ಭಾರತ ರತ್ನಕ್ಕೆ ಪ್ರಣಬ್ ಗಿಂತ ಸ್ವಾಮಿನಾಥನ್ ಹೆಚ್ಚು ಅರ್ಹ : ಗುಹಾ ವಿವಾದ
ಬೆಂಗಳೂರು, ಜನವರಿ 26 : "ಭಾರತ ರತ್ನ ಪ್ರಶಸ್ತಿಗೆ ಎಂಎಸ್ ಸ್ವಾಮಿನಾಥನ್ ಅಂಥವರನ್ನು ಪರಿಗಣಿಸುವುದು ಬಿಟ್ಟು ವಿವಾದಾತ್ಮಕ ಪ್ರಣಬ್ ಮುಖರ್ಜಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿರುವುದು ನಿಜಕ್ಕೂ ನಿಗೂಢವಾದದ್ದು. ಅವರಿಗೆ ಪ್ರಶಸ್ತಿ ನೀಡಿದ್ದರಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಲ್ಕು ವೋಟುಗಳೂ ಬರುವುದಿಲ್ಲ!"
ಹೀಗೆಂದು 'ಭಾರತ ರತ್ನ' ಪ್ರಶಸ್ತಿ ಘೋಷಣೆಯ ನಂತರ ವಿವಾದಾತ್ಮಕ ಹೇಳಿಕೆ ನೀಡಿದವರು ಖ್ಯಾತ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರು. ವಿಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ, ಬಿಜೆಪಿಯೇತರ ಎಂಎಸ್ ಸ್ವಾಮಿನಾಥನ್ ಅವರಿಗಿಂತ ಅರ್ಹ ವ್ಯಕ್ತಿ ಇರಲಿಲ್ಲ ಎಂದು ಗುಹಾ ಅವರು ಟ್ವೀಟ್ ಮಾಡಿದ್ದಾರೆ.
ಪ್ರಣಬ್ ಮುಖರ್ಜಿ, ನಾನಾಜಿ, ಭೂಪೇನ್ ಹಜಾರಿಕಾಗೆ ಭಾರತರತ್ನ
ನರೇಂದ್ರ ಮೋದಿ ಸರಕಾರ ಭಾರತದ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ಸಿನ ಮಾಜಿ ಹಿರಿಯ ನಾಯಕ ಪ್ರಣಬ್ ಮುಖರ್ಜಿ ಅವರಿಗೆ, ಮತ್ತು ಆಸ್ಸಾಂ ಮೂಲದ ಸಂಗೀತ ನಿರ್ದೇಶಕ, ಗಾಯಕ, ಕವಿ, ಸಂಗೀತ ರಚನೆಕಾರ ಭೂಪೇನ್ ಹಜಾರಿಕಾ ಮತ್ತು ಗ್ರಾಮೀಣಾಭಿವೃದ್ಧಿಗೆ ದುಡಿದ ಸಾಮಾಜಿಕ ಕಾರ್ಯರರ್ತ ನಾನಾಜಿ ದೇಶಮುಖ್ ಅವರಿಗೆ ಮರಣೋತ್ತರ 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಿದ ನಂತರ, ಕೇಂದ್ರ ಸರಕಾರದ ಆಯ್ಕೆಗಳು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿವೆ.
ಬಹುತೇಕ ವಿಶ್ವ ಕನ್ನಡಿಗರ ನಿರೀಕ್ಷೆಯಂತೆ ಇತ್ತೀಚೆಗೆ ವಿಧಿವಶರಾದ, 'ನಡೆದಾಡುವ ದೇವರು' ಎಂದೇ ಖ್ಯಾತರಾಗಿದ್ದ ತುಮಕೂರಿನ ಸಿದ್ದಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡಬೇಕೆಂದು ಆಗ್ರಹವಿತ್ತು. ಅದಕ್ಕೆ ಮನ್ನಣೆ ಸಿಗದಿದ್ದ ಕಾರಣ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪದ್ಮ ಪ್ರಶಸ್ತಿ ನೀಡಿದ 5 ವರ್ಷಗಳ ನಂತರ ಭಾರತ ರತ್ನ ನೀಡಬೇಕೆಂಬ ನಿಮಯವಿರುವುದು ಪ್ರಶಸ್ತಿ ನಿರಾಕರಣೆಗೆ ಕಾರಣ ಎಂದು ಹೇಳಲಾಗಿದೆ.
ಇದೇ ಸಂದರ್ಭದಲ್ಲಿ ರಾಜಕೀಯ ದುರುದ್ದೇಶವಿಟ್ಟುಕೊಂಡು ಮತ್ತು ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ಸರಕಾರ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ನೀಡಿದೆ ಎಂದು ರಾಮಚಂದ್ರ ಗುಹಾ ಹುಯಿಲೆಬ್ಬಿಸಿದ್ದಾರೆ. ಜೊತೆಗೆ ಯಾರಿಗೇ ಆಗಲಿ ಮರಣೋತ್ತರ ಪ್ರಶಸ್ತಿ ನೀಡಲೇಬಾರದೆಂದೂ ಅವರು ಚರ್ಚೆಗೆ ನಾಂದಿ ಹಾಡಿದ್ದಾರೆ. ಹಾಗಿದ್ದ ಮೇಲೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಭಾರತ ರತ್ನ ಏಕೆ ನೀಡಲಾಯಿತು ಎಂದು ಒಬ್ಬರು ಪ್ರಶ್ನೆ ಕೇಳಿದ್ದಾರೆ.
ಭಾರತ ರತ್ನದ ಸುತ್ತಾ ಸುತ್ತಿಕೊಂಡಿರುವ ವಿವಾದಗಳು
ಎಂಎಸ್ ಸ್ವಾಮಿನಾಥನ್ ಯಾರು? : 'ಭಾರತದ ಹಸಿರು ಕ್ರಾಂತಿಯ ಹರಿಕಾರ' ಎಂದೇ ಖ್ಯಾತರಾಗಿರುವ ಸ್ವಾಮಿನಾಥನ್ ಅವರು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಹೆಚ್ಚು ಫಸಲು ನೀಡುವ ಗೋಧಿ ಮತ್ತು ಅಕ್ಕಿಯನ್ನು ಆವಿಷ್ಕರಿಸಿದ ಹೆಗ್ಗಳಿಕೆಯೂ ಸ್ವಾಮಿನಾಥನ್ ಅವರದ್ದು. 20ನೇ ಶತಮಾನದಲ್ಲಿ ಏಷ್ಯಾದ 20 ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಸ್ವಾಮಿನಾಥನ್ ಕೂಡ ಒಬ್ಬರು ಎಂದು ಟೈಮ್ ಮ್ಯಾಗಜಿನ್ ಅವರನ್ನು ಗೌರವಿಸಿತ್ತು. ಪ್ರಣಬ್ ಮುಖರ್ಜಿ ಅವರಿಗಿಂತ ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಸಲ್ಲಬೇಕಾಗಿತ್ತು ಎಂಬುದು ರಾಮಚಂದ್ರ ಗುಹಾ ಅವರ ವಾದ.