ಗುರುಮೂರ್ತಿ ವಿರುದ್ಧ ದೂರು ನೀಡಲು ಕರೆ ಮಾಡಿ
ಬೆಂಗಳೂರು,ಅ. 14: ಬಂಜೆತನ ನಿವಾರಿಸುವುದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ್ದಲ್ಲದೆ ಬಾಡಿಗೆ ತಾಯಿಯಿಂದ ಪಡೆದ ಮಗುವನ್ನು ಅದಲು ಬದಲು ಮಾಡಿರುವ ಆರೋಪ ಹೊತ್ತಿರುವ ಸ್ತ್ರೀರೋಗ ತಜ್ಞ ಕೆ.ಟಿ ಗುರುಮೂರ್ತಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಗುರುಮೂರ್ತಿ ವಿರುದ್ಧ ಸುಮಾರು 40 ದೂರುಗಳು ದಾಖಲಾಗಿವೆ.
ಬಸವಶ್ವೇರನಗರದ ಹಾವನೂರು ಸರ್ಕಲ್ ಬಳಿ ಇರುವ ಸೃಷ್ಟಿ ಗ್ಲೋಬಲ್ ಮೆಡಿಕೇರ್ ಅಂಡ್ ರಿಸರ್ಚ್ ಫೌಂಡೇಶನ್ನ ಸಂಸ್ಥಾಪಕ ಕೆ.ಟಿ.ಗುರುಮೂರ್ತಿ ವಿರುದ್ಧ ಪ್ರತಿದಿನ ದೂರುಗಳು ಕೇಳಿ ಬರುತ್ತಿವೆ. ಮೌಖಿಕ ದೂರು ನೀಡುವುದಕ್ಕಿಂತ ಲಿಖಿತ ದೂರು ನೀಡುವಂತೆ ದೂರುದಾರರಿಗೆ ಮನವರಿಕೆ ಮಾಡಲಾಗಿದೆ. ಅದರೂ ದೂರುಗಳನ್ನು ತ್ವರಿತಗತಿಯಿಂದ ದಾಖಲಿಸಲು ಬಯಸುವ ಸಂತ್ರಸ್ತರು ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನು(94808 01011) ಸಂಪರ್ಕಿಸಬಹುದು.
ನವಜಾತ ಶಿಶು ಅದಲು- ಬದಲು: ಶಿಶು ಅದಲು- ಬದಲು ಆರೋಪ ಹೊತ್ತಿರುವ ಸೃಷ್ಟಿ ಗ್ಲೋಬಲ್ ಅಂಡ್ ಮೆಡಿಕೇರ್ ಸೆಂಟರ್ನ ಕೆ.ಟಿ.ಗುರುಮೂರ್ತಿ ಒಂದು ವಾರಗಳ ಕಾಲ ನ್ಯಾಯಾಂಗ ಬಂಧನ ಶಿಕ್ಷೆ ಅನುಭವಿಸುತ್ತಿದ್ದಾರೆ. ಬಾಡಿಗೆ ತಾಯಿ, ವೀರ್ಯ ದುರ್ಬಳಕೆ, ಬಂಜೆತನ ನಿವಾರಣೆ ಎಲ್ಲವೂ ಬೃಹತ್ ಪ್ರಮಾಣದ ಗೋಲ್ ಮಾಲ್ ಆಗಿರುವ ಸಂಶಯ ಹುಟ್ಟಿಕೊಂಡಿದೆ. ಇದಕ್ಕೆ ಪೂರಕವಾಗಿ ಒಂದೇ ದಿನ ಗುರುಮೂರ್ತಿ ವಿರುದ್ಧ ವಿರುದ್ಧ 40ಕ್ಕೂ ಹೆಚ್ಚು ಮಹಿಳೆಯರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ ಸಂಬಂಧ ದೂರು ದಾಖಲು ಮಾಡಿದ್ದಾರೆ.
ಸಂತಾನ ಹೀನತೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಸಂತಾನ ಭಾಗ್ಯ ಕಲ್ಪಿಸುವ ನೆಪದಲ್ಲಿ ಲಕ್ಷಾಂತರ ರೂ.ಹಣ ಪಡೆದು ನೂರಾರು ದಂಪತಿಗಳಿಗೆ ಸೃಷ್ಟಿ ಗುರುಮೂರ್ತಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. [ತಪ್ಪೊಪ್ಪಿಕೊಂಡ 'ಸೃಷ್ಟಿ' ಗುರುಮೂರ್ತಿ]
ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನು ಭೇಟಿ ಮಾಡಿದ ನೊಂದ ಮಹಿಳೆಯರು ತಮಗಾದ ಅನ್ಯಾಯವನ್ನು ವಿವರಿಸಿ ದೂರು ನೀಡಿದರು. ನೊಂದ ಮಹಿಳೆಯರಿಗೆ ತಮ್ಮ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲು ಮಾಡುವಂತೆ ಈ ಸಂದರ್ಭದಲ್ಲಿ ಹೇಮಂತ್ ನಿಂಬಾಳ್ಕರ್ ಸೂಚಿಸಿದ್ದಾರೆ. ನಂತರ ಕಾಮಾಕ್ಷಿಪಾಳ್ಯ, ನಂದಿನಿ ಲೇಔಟ್, ಬಸವೇಶ್ವರನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ.
ಸೃಷ್ಟಿ ಗುರುಮೂರ್ತಿಯಿಂದ ವಂಚನೆಗೊಳಗಾದ ನೊಂದ ಮಹಿಳೆಯೊಬ್ಬರು ಮಾತನಾಡಿ, ಸೃಷ್ಟಿ ಗುರುಮೂರ್ತಿ ಸಂತಾನ ಕಲ್ಪಿಸುವ ನೆಪದಲ್ಲಿ ಲಕ್ಷಾಂತರ ರೂ.ಹಣ ಪಡೆದು ವಂಚನೆ ಮಾಡಿದ್ದು, ತಮಗೆ ಸೃಷ್ಟಿ ಗ್ಲೋಬಲ್ ಅಂಡ್ ಮೆಡಿಕೇರ್ ನೀಡಿದ ಚಿಕಿತ್ಸೆಯಿಂದ ತೀವ್ರ ಸ್ವರೂಪದ ದೈಹಿಕ ಹಾಗೂ ಮಾನಸಿಕ ತೊಂದರೆಗಳಾಗಿವೆ ಎಂದಿದ್ದಾರೆ. [ಗುರುಮೂರ್ತಿ ಹಳೆ ಕೇಸ್ ಡೀಟೈಲ್ಸ್]
ನವಜಾತ ಶಿಶು ಅದಲು-ಬದಲು ಆರೋಪ ಹಾಗೂ 3.5 ಲಕ್ಷ ರು ವಂಚನೆ ಹಿನ್ನೆಲೆಯಲ್ಲಿ ನಗರದ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಡಾನ್ ಬಾಸ್ಕೋ ದಂಪತಿ ದೂರು ದಾಖಲಿಸಿದ್ದರು.ಆ ಹಿನ್ನೆಲೆಯಲ್ಲಿ ಸೃಷ್ಟಿ ಗುರುಮೂರ್ತಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. [ಬಂಜೆತನ ನಿವಾರಕ 'ನಕಲಿ' ವೈದ್ಯ ಗುರುಮೂರ್ತಿ]