ಕಲುಷಿತ ಕಗ್ಗದಾಸಪುರ ಕೆರೆ, ಲೋಕಾಯುಕ್ತ ನಿರ್ದೇಶನದ ಮೇರೆಗೆ ಪರಿಶೀಲನೆ
ಬೆಂಗಳೂರು, ಮೇ 23: ಕೆರೆಯ ವಿವಿಧ ದಿಕ್ಕುಗಳಿಂದ ವ್ಯಾಪಕವಾಗಿ ಕೊಳಚೆ ನೀರು ಹರಿದು ಬರುತ್ತಿರುವ ಕಾರಣ 47 ಎಕರೆ ವಿಸ್ತೀರ್ಣದ ಕಗ್ಗದಾಸಪುರ ಕೆರೆ ಸಂಪೂರ್ಣ ಕಲುಷಿತಗೊಂಡಿದ್ದು, ನೀರಿನ ಮಟ್ಟ 'ಇ ದರ್ಜೆ'ಗೆ ಇಳಿದಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಲೋಕಾಯುಕ್ತರಿಗೆ ವರದಿ ನೀಡಿದೆ ಹೀಗಾಗಿ ಲೋಕಾಯುಕ್ತ ನಿರ್ದೇಶನದ ಮೇರೆಗೆ ಯುನೈಟೆಡ್ ಬೆಂಗಳೂರು, ಜಲಮಂಡಳಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೆರೆ ಪರಿಶೀಲನೆ ನಡೆಸಿದೆ.
ಬಿಬಿಎಂಪಿಯಿಂದ ನಿರ್ವಹಿಸಲ್ಪಡುತ್ತಿರುವ ಈ ಕೆರೆಗೆ ಕಂದಾಯ ಇಲಾಖೆ ಕಸ್ಟೋಡಿಯನ್ ಆಗಿದೆ. ಬಿಬಿಎಂಪಿ ದಾಖಲೆಗಳ ಪ್ರಕಾರ ಕೆರೆ ವಿಸ್ತೀರ್ಣ 47 ಎಕರೆ. ಪರಿಶೀಲನೆ ವೇಳೆ ಕೆರೆಯ ಜಲಾನಯನ ಪ್ರದೇಶಗಳಿಂದ ಮಳೆನೀರು ಕಾಲುವೆ ಮೂಲಕ ಕೊಳಚೆ ನೀರು ಕೆರೆಗೆ ಸೇರುತ್ತಿದೆ. ಪ್ರಮುಖವಾಗಿ ಕೆರೆಯ ಉತ್ತರ ಭಾಗದಲ್ಲಿ ಎತ್ತರದ ಪ್ರದೇಶದಲ್ಲಿ ಇರುವ ಕೆ.ಆರ್ ಪುರ ಮತ್ತು ಪೈ ಲೇಔಟ್ ಕಡೆಯಿಂದ ಕೊಳಚೆ ನೀರು ಸೇರುತ್ತಿರುವುದನ್ನು ಬಿಡಬ್ಲ್ಯುಎಸ್ಎಸ್ಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಕಾಲುವೆ ಮೂಲಕ ಹರಿದು ಬರುವ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡಲು 17 ಕೋಟಿ ರೂ. ವೆಚ್ಚದಲ್ಲಿ 5 ಎಂಎಲ್ಡಿ ಸಾಮರ್ಥ್ಯದ ಎಸ್ಟಿಪಿ ಅಳವಡಿಸುವ ಯೋಜನೆ ಇದೆ. ಅದಕ್ಕೆ 18 ತಿಂಗಳು ಕಾಲಾವಕಾಶ ಬೇಕು ಎಂದು ಬಿಡಬ್ಲ್ಯುಎಸ್ಎಸ್ಬಿ ಅಧಿಕಾರಿಗಳು ಹೇಳಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಮತ್ತು ಬಿಡಬ್ಲ್ಯುಎಸ್ಎಸ್ಬಿ ಅಧಿಕಾರಿಗಳ ನಡುವಿನ ಸಭೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ ಎಂದು ಲೋಕಾಯುಕ್ತರಿಗೆ ವರದಿ ನೀಡಲಾಗಿದೆ.
ಕೆರೆಯ ನೀರು ಸದ್ಯಕ್ಕೆ ಯಾವುದೇ ಉದ್ದೇಶಕ್ಕೂ ಬಳಸುತ್ತಿಲ್ಲ. ಜೊಂಡು ಸೇರಿದಂತೆ ಇನ್ನಿತರ ತ್ಯಾಜ್ಯ ಮತ್ತು ಗಿಡಗಳಿಂದ ಕೆರೆ ತುಂಬಿಕೊಂಡಿದೆ. ಸ್ಯಾಂಪಲ್ ಪರಿಶೀಲನೆ ಮತ್ತು ಖುದ್ದು ಪರಿಶೀಲನೆ ನಡೆಸಿದಾಗ ಕೆರೆಯ ಸಂಪೂರ್ಣವಾಗಿ ಕಲುಷಿತವಾಗಿರುವುದು ಕಂಡು ಬಂದಿದೆ. ಕೆರೆಗೆ ಹೊಂದಿಕೊಂಡಂತೆ ಜನವಸತಿ ಪ್ರದೇಶ ಹಾಗೂ ಕೆರೆ ಪಕ್ಕದಲ್ಲೇ ಜಲಮಂಡಳಿ ಪೈಪ್ಗಳನ್ನು ಅಳವಡಿಸಿದೆ. ಕೆರೆಯ ಉತ್ತರ ಮತ್ತು ಪೂರ್ವ ಭಾಗದಲ್ಲಿ ತ್ಯಾಜ್ಯವನ್ನು ಸುರಿಯಲಾಗಿದೆ ಎಂದು ವರದಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ತಿಳಿಸಿದ್ದಾರೆ.