ಮಕ್ಕಳು ಶಾಲೆಗೆ ಬರದಂತೆ ದಾರಿ ಬಂದ್: ಸುರೇಶ್ ಕುಮಾರ್ ಭೇಟಿ
ಬೆಂಗಳೂರು, ಫೆ. 25: ಮಕ್ಕಳು ಶಾಲೆಗೆ ತೆರಳದಂತೆ ಖಾಸಗಿ ವ್ಯಕ್ತಿಗಳು ದಾರಿಯನ್ನು ಬಂದ್ ಮಾಡಿದ್ದ ಶಾಲೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ. ಬೆಂಗಳೂರಿನ ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಜ್ಞಾನ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಗುರುವಾರ ಭೇಟಿ ನೀಡಿ ಶಾಲೆಯ ಕಾಲುದಾರಿ ಮುಚ್ಚಿದ್ದ ಪ್ರದೇಶವನ್ನು ಪರಿಶೀಲಿಸಿದರು.
ಶಾಲಾ ಶುಲ್ಕ: ಪೋಷಕರು-ಶಿಕ್ಷಕರಿಗೆ ಅನುಕೂಲವಾಗುವ ಸೂತ್ರ ಪ್ರಕಟಿಸಿದ ಸುರೇಶ್ ಕುಮಾರ್!
ವಿಜ್ಞಾನ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗಲು ಮಕ್ಕಳು ಉಪಯೋಗಿಸುತ್ತಿದ್ದ ಕಾಲುದಾರಿಯನ್ನು ಕೆಲ ಖಾಸಗಿ ವ್ಯಕ್ತಿಗಳು ಅಡ್ಡಗೋಡೆ ಕಟ್ಟಿ ದಾರಿ ಬಂದ್ ಮಾಡಿದ್ದರು. ಆ ಕುರಿತು ವರದಿ ತರಿಸಿಕೊಂಡಿದ್ದ ಸಚಿವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದಾಗಲೇ ಸ್ಥಳೀಯ ತಹಶೀಲ್ದಾರರು ಗೋಡೆಯನ್ನು ಒಡೆದು ಮಕ್ಕಳು ಶಾಲೆಗೆ ಹೋಗಿ ಬರಲು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಶಾಲಾ ದಾರಿಯನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸಲು ಕೈಗೊಂಡಿರುವ ಕ್ರಮಗಳ ಕುರಿತು ಸುರೇಶ್ ಕುಮಾರ್ ವಿಚಾರಿಸಿದರು.
Recommended Video
ಶಾಲೆಯ ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಸುರೇಶ್ ಕುಮಾರ್, ಈ ರೀತಿಯ ಘಟನೆಗಳು ಮರುಕಳಿಸದಂತೆ ಗಮನ ಹರಿಸಬೇಕೆಂದು ಸೂಚಿಸಿದರು. ಮಕ್ಕಳಿಗೆ ತೊಂದರೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ.