ಕೊರೊನಾ ಹೊಡೆದೋಡಿಸಲು ದೇವರ ಮೊರೆಯೂ ದಾರಿ; ಸಚಿವರಿಗೆ ಶರವಣ ಪತ್ರ
ಬೆಂಗಳೂರು, ಏಪ್ರಿಲ್ 1: ವಿಧಾನ ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ಮುಖಂಡರಾದ ಟಿ.ಎ. ಶರವಣ ಅವರು ಕೊರೊನಾ ವೈರಾಣು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
18ನೇ ಶತಮಾನದಲ್ಲಿ ಪ್ಲೇಗ್ ಎಂಬ ಮಹಾಮಾರಿ ಬಂದಾಗ ಎಲ್ಲ ಊರುಗಳಲ್ಲಿ, ಎಲ್ಲ ಧಾರ್ಮಿಕ ಸಂಘಟನೆಗಳು ಸೇರಿ ಶಂಖ ಊದಿ, ಜಾಗಟೆಯನ್ನು ಬಾರಿಸಿ ಆ ಮಹಾಮಾರಿಯನ್ನು ಹೊಡೆದೋಡಿಸುವಂಥ ಪ್ರಯತ್ನವನ್ನು ಮಾಡಿದ್ದರು. ಅದರಲ್ಲಿ ಯಶಸ್ಸನ್ನು ಕೂಡ ಕಂಡಿದ್ದರು.
'ಜನತಾ ಕರ್ಫ್ಯೂ' ಬಗ್ಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ಪ್ರತಿಕ್ರಿಯೆ
ಈಗ ಕೊರೊನಾ ಓಡಿಸುವ ನಿಟ್ಟಿನಲ್ಲಿ ನಮ್ಮದೊಂದು ಬೇಡಿಕೆಯಿದೆ. ಪ್ರತಿದಿನ ದೇವಸ್ಥಾನಗಳಲ್ಲಿ 8 ಗಂಟೆಗೆ ಸರಿಯಾಗಿ ಅಥವಾ ಅನುಕೂಲವಾಗುವಂತ ಒಂದೇ ಸಮಯದಲ್ಲಿ ಐದು ನಿಮಿಷಗಳ ಕಾಲ ಮಹಾಮೃತ್ಯುಂಜಯ ಮಂತ್ರ ಹಾಗೂ ಓಂಕಾರವನ್ನು ಆಡಿಯೋ ಮೂಲಕ, ಸಾಧ್ಯವಾದರೆ ಜೋರಾಗಿ ಹಾಕುವುದು.
ಎಲ್ಲ ದೇವಸ್ಥಾನಗಳಲ್ಲೂ ಒಂದೇ ಸಮಯದಲ್ಲಿ ಹಾಕುವುದರಿಂದ ಅತ್ಯುತ್ತಮವಾದ, ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಅತ್ಯುತ್ತಮವಾದ ಪರಿಣಾಮವನ್ನು ಸಹ ಕಾಣಬಹುದು. ಅದೇ ಸಮಯದಲ್ಲಿ ಜನರು ಕೂಡ ಮನೆಯಲ್ಲಿ ಅದೇ ಮಂತ್ರವನ್ನು ಜಪಿಸುವುದರಿಂದ ಅವರಲ್ಲಿರುವ ಭಯ, ದುಗುಡ, ಆತಂಕ ಕಡಿಮೆ ಆಗುವುದು.
ನಮ್ಮ ಜಪ, ತಪ, ಮಂತ್ರಗಳಲ್ಲಿ ಅತ್ಯದ್ಭುತವಾದ ಶಕ್ತಿಯಿದೆ. ಕೊರೊನಾವನ್ನು ಕೊನೆಗಾಣಿಸುವಲ್ಲಿ ಖಂಡಿತ ಸಹಾಯವಾಗುತ್ತದೆ. ದಯವಿಟ್ಟು, ದಯವಿಟ್ಟು ಸರಕಾರದ ಗಮನಕ್ಕೆ ತಂದು, ಇದನ್ನು ಆಚರಿಸಲು ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿ ಎಂದು ಶರವಣ ಅವರು ಕೇಳಿಕೊಂಡಿದ್ದಾರೆ.