ಹೆಚ್ಚುವರಿ ಶುಲ್ಕಕ್ಕೆ ಒತ್ತಡ ಹೇರಿದರೆ ಪರಮಾಧಿಕಾರ ಚಲಾಯಿಸಬೇಕಾಗುತ್ತದೆ: ಸುರೇಶ್ ಕುಮಾರ್ ಎಚ್ಚರಿಕೆ
ಬೆಂಗಳೂರು, ಮಾರ್ಚ್ 20: ಹೆಚ್ಚುವರಿ ಶಾಲಾ ಶುಲ್ಕ ಪಾವತಿಸಲು ಅಸಹಾಯಕರಾದ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟ ಘಟನೆಗಳು ದುರದೃಷ್ಟಕರ. ಈ ರೀತಿಯ ಪ್ರಕರಣಗಳು ಮರುಕಳಿಸಿದರೆ ಶಿಕ್ಷಣ ಇಲಾಖೆ ತನ್ನ ಪರಮಾಧಿಕಾರವನ್ನು ಚಲಾಯಿಸಬೇಕಾಗುತ್ತದೆ ಎಂದು ಶಾಲಾ ಅಭಿವೃದ್ಧಿ ಮಂಡಳಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ರಾಯಲ್ ಕನಾರ್ಡ್ ಶಾಲೆಯಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಲು ಅಸಹಾಯಕರಾದ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ಶುಲ್ಕ ವಿಚಾರದಲ್ಲಿ ನಡೆದ ಪ್ರಕರಣಗಳು ದುರದೃಷ್ಟಕರ. ಸಾಮಾಜಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಇಂತಹ ಪ್ರಕರಣಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕುಂದಿಸುವುದರ ಜತೆಗೆ, ರಾಷ್ಟ್ರದ ಭವಿಷ್ಯದ ಹಿತದೃಷ್ಟಿಯಿಂದ ಕೂಡ ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಹೇಳಿದ್ದಾರೆ.
ಶಾಲಾ ಆಡಳಿತ ಮಂಡಳಿಗಳು ಮತ್ತು ಪೋಷಕರ ನಡುವಿನ ಈ ರೀತಿಯ ಸಂಘರ್ಷಗಳು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ, ಅವರ ಹಿತದೃಷ್ಟಿಯಿಂದ ಇಂತಹ ಪ್ರಕರಣಗಳಿಗೆ ಅವಕಾಶ ನೀಡದಂತೆ ವರ್ತಿಸಬೇಕಾದ ಅಗತ್ಯವನ್ನು ನಾನು ಪದೇ ಪದೇ ಹೇಳಿದ್ದೇನೆ. ಈ ಮೊದಲು ಬೆಂಗಳೂರಿನ ಕೋರಮಂಗಲದಲ್ಲಿಯೂ ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬನನ್ನು ಹೀಗೆಯೇ ನಡೆಸಿಕೊಂಡಿದ್ದರಿಂದ ಆತ ಆತ್ಮಹತ್ಯೆಗೆ ಪ್ರಯತ್ನಿಸಿದ್ದನ್ನೂ ನಾವೆಲ್ಲ ಯೋಚಿಸಬೇಕಿದೆ. ಇಂತಹ ಪ್ರಕರಣಗಳು ಎಷ್ಟು ಆಘಾತಕಾರಿ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.
Recommended Video
ಅರಿಸೂಕ್ಷ್ಮ ವಿಷಯವನ್ನು ನಾಜೂಕಿನಿಂದ ನಿರ್ವಹಿಸಬೇಕಾದ ಅಂಶವನ್ನು ಹೈಕೋರ್ಟ್ ಒತ್ತಿ ಹೇಳಿದೆ. ಎಲ್ಲ ಖಾಸಗಿ ಶಾಲೆಗಳೂ ಮಕ್ಕಳ ಹಿತ ಗಮನದಲ್ಲಿರಿಸಿಕೊಂಡು ಬಹಳ ಸಂವೇದನೆಯಿಂದ ವರ್ತಿಸಬೇಕು. ಕೊರೊನಾದ ಈ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ನಡೆಯಬೇಕಾದ ಅಗತ್ಯ ಹೆಚ್ಚಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.