ಸುಶಾಂತ್ ಕೇಸ್: ಕಾರ್ಪೊರೇಟರ್ ಮಗ ನಾಪತ್ತೆ, NCB ನೋಟಿಸ್
ಮುಂಬೈ/ಬೆಂಗಳೂರು, ಸೆ. 6: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ ಪೆಡ್ಲರ್ ಗಳ ಪಾತ್ರದ ಬಗ್ಗೆ ತನಿಖೆ ಮುಂದುವರೆದಿದೆ. ನಟಿ ರಿಯಾ ಚಕ್ರವರ್ತಿ ಸೋದರ ಶೋವಿಕ್, ಸ್ಯಾಮುಯಲ್ ಮಿರಾಂಡರನ್ನು ಮಾದಕ ವಸ್ತು ನಿಯಂತ್ರಣ ದಳ(ಎನ್ ಸಿಬಿ) ಕಸ್ಟಡಿಗೆ ಪಡೆದುಕೊಂಡಿದೆ. ಈ ನಡುವೆ ಪೆಡ್ಲರ್ ಒಬ್ಬ ನೀಡಿದ ಮಾಹಿತಿಯಂತೆ ಇಂದು ಬೆಂಗಳೂರಿಗೆ ಬಂದ ಎನ್ ಸಿಬಿ ತಂಡವು ಬಿಬಿಎಂಪಿ ಕಾರ್ಪೊರೇಟರ್ ಮನೆ ಮೇಲೆ ದಾಳಿ ನಡೆಸಿದೆ.
ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಹಾಲಕ್ಷ್ಮಿಪುರ ವಾರ್ಡ್ ಕಾರ್ಪೊರೇಟರ್ ಎಸ್ ಕೇಶವಮೂರ್ತಿ ಅವರ ಪುತ್ರ ಯಶಸ್ ಜೊತೆ ಡ್ರಗ್ ಪೆಡ್ಲರ್ ಮೊಹಮ್ಮದ್ ರೆಹಮಾನ್ ಸಂಪರ್ಕ ಹೊಂದಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಎನ್ ಸಿಬಿ ನೀಡಿದ್ದ ನೋಟಿಸ್ ಗೆ ಯಶಸ್ ಉತ್ತರಿಸಿರಲಿಲ್ಲ.
ರಾಗಿಣಿ ದ್ವಿವೇದಿ ಆರೋಪಿ ನಂ.2, ರವಿಶಂಕರ್ ಹೆಸರು ನಾಪತ್ತೆ?
ಹೀಗಾಗಿ, ಎನ್ ಸಿಬಿ ಅಧಿಕಾರಿಗಳು ಇಂದು ಯಶಸ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಯಾವುದೇ ಸಂಶಯಾಸ್ಪದ ವಸ್ತುಗಳು, ಸಾಕ್ಷ್ಯಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಕೆಲವು ದಾಖಲೆಗಳನ್ನು ಜಪ್ತಿ ಮಾಡಿಕೊಂಡಿರುವ ಎನ್ ಸಿಬಿ ತಂಡವು ಮುಂಬೈಗೆ ವಾಪಸ್ ತೆರಳಿದೆ.
''ನನ್ನ ಮಗ ಜಿಮ್ ನಡೆಸುತ್ತಿದ್ದ, ಸದ್ಯ ಪ್ರವಾಸದಲ್ಲಿದ್ದಾನೆ, ಮುಂಬೈಗೆ ಎನ್ ಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುತ್ತಾನೆ'' ಎಂದು ಕಾರ್ಪೊರೇಟರ್ ಕೇಶವಮೂರ್ತಿ ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
NDPS ಕಾಯ್ದೆಯಂತೆ ಯಶಸ್ ಗೆ ನೋಟಿಸ್ ಜಾರಿ
NDPS ಕಾಯ್ದೆಯಂತೆ ಯಶಸ್ ಗೆ ನೋಟಿಸ್ ನೀಡಲಾಗಿದ್ದು, ಸದ್ಯ ಆತನ ಮನೆಯಲ್ಲಿಲ್ಲ. ಫೋನ್ ನಂಬರ್ ಸ್ವಿಚ್ ಆಫ್ ಬರುತ್ತಿದೆ. ಡ್ರಗ್ ಡೀಲರ್ ಅನಿಕಾ ಗ್ಯಾಂಗಿಗೂ ಯಶಸ್ ಗೂ ಸಂಪರ್ಕವಿದೆ. ಎಂಇಎಸ್ ಕಾಲೇಜಿನಲ್ಲಿ ಪದವಿ ತನಕ ಓದಿರುವ ಯಶಸ್ ಸಣ್ಣ ಪುಟ್ಟ ಉದ್ಯಮಗಳನ್ನು ನಡೆಸಿಕೊಂಡಿದ್ದ, ರೆಸ್ಟೋರೆಂಟ್ ಗಳಲ್ಲಿ ಆಗಾಗ ಪಾರ್ಟಿ ಕೊಡಿಸುತ್ತಿದ್ದ ಎಂದು ತಿಳಿದು ಬಂದಿದೆ. , ಸೋಮವಾರ( ಸೆ. 7) ಬೆಳಗ್ಗೆ 11 ಗಂಟೆಗೆ ಮುಂಬೈ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಯಶಸ್ ಮನೆಯವರಿಗೆ ಸೂಚಿಸಿದ್ದಾರೆ.
ಸುಶಾಂತ್ ಕೇಸಿನಲ್ಲಿ ಎನ್ ಸಿಬಿ ತನಿಖೆ
ಸುಶಾಂತ್ ಕೇಸಿನಲ್ಲಿ ಎನ್ ಸಿಬಿ ತನಿಖೆಗೆ ಸಂಬಂಧಿಸಿದತೆ ಬಂಧನಗೊಂಡವರ ಸಂಖ್ಯೆ ಎಂಟಕ್ಕೇರಿದೆ. ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರಬರ್ತಿ, ಸುಶಾಂತ್ ಮನೆಯ ಮ್ಯಾನೇಜರ್ ಸಾಮ್ಯುಯಲ್ ಮಿರಾಂಡ, ಮನೆಕೆಲಸಗಾರ ದೀಪೇಶ್ ಸಾವಂತ್ ರನ್ನು ಶನಿವಾರದಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿರುವ ಅಧಿಕಾರಿಗಳು, ಸೆಪ್ಟಂಬರ್ 9ರ ವರೆಗೆ ತಮ್ಮ ವಶಕ್ಕೆ ಪಡೆದುಕೊಂಡಿದೆ.
ಶೌವಿಕ್ ವಿಚಾರಣೆಯ ವೇಳೆ ಡ್ರಗ್ಸ್ ಯಾರಿಗೆಲ್ಲಾ ನೀಡುತ್ತಿದ್ದ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದು, ರಿಯಾ ಚಕ್ರವರ್ತಿಯನ್ನು ವಿಚಾರಣೆಗೆ ಮತ್ತೆ ಕರೆಸಲಾಗಿದೆ ಎಂದು ಎನ್ಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಎನ್ ಸಿಬಿಯಿಂದ ರಿಯಾ ಅರೆಸ್ಟ್?
ಪಾಟ್ನಾ ಪೊಲೀಸ್ ಎಫ್ ಐ ಆರ್ ಆಧರಿಸಿ ಇಡಿ ಇಲಾಖೆ ರಿಯಾ ಚಕ್ರವರ್ತಿ ಹಾಗು ಇನ್ನಿತರ 8 ಜನರ ವಿರುದ್ಧ ಮನಿ ಲ್ಯಾಂಡರಿಂಗ್ ಕೇಸ್ ನಮೂದಿಸಿದ್ದಾರೆ. ಈ ಕುರಿತಂತೆ ರಿಯಾ ವಿಚಾರಣೆ ಎದುರಿಸಿ ಸುಶಾಂತ್ ಜೊತೆಗಿನ ವ್ಯವಹಾರಿಕ ಸಂಬಂಧದ ಬಗ್ಗೆ ವಿವರ ನೀಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ ಜೊತೆ ಕೆಲಸ ಮಾಡಿರುವ ರಿಯಾ ಅವರ ಮ್ಯಾನೇಜರ್ ಶ್ರುತಿ ಮೋದಿಗೂ ಇಡಿ ಸಮನ್ಸ್ ನೀಡಿತ್ತು. ರಿಯಾ ಅವರ ಸಹೋದರ ಶೌವಿಕ್ ಚಕ್ರವರ್ತಿ ವಿರುದ್ಧ ಸಹ ದೂರು ದಾಖಲಾಗಿದೆ. ಶುಕ್ರವಾರ ರಿಯಾ, ಶ್ರುತಿ ಮತ್ತು ಶೋಯಿಕ್ ಅವರ ಹೇಳಿಕೆಗಳನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ದಾಖಲಿಸಲಾಗಿದೆ. ಆದರೆ, ಇದೆಲ್ಲದರಿಂದ ಬಚಾವಾದರೂ ಈಗ ಶೌವಿಕ್ ಮೂಲಕ ರಿಯಾ ಸುಶಾಂತ್ ಗೆ ಡ್ರಗ್ಸ್, ಗಾಂಜಾ ನೀಡುತ್ತಿದ್ದಳು ಎಂಬ ಆರೋಪದಲ್ಲಿ ಸಿಲುಕುವ ಸಾಧ್ಯತೆಯಿದೆ.
ಬಿಹಾರ ಮೂಲದ ನಟ ಸುಶಾಂತ್ ಸಿಂಗ್
ಜೂನ್ 14ರಂದು 34 ವರ್ಷ ವಯಸ್ಸಿನ ಬಿಹಾರ ಮೂಲದ ನಟ ಸುಶಾಂತ್ ಸಿಂಗ್ ಅವರ ದೇಹವು ಬಾಂದ್ರಾದ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕಗ್ಗಂಟಾಗಿರುವ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ವರದಿ ಮಹತ್ವ ಪಡೆದುಕೊಂಡಿತ್ತು. ಅಂತಿಮ ಮರಣೋತ್ತರ ಪರೀಕ್ಷೆಯ ವರದಿಯನ್ನು ಮುಂಬೈ ಪೊಲೀಸರಿಗೆ ವೈದ್ಯರು ಸಲ್ಲಿಸಿದ್ದಾರೆ. ಇದು 'ನೇಣು ಹಾಕಿಕೊಂಡ ಕಾರಣದಿಂದ ಉಸಿರುಗಟ್ಟಿ ಸಂಭವಿಸಿದ ಸಾವು' ಎಂದೇ ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ದೇಹದಲ್ಲಿ ಯಾವುದೇ ಒದ್ದಾಟದ ಕುರುಹು ಅಥವಾ ಹೊರ ಭಾಗದ ಗಾಯಗಳಿಲ್ಲ. ಅವರ ಉಗುರುಗಳು ಸಹ ಸ್ವಚ್ಛವಾಗಿವೆ. ಇದು ಸ್ಪಷ್ಟವಾಗಿ ಆತ್ಮಹತ್ಯೆಯ ಪ್ರಕರಣ. ಇದರಲ್ಲಿ ಯಾವುದೇ ಬೇರೆ ಕೈವಾಡಗಳು ಇಲ್ಲ ಎಂದು ಆರ್ ಸಿ ಕೂಪರ್ ಮುನ್ಸಿಪಾಲ್ ಆಸ್ಪತ್ರೆಯ ಐವರು ತಜ್ಞ ವೈದ್ಯರು ತಮ್ಮ ವರದಿಯಲ್ಲಿ ಹೇಳಿದ್ದಾರೆ.