ಉಪಚುನಾವಣೆ: ಡಿ.ಕೆ.ಶಿವಕುಮಾರ್ ಹೇಳಿದ ಅಚ್ಚರಿಯ ಅಭ್ಯರ್ಥಿ ಇವರೇನಾ?
ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಗೆ ದಿನಾಂಕ ನಿಗದಿಯಾಗುವ ಮೂಲಕ, ಮೂರು ಪಕ್ಷಗಳ ನಡುವಿನ ಜಿದ್ದಾಜಿದ್ದಿ ಮತ್ತೊಂದು ಮಜಲಿಗೆ ಉರುಳಿದೆ. ನವೆಂಬರ್ ಮೂರರಂದು ಈ ಎರಡು ಕ್ಷೇತ್ರಗಳ ಚುನಾವಣೆ ನಡೆಯಲಿದೆ.
ಮುನಿರತ್ನ ನಮ್ಮ ವಿರೋಧಿಯಲ್ಲ, ನಮ್ಮ ವಿರೋಧಿ ಬಿಜೆಪಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುವ ಮೂಲಕ, ಎರಡು ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಉಪಚುನಾವಣೆಗೆ ಡೇಟ್ ಫಿಕ್ಸ್ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಜಂಘಾಬಲಕ್ಕೆ ಭಾರೀ ಹೊಡೆತ!
ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಉತ್ತಮ ಮತಬ್ಯಾಂಕ್ ಅನ್ನು ಹೊಂದಿರುವುದರಿಂದ, ಡಿಕೆಶಿ ಹೇಳಿದ ಹಾಗೇ ಎರಡು ಪಕ್ಷಗಳ ನಡುವೆ ಮಾತ್ರ ಪೈಪೋಟಿಯಾಗುವ ಸಾಧ್ಯತೆ ಕಮ್ಮಿ. ಶಿರಾದಲ್ಲಿ ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಬರಬೇಕಿದೆ.
ರಾಜರಾಜೇಶ್ವರಿ ನಗರದ ಉಪಚುನಾವಣೆ ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪ್ರಶ್ನೆ. ಯಾಕೆಂದರೆ, ಕಾಂಗ್ರೆಸ್ ತೊರೆದು ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣರಾದವರಲ್ಲಿ ಒಬ್ಬರಾದ ಮುನಿರತ್ನಂ ಸ್ಪರ್ಧಿಸಿದ್ದ ಕ್ಷೇತ್ರವಾಗಿರುವುದು. ಇಲ್ಲಿ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಬಹುದು? ಡಿ.ಕೆ.ಶಿವಕುಮಾರ್ ಹೇಳಿದ ಅಚ್ಚರಿಯ ಅಭ್ಯರ್ಥಿ ಇವರೇನಾ? ಮುಂದೆ ಓದಿ..
ಉಪ ಚುನಾವಣೆ: ಜೆಡಿಎಸ್ ಜೊತೆ ಮೈತ್ರಿಯ ಕುರಿತು ಡಿಕೆಶಿ ಮಹತ್ವದ ಹೇಳಿಕೆ!
ಹೈಕಮಾಂಡ್ ಅನುಮೋದನೆಗೆ ಕಳುಹಿಸಲಾಗುವುದು - ಡಿ.ಕೆ.ಶಿವಕುಮಾರ್
"ನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಎಲ್ಲರೂ ಅರ್ಜಿಯನ್ನು ಹಾಕುತ್ತಿದ್ದಾರೆ. ಟಿಕೆಟ್ ಗಾಗಿ ಸ್ಪರ್ಧೆ ಇರುವುದೂ ಹೌದು. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ (ಅ 1) ಮೊದಲ ಹಂತದ ಚರ್ಚೆ ನಡೆಸಲಿದ್ದೇವೆ. ಸ್ಥಳೀಯ ಮುಖಂಡರು, ಕಾರ್ಯಕರ್ತರ ಜೊತೆಗೆ ಮಾತನಾಡಿ, ಪಕ್ಷದ ಹಿರಿಯ ಮುಖಂಡರ ಜೊತೆಗೆ ಚರ್ಚಿಸಿ, ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿ, ಹೈಕಮಾಂಡ್ ಅನುಮೋದನೆಗೆ ಕಳುಹಿಸಲಾಗುವುದು"ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಡಿ.ಕೆ.ಸುರೇಶ್ ಪ್ರತಿನಿಧಿಸುತ್ತಿರುವ ಬೆಂ. ಗ್ರಾಮಾಂತರ ಲೋಕಸಭಾ ವ್ಯಾಪ್ತಿ
ಡಿಕೆಶಿಯವರು ಕೆಪಿಸಿಸಿ ಅಧ್ಯಕ್ಷರಾಗಿರುವುದು ಮತ್ತು ಆರ್ ಆರ್ ನಗರ ಕ್ಷೇತ್ರ ಡಿ.ಕೆ.ಸುರೇಶ್ ಪ್ರತಿನಿಧಿಸುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವುದರಿಂದ, ಕಾಂಗ್ರೆಸ್ ಟಿಕೆಟ್ ಗಾಗಿ ಹಲವು ಮುಖಂಡರು ಫೈಟ್ ನಡೆಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು, ಪ್ರಿಯಾಕೃಷ್ಣ, ರಾಜ್ ಕುಮಾರ್, ಮಾಗಡಿ ಬಾಲಕೃಷ್ಣ ಅವರ ಹೆಸರುಗಳು. ಇದಲ್ಲದೇ, ಇನ್ನೆರಡು ಹೆಸರು ಈಗ ಚಾಲ್ತಿಯಲ್ಲಿದೆ.
ಐಡಿಯಲ್ ರಾಜಕುಮಾರ್
ಸದ್ಯಕ್ಕೆ ಐಡಿಯಲ್ ರಾಜಕುಮಾರ್ ಎಂದೇ ಹೆಸರಾಗಿರುವ, ಒಂದು ಕಾಲದ ಮುನಿರತ್ನ ಆಪ್ತ ರಾಜಕುಮಾರ್ ಅವರ ಹೆಸರು ಎಲ್ಲರಿಗಿಂತ ಮಂಚೂಣಿಯಲ್ಲಿದೆ. ಕ್ಷೇತ್ರದ ಕಾಂಗ್ರೆಸ್ ಜವಾಬ್ದಾರಿ ಹೊತ್ತಿರುವ ರಾಜಕುಮಾರ್, "ಹೈಕಮಾಂಡ್ ಸೂಚಿಸಿದರೆ ಮುನಿರತ್ನ ವಿರುದ್ದ ಸ್ಪರ್ಧಿಸುತ್ತೇನೆ" ಎಂದು ಹೇಳಿದ್ದಾರೆ.
Recommended Video
ಮಾಜಿ ಐಎಎಸ್ ಅಧಿಕಾರಿ ಡಿ.ಕೆ.ರವಿ
ಇವೆಲ್ಲದರ ನಡುವೆ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಕುಟುಂಬದ ಹೆಸರೂ ಇಲ್ಲಿ ಕೇಳಿಬರುತ್ತಿವೆ. ಡಿಕೆಶಿ ಅವರ ಪತ್ನಿ ಕುಸುಮಾ ಮತ್ತು ಅವರ ಮಾವ ಹನುಂತರಾಯಪ್ಪ ಅವರ ಹೆಸರು ಕೇಳಿ ಬರುತ್ತಿದೆ. ಇದರಲ್ಲಿ ಹನುಮಂತರಾಯಪ್ಪನವರನ್ನು ಕಣಕ್ಕಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಖುದ್ದು ಡಿ.ಕೆ.ಸುರೇಶ್ ಅವರೇ ಹೇಳಿದ್ದಾರೆ. ಇನ್ನು, ಕುಸುಮಾ ಸ್ಪರ್ಧಿಸುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಡಿಕೆಶಿ ಹೇಳಿದ್ದರೂ, ಡಿ.ಕೆ.ರವಿ ಕುಟುಂಬದವರು ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ.