ಟಗರು ಚಿತ್ರದ ಬೇಬಿ ಕೃಷ್ಣ ಅಲಿಯಾಸ್ ದೇವನಾಥನಿಗೆ ಸಂಕಟ!
ಬೆಂಗಳೂರು, ಜುಲೈ 05: ಡಾ.ಶಿವರಾಜ್ ಕುಮಾರ್ ಅವರು ಅಭಿನಯಿಸಿರುವ 'ಟಗರು' ಚಿತ್ರದಲ್ಲಿ ಬೇಬಿ ಕೃಷ್ಣ ಎಂಬ ಪಾತ್ರ ನಿರ್ವಹಿಸಿದ್ದ ವೈಕೆ ದೇವನಾಥ ಎಂಬುವರ ಮೇಲೆ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.
ಉದ್ಯಮಿಗೆ ಉಂಡೆನಾಮ ತಿಕ್ಕಲು ಹೋಗಿ ಕಂಬಿ ಎಣಿಸುತ್ತಿರುವ 'ಟಗರು' ನಟ.!
ಉದ್ಯಮಿಯೊಬ್ಬರಿಗೆ ವಂಚಿಸಿರುವ ಆರೋಪದಲ್ಲಿ ಬಂಧನವಾಗಿದ್ದ ದೇವನಾಥ ಅವರು ಇತ್ತೀಚೆಗೆ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು. ಈಗ ರಾಮನಗರದ ಜಮೀನು ಮಾರುವುದಾಗಿ ಹೇಳಿ 30 ಲಕ್ಷ ಪಡೆದು ವಂಚಿಸಿರುವುದಾಗಿ ಕನ್ನಡ ಪರ ಕಾಳಜಿಯುಳ್ಳ ಪ್ರಶಾಂತ್ ಸಂಬರ್ಗಿ ಎಂಬವರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಹಿಂದೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲೂ 53 ಲಕ್ಷ ವಂಚನೆ ಕೇಸ್ ದಾಖಲಾಗಿತ್ತು. ಈಗ ನಟನ ವಿರುದ್ಧ ಪ್ರಾಣ ಬೆದರಿಕೆ, ವಂಚನೆ ಕುರಿತಂತೆ ಮತ್ತೊಂದು ಪ್ರಕರಣ ದಾಖಲಾಗಿದೆ. ವೈಕೆ.ದೇವನಾಥನ ಮೇಲೆ ಇದೊಂದೇ ಕೇಸ್ ಅಲ್ಲ, ಇಂತಹ ಹಲವು ಕೇಸ್ ಗಳಿವೆ. ತಾನು 'ಟಗರು' ಚಿತ್ರದ ನಿರ್ಮಾಪಕ ಅಂತ ಹೇಳಿಕೊಂಡು ಎಷ್ಟೋ ಜನಕ್ಕೆ ವೈಕೆ.ದೇವನಾಥ ಮಂಕು ಬೂದಿ ಎರಚಿದ್ದಾನೆ. ಸಾಲದಕ್ಕೆ, ರಾಜಮೌಳಿ ನಿರ್ದೇಶನದ 'ಮಹಾಭಾರತ' ಚಿತ್ರದಲ್ಲಿ 'ಶಕುನಿ' ಪಾತ್ರ ಮಾಡುತ್ತಿರುವೆ ಅಂತ ಹೇಳಿಕೊಂಡು ಅನೇಕರಿಗೆ ವಂಚನೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿದೆ.