರ ಜೀವ ಉಳಿಸಲು ಒದ್ದಾಡುತ್ತಿದ್ದೇವೆ. ನಾನು ನನ್ನ ಆತ್ಮಸಾಕ್ಷಿಗೆ ಕೆಲಸ ಮಾಡುತ್ತಿದ್ದೇನೆ" ಎಂದು ರವಿ ಸುಬ್ರಮಣ್ಯ ಸ್ಪಷ್ಟನೆಯನ್ನು ನೀಡಿದ್ದಾರೆ.
Recommended Video