ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆ, ತೀವ್ರ ಆತಂಕ
ಬೆಂಗಳೂರು, ಮೇ 31: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ಮೆಜೆಸ್ಟಿಕ್ನಲ್ಲಿರುವ ರೈಲು ನಿಲ್ದಾಣದಲ್ಲಿ ಗ್ರೆನೇಡ್ ಮಾದರಿಯ ವಸ್ತು ಕಂಡುಬಂದಿದೆ. ಪ್ಲಾಟ್ಫಾರ್ಮ್ ಸಂಖ್ಯೆ 1ರಲ್ಲಿ ವಸ್ತು ಕಂಡುಬಂದಿದೆ. ಇದು ಬಾಂಬ್ ಇರಬಹುದು ಎಂದು ಬೆದರಿದ ಪ್ರಯಾಣಿಕರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ. ತಪಾಸಣೆ ಬಳಿಕ ಅದು ಕಂಟ್ರಿಮೇಡ್ ಗ್ರೆನೇಡ್ ಎಂಬುದು ತಿಳಿದುಬಂದಿದೆ.
ಮೈಸೂರು ಅರಮನೆಗೆ ಹುಸಿ ಬಾಂಬ್ ಕರೆ: ಇದು ಕುಡುಕ ಸೃಷ್ಟಿಸಿದ ಅವಾಂತರ
ಸ್ಥಳಕ್ಕೆ ಆರ್ಎಎಫ್ ಮತ್ತು ಪೊಲೀಸರು ಭೇಟಿ ನೀಡಿದ್ದಾರೆ. ಪ್ಲಾಟ್ಫಾರ್ಮ್ ಒಂದರ ಮೂಲಕವೇ ಉಳಿದ ಪ್ಲಾಟ್ಫಾರ್ಮ್ಗಳಿಗೆ ತೆರಳಬೇಕಿರುವುದರಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಬಾಂಬ್ ಪತ್ತೆ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಸಿಕ್ಕಿರುವ ವಸ್ತು ಗ್ರೆನೇಡ್ ಮಾದರಿಯಲ್ಲಿದೆ. ಅದು ಸಜೀವವೇ ಅಲ್ಲವೇ ಎಂಬುದು ಗೊತ್ತಾಗಿಲ್ಲ. ಬಾಂಬ್ ಪತ್ತೆ ದಳಕ್ಕೆ ಒಪ್ಪಿಸಲಾಗಿದೆ. ಟ್ರ್ಯಾಕ್ ಪಕ್ಕದಲ್ಲಿ ಬಿದ್ದಿತ್ತು. ಯಾರೋ ಪ್ರಯಾಣಿಕರು ಅನುಮಾನಾಸ್ಪದ ವಸ್ತು ಬಿದ್ದಿದೆ ಎಂದು ಮಾಹಿತಿ ನೀಡಿದ್ದರು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನುಮಾನಾಸ್ಪದ ವಸ್ತು ಪತ್ತೆಯಾಗಿರುವುದರಿಂದ ಬೇರೆ ಕಡೆಯೂ ಈ ರೀತಿಯ ವಸ್ತು ಇರಬಹುದು ಎಂಬ ಶಂಕೆಯಿಂದ ರೈಲ್ವೆ ಪೊಲೀಸರು ರೈಲು ನಿಲ್ದಾಣದ ಎಲ್ಲ ಪ್ಲಾಟ್ಫಾರ್ಮ್ಗಳು ಮತ್ತು ರೈಲು ನಿಲ್ದಾಣಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ನಿಲ್ದಾಣದಲ್ಲಿದ್ದ ಜನರನ್ನು ಬೇರೆಡೆಗೆ ಕಳುಹಿಸಲಾಗಿದೆ.
ಸಾಕಿದ ನಾಯಿಗಳನ್ನೇ ಉಗ್ರರ ವಿರುದ್ಧದ ಹೋರಾಟಕ್ಕೆ ಕಾಣಿಕೆ ನೀಡಿದ ಮಹಿಳೆ
ವಸ್ತುವನ್ನು 500 ಮೀಟರ್ ದೂರಕ್ಕೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಲಾಯಿತು. ಬಳಿಕ ಪೊಲೀಸರು ಅದು ಗ್ರೆನೇಡ್ ಎಂದು ತಿಳಿಸಿದ್ದು, ಅದು ಜೀವಂತ ಗ್ರೆನೇಡ್ ಅಥವಾ ಅಲ್ಲವೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ.
ಐಜಿಪಿ ಡಿ. ರೂಪಾ, ಎಡಿಜಿಪಿ, ಅಲೋಕ್ ಮೋಹನ್, ರವಿ ಚನ್ನಣ್ಣವರ್ ಮುಂತಾದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಂಘಮಿತ್ರ ರೈಲಿನ ಬಳಿ ಗ್ರೆನೇಡ್
ಪಟ್ನಾಕ್ಕೆ ಹೊರಡುವ ಸಂಘಮಿತ್ರ ರೈಲು 9 ಗಂಟೆಗೆ ತೆರಳಬೇಕಿತ್ತು. ಆ ರೈಲು ಸಾಗುವ ಟ್ರ್ಯಾಕ್ನಲ್ಲಿಯೇ ಎಸ್ 1 ಬೋಗಿಯ ಸಮೀಪ ಗ್ರೆನೇಡ್ ಕಂಡುಬಂದಿದೆ. ಕೂಡಲೇ ರೈಲಿನಲ್ಲಿದ್ದ ಪ್ರಯಾಣಿಕರನ್ನು ಕೆಳಕ್ಕಿಳಿಸಿ ಸಂಪೂರ್ಣ ಪರಿಶೀಲನೆ ನಡೆಸಲಾಯಿತು.
ರೈಲು ಸಂಚಾರಕ್ಕೆ ನಿರ್ಬಂಧ
ಪ್ಲಾಟ್ಫಾರ್ಮ್ ನಂಬರ್ ಒಂದನ್ನು ಸಂಪೂರ್ಣವಾಗಿ ಖಾಲಿ ಮಾಡಲಾಗಿದ್ದು, 11 ಗಂಟೆವರೆಗೂ ಎಲ್ಲ ರೈಲುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಎಲ್ಲ ರೈಲುಗಳಿಂದ ಪ್ರಯಾಣಿಕರನ್ನು ಕೆಳಕ್ಕಿಳಿಸಲಾಗಿದೆ. ಪ್ರತಿ ರೈಲುಗಳನ್ನು ಪರಿಶೀಲಿಸಿದ ಬಳಿಕವೇ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ.
ಐದು ವರ್ಷದಲ್ಲಿ 914 ಬಾಂಬ್ ದಾಳಿಗಳು ಭಾರತದಲ್ಲಿ ಆಗಿವೆ: ರಾಹುಲ್ ಟ್ವೀಟ್
ಕಂಟ್ರಿಮೇಡ್ ಗ್ರೆನೇಡ್
ಕಂಟ್ರಿಮೇಡ್ ಗ್ರೆನೇಡ್ ಎಂಬುದು ಖಚಿತವಾಗಿದೆ. ಮರಳಿನ ಚೀಲಗಳ ರಾಶಿಯ ನಡುವೆ ಈ ಗ್ರೆನೇಡ್ ಪತ್ತೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬೀಡುಬಿಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಿಗ್ಗೆ 8.45ರ ವೇಳೆಗೆ ಈ ಗ್ರೆನೇಡ್ ಕಂಡುಬಂದಿದ್ದು, ಅದಕ್ಕೆ ಹತ್ತುವ ಸಂದರ್ಭದಲ್ಲಿ ಬಿದ್ದುಹೋಗಿರಬಹುದು ಅಥವಾ ಉದ್ದೇಶಪೂರ್ವಕವಾಗಿ ಇರಿಸಿರಬಹುದು ಎಂಬ ಶಂಕೆ ಮೂಡಿದೆ.
ಗ್ರೆನೇಡ್ ಒಳಗೆ ಸ್ಫೋಟಕವಿಲ್ಲ
ರೈಲಿನಲ್ಲಿ ಬಂದ ಕಾನ್ಸ್ಟೆಬಲ್ ಕೃಷ್ಣ ಎಂಬುವವರು ಮೈಸೂರಿನಿಂದ ಬಂದು ಇಳಿದಿದ್ದರು. ಪ್ಲಾಟ್ಫಾರ್ಮ್ ನಂಬರ್ ಒಂದರಲ್ಲಿ ಜನರು ಗಾಬರಿಗೊಂಡಿದ್ದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಗ್ರೆನೇಡ್ ಹೊರಮೈ ಮಾತ್ರ ಇತ್ತು. ಅದರಲ್ಲಿ ಸ್ಫೋಟ ಇರಲಿಲ್ಲ ಎನ್ನಲಾಗಿದೆ. ಇನ್ನೂ ಕೆಲವು ಹ್ಯಾಂಡ್ ಗ್ರೆನೇಡ್ಗಳು ಅಲ್ಲಿ ಬಿದ್ದಿದ್ದವು. ಇವು ಸ್ಫೋಟಗೊಳ್ಳುವ ರೀತಿಯಲ್ಲಿ ಇರಲಿಲ್ಲ. ಅದರ ಹೊರಭಾಗದ ವಸ್ತು ಮಾತ್ರ ಸಿಕ್ಕಿವೆ. ಅಂತಹದೇ ಮಾದರಿಯ ಬೇರೆ ಗ್ರೆನೇಡ್ಗಳು ಇದ್ದರೂ ಇರಬಹುದು ಎಂಬ ಅನುಮಾನದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.