ಗಿರಿನಗರದಲ್ಲಿ ಪುಟಾಣಿಗಳಿಗಾಗಿ ಸ್ವಚ್ಛ ಬಾಲ ಅಭಿಯಾನ
ಬೆಂಗಳೂರು, ಫೆ. 6 : ದೇಶದಾದ್ಯಂತ ನಡೆಯುತ್ತಿರುವ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಪರಿಸರ ಸ್ವಚ್ಛತೆಯೊಂದಿಗೆ ತಮ್ಮ ಶರೀರವನ್ನೂ ಸ್ವಚ್ಛವಾಗಿಡಬೇಕಾದ ಅಗತ್ಯವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಸ್ವಚ್ಛ ಬಾಲ ಅಭಿಯಾನ ಶುಕ್ರವಾರ ವಿಭಿನ್ನವಾಗಿ ಹಮ್ಮಿಕೊಳ್ಳಲಾಗಿತ್ತು.
ಪ್ಯೂರ್ ಕಿಂಡರ್ಲೈಫ್ ತಂಡದ ವತಿಯಿಂದ ಬೆಂಗಳೂರಿನ ಗಿರಿನಗರದ ಮಾರ್ಟಿನ್ ಲೂಥರ್ ಪಬ್ಲಿಕ್ ಸ್ಕೂಲ್ನಲ್ಲಿ ಈ ಅಭಿಯಾನವನ್ನು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿತ್ತು. ಪುಟಾಣಿ ಮಕ್ಕಳು ಕೂಡ ಅಷ್ಟೇ ಉತ್ಸಾಹದಿಂದ ಈ ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಳೆ ತಂದರು. [ಅಂತೂ ಇಂತೂ ಸ್ವಚ್ಛವಾಯಿತು ವಿಕ್ಟೋರಿಯಾ ಆಸ್ಪತ್ರೆ]
ಶಾಲೆ, ಮನೆ, ಉದ್ಯಾನ, ಆಟದ ಮೈದಾನ ಸಹಿತ ನಾವು ಓಡಾಡುವ ಎಲ್ಲ ಕಡೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು, ಜತೆಗೆ ನಮ್ಮ ದೇಹ, ಶರೀರವನ್ನೂ ಕೊಳೆಯಿಂದ ಮುಕ್ತವಾಗಿ ಇಡಬೇಕು. ಮೈಮೇಲಿನ ಕೊಳೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಎಂಬ ಸಂದೇಶ ಸಾರುವುದಕ್ಕಾಗಿ ಈ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಿಂಡರ್ ಲೈಫ್ ತಂಡದ ಮುಖ್ಯಸ್ಥ ಅರುಣ್ ಅಭಿಪ್ರಾಯಪಟ್ಟರು.
ಶಿಕ್ಷಣ ತಜ್ಞ ಡಾ.ಸುನಿಲ್ಕುಮಾರ್ ಮಾತನಾಡಿ, ಮಕ್ಕಳು ವಾಸಿಸುವ ಪರಿಸರ ಅತ್ಯಂತ ಶುಚಿಯಾಗಿರಬೇಕು. ಮನೆಯಿಂದಲೇ ಸ್ವಚ್ಛತೆಯ ಮನೋಭಾವ ಬೆಳೆಯಬೇಕು. ಜತೆಗೆ ಶಾಲೆಯಲ್ಲೂ ಇಂತಹ ಪರಿಕಲ್ಪನೆ ಮಕ್ಕಳಲ್ಲಿ ಬೆಳೆದಾಗ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗುತ್ತದೆ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾರಂಭದಲ್ಲಿ ನಟಿ, ರೂಪದರ್ಶಿ ಕುಮಾರಿ ಮಯೂರಿ ಶಾ, ಬಯೋನೋವಾ ವ್ಯವಸ್ಥಾಪಕ ನಿರ್ದೇಶಕರಾದ ಸುಧೀರ್ ಜೈನ್, ಪ್ರಾಂಶುಪಾಲರಾದ ಸುಧಾ ಪ್ರಸನ್ನ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತು.